ಮೈದಾನ ಒಣಗಿಸಲು ಇಸ್ತ್ರೀ ಬಾಕ್ಸ್, ವ್ಯಾಕ್ಯೂಮ್ ಕ್ಲೀನರ್ ಬಳಸಿ ಟ್ರೋಲ್ ಆದ ಬಿಸಿಸಿಐ
Team Udayavani, Jan 6, 2020, 12:36 PM IST
ಗುವಾಹಟಿ: ಬರ್ಸಾಪಾರ ಮೈದಾನದಲ್ಲಿ ಭಾನುವಾರ ಕಂಡುಬಂದಿದ್ದು ಅತ್ಯಂತ ಅಚ್ಚರಿಯ ದೃಶ್ಯಗಳು. ಯಾವುದೇ ಅಂಕಣ ಮಳೆಯಿಂದ ತೊಂದರೆಗೊಳಗಾದರೆ, ಅಂಕಣವನ್ನು ಮೊದಲು ಭಾರೀ ಮ್ಯಾಟ್ಗಳಿಂದ ಮುಚ್ಚುತ್ತಾರೆ. ಮಳೆ ನಿಂತ ನಂತರ ಸೂಪರ್ ಸಾಪರ್ ಬಳಸಿ, ನೀರನ್ನು ಹೊರಹಾಕುತ್ತಾರೆ. ಜೊತೆಗೆ ಅಂಕಣ ಒಣಗಿಸುವ ಯಂತ್ರಗಳನ್ನು ಬಳಸುತ್ತಾರೆ.
ಭಾನುವಾರ ಗುವಾಹಟಿಯಲ್ಲಿ ಇದಕ್ಕೆ ತದ್ವಿರುದ್ಧ ಪರಿಸ್ಥಿತಿ ಕಂಡುಬಂತು. ಇಸ್ತ್ರೀ ಬಾಕ್ಸ್ ಇಟ್ಟು ಅಂಕಣವನ್ನುಒಣಗಿಸುವ ಯತ್ನ ನಡೆಸಿದರು. ಅಷ್ಟು ಮ್ಯಾತ್ರವಲ್ಲ ವ್ಯಾಕ್ಯೂಮ್ ಕ್ಲೀನರ್ ಬಳಸಿ, ಕಸವನ್ನು ತೆಗೆಯುವುದು ಕಂಡುಬಂತು. ಇಂತಹ ದುಸ್ಥಿತಿ ಎದುರಾಗುವುದಕ್ಕೆ ಕಾರಣ, ಅಂಕಣದಲ್ಲಿ ವಿಪರೀತ ಸಣ್ಣಸಣ್ಣ ಗುಳಿ ಬಿದ್ದಿದ್ದು!
ಆ ಗುಳಿಯಿಂದ ಕಸ ಹೊರತೆಗೆದು, ಅದಕ್ಕೆ ಮಣ್ಣು ತುಂಬಿ ಗಟ್ಟಿ ಮಾಡಲು ಸಿಬ್ಬಂದಿ ಹರಸಾಹಸ ಮಾಡಿದರು. ಆದರೆ ಈ ದುಸ್ಥಿತಿಯ ನೇರಪ್ರಸಾರ ನೋಡಿದವರಿಗೆ, ಬರ್ಸಾಪಾರ ಮೈದಾನದ ಹೀನಸ್ಥಿತಿಯನ್ನು ಕನ್ನಡಿಯಲ್ಲಿ ನೋಡಿದಂತಹ ಅನುಭವ. ಅಂಕಣವನ್ನು ಸರಿಪಡಿಸಲು ಈ ರೀತಿಯ ತಂತ್ರಗಾರಿಕೆಗಳನ್ನು ಬಳಸಿರುವುದು ಆಧುನಿಕ ಕಾಲಘಟ್ಟದಲ್ಲಿ ಬಹುಶಃ ಇದೇ ಮೊದಲು ಎಂದು ಕಾಣುತ್ತದೆ. ಈ ಮೈದಾನವನ್ನು ಅಸ್ಸಾಂ ಕ್ರಿಕೆಟ್ ಮಂಡಳಿ, ಬಿಸಿಸಿಐ ನಿರ್ವಹಿಸಿದ ರೀತಿ ಭಾರೀ ಟೀಕೆ ಎದುರಾಗಿದೆ.