ಶ್ರೀಲಂಕಾ ಕೋಚ್ ಮೇಲೆ ತೂಗುಗತ್ತಿ
Team Udayavani, Jul 20, 2019, 5:08 AM IST
ಕೊಲಂಬೊ: ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಶ್ರೀಲಂಕಾ ತಂಡದ ಕೋಚ್ ಚಂಡಿಕ ಹತುರಸಿಂಘ ಮೇಲೆ ತೂಗುಗತ್ತಿ ನೇತಾಡಲಾರಂಭಿಸಿದೆ.
ಕ್ರೀಡಾ ಸಚಿವಾಲಯವು ಅವರನ್ನು ಈ ಹುದ್ದೆಯಿಂದ ಕೆಳಗಿಳಿಸುವ ಸಾಧ್ಯತೆ ದಟ್ಟವಾಗಿದೆ.
ಶ್ರೀಲಂಕಾ ಕಳೆದ ವಿಶ್ವಕಪ್ನಲ್ಲಿ ಕೇವಲ 3 ಪಂದ್ಯಗಳನ್ನಷ್ಟೆ ಗೆದ್ದು ಲೀಗ್ ಹಂತದಿಂದಲೇ ಹೊರಬಿದ್ದಿತ್ತು.
ಕಿರು ಪ್ರವಾಸಕ್ಕಾಗಿ ಬಾಂಗ್ಲಾದೇಶ ತಂಡ ಶನಿವಾರ ಕೊಲಂಬೊಗೆ ಬಂದಿಳಿಯಲಿದೆ. ಜು 26ರಿಂದ ಆ. ಒಂದರ ತನಕ ಸರಣಿ ನಡೆಯಲಿದೆ. ಎ. 21ರ ಭೀಕರ ಮಾನವ ಬಾಂಬ್ ದಾಳಿ ಬಳಿಕ ಲಂಕೆಯಲ್ಲಿ ಆಡಲು ಆಗಮಿಸಿದ ಮೊದಲ ತಂಡವೆಂಬುದು ಉಲ್ಲೇಖನೀಯ. ಈ ಸರಣಿ ಮುಗಿದ ಬಳಿಕ ವಿಶ್ವಕಪ್ ವೈಫಲ್ಯ, ಕೋಚ್ ಅವಧಿಯಲ್ಲಿ ಸಾಧಿಸಲಾದ ತಂಡದ ಪ್ರಗತಿ ಬಗ್ಗೆ ಮಾಹಿತಿ ನೀಡುವಂತೆ ಹತುರಸಿಂಘ ಅವರಿಗೆ ಕ್ರೀಡಾ ಸಚಿವ ಹ್ಯಾರಿನ್ ಫೆರ್ನಾಂಡೊ ಸೂಚಿಸಿದ್ದಾರೆ.ಕ್ರೀಡಾ ಸಚಿವರ ಈ ನಡೆಯನ್ನು ಗಮನಿಸಿದರೆ ಶೀಘ್ರವೇ ಶ್ರೀಲಂಕಾ ತಂಡಕ್ಕೆ ಹೊಸ ತರಬೇತುದಾರನನ್ನು ನೇಮಿಸುವ ಸಾಧ್ಯತೆ ಹೆಚ್ಚಿದೆ.