ದೀಪ್ತಿ ಶರ್ಮ ರನೌಟ್ ಪ್ರಕರಣ: ನಾವೇನೂ ಅಪರಾಧ ಮಾಡಿಲ್ಲ: ಹರ್ಮನ್ಪ್ರೀತ್ ಕೌರ್
Team Udayavani, Sep 26, 2022, 8:05 AM IST
ಲಂಡನ್: “ದೀಪ್ತಿ ಶರ್ಮ ಮಾಡಿದ ರನೌಟ್ ಬಗ್ಗೆ ಬಹಳ ಚರ್ಚೆ ಆಗುತ್ತಿದೆ. ಆದರೆ ನಾವು ಮಾಡಿದ್ದು ಖಂಡಿತವಾಗಿಯೂ ಅಪರಾಧವಲ್ಲ’ ಎಂಬುದಾಗಿ ಟೀಮ್ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಕೌರ್ ಟೀಕಾಕಾರರಿಗೆ ಚಾಟಿ ಬೀಸಿದ್ದಾರೆ.
“ಇದು ಕ್ರಿಕೆಟಿನ ಒಂದು ಭಾಗ. ಐಸಿಸಿ ನಿಯಮಾವಳಿಗೆ ಬದ್ಧವಾಗಿದೆ. ಈ ಸಂದರ್ಭದಲ್ಲಿ ನಮ್ಮ ಆಟಗಾರ್ತಿಯರನ್ನು ಬೆಂಬಲಿಸುವುದು ನನ್ನ ಕರ್ತವ್ಯ. ದೀಪ್ತಿ ಶರ್ಮ ಅವರ ಈ ಕ್ರಮ ಸರಿಯಾಗಿಯೇ ಇದೆ. ನನಗೆ ಬಹಳ ಖುಷಿಯಾಗಿದೆ’ ಎಂದು ಕೌರ್ ಹೇಳಿದರು.
“ಈ ವಿವಾದದಿಂದ ಜೂಲನ್ ಗೋಸ್ವಾಮಿ ಅವರ ವಿದಾ ಯದ ಹೊಳಪೇನೂ ಮಾಸಲಿಲ್ಲ. ಲೆಜೆಂಡ್ ಯಾವತ್ತಿಗೂ ಲೆಜೆಂಡ್ ಆಗಿರುತ್ತಾರೆ’ ಎಂದೂ ಕೌರ್ ಹೇಳಿದರು.
ಮುಂದೋಡಿದ ಡೀನ್
170 ರನ್ನುಗಳ ಸಣ್ಣ ಮೊತ್ತದ ಚೇಸಿಂಗ್ ವೇಳೆ ಇಂಗ್ಲೆಂಡ್ ತೀವ್ರ ಕುಸಿತ ಅನುಭವಿಸಿ ಸೋಲನ್ನು ಖಾತ್ರಿಗೊಳಿಸಿತ್ತು. ಆಗ ಅಂತಿಮ ವಿಕೆಟಿಗೆ ಜತೆಗೂಡಿದ ಚಾರ್ಲೋಟ್ ಡೀನ್ ಮತ್ತು ಫ್ರೆàಯಾ ಡೇವಿಸ್ ಹೋರಾಟ ಸಂಘಟಿಸಿ ಗೆಲುವಿನ ಸಾಧ್ಯತೆಯೊಂದನ್ನು ತೆರೆದಿರಿಸಿದರು. ಕೊನೆಯಲ್ಲಿ 44ನೇ ಓವರ್ ಎಸೆಯಲು ಬಂದ ದೀಪ್ತಿ ಶರ್ಮ, 3ನೇ ಎಸೆತದಲ್ಲಿ ಡೀನ್ ಅವರನ್ನು “ಮಂಕಡ್’ ಮಾದರಿಯಲ್ಲಿ ರನೌಟ್ ಮಾಡಿದರು. ದೀಪ್ತಿ ಚೆಂಡನ್ನೆಸೆಯುವ ಮೊದಲೇ ನಾನ್ ಸ್ಟ್ರೈಕಿಂಗ್ ತುದಿಯಲ್ಲಿದ್ದ ಡೀನ್ ಕ್ರೀಸ್ ಬಿಟ್ಟು ಅದೆಷ್ಟೋ ಮುಂದಿದ್ದರು.
ನಿಜಕ್ಕಾದರೆ ಮೈದಾನದ ಅಂಪಾಯರ್ಗಳಾದ ಅನ್ನಾ ಹ್ಯಾರಿಸ್ ಮತ್ತು ಮೈಕ್ ಬರ್ನ್ಸ್ ಔಟ್ ತೀರ್ಪು ನೀಡಬಹುದಿತ್ತು. ಅವರು ಥರ್ಡ್ ಅಂಪಾಯರ್ ಮೊರೆಹೋದರು. ಇಲ್ಲಿ ಔಟ್ ತೀರ್ಪು ಬಂತು. ಭಾರತ ವೈಟ್ವಾಶ್ ಸಂಭ್ರಮ ಆಚರಿಸಿದರೆ, ಡೀನ್ ಕಣ್ಣೀರು ಸುರಿಸಿದರು.
ಈ ತೀರ್ಪಿಗೆ ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2019ರಲ್ಲಿ ಬೌಂಡರಿ ಲೆಕ್ಕಾಚಾರದಲ್ಲಿ ಏಕದಿನ ವಿಶ್ವಕಪ್ ಗೆದ್ದಾಗ “ಅದು ನಿಯಮಾವಳಿಯಲ್ಲಿದೆ’ ಎಂದು ಸಮರ್ಥಿಸಿಕೊಂಡ ಇಂಗ್ಲೆಂಡಿಗರು, ಈ ನಿಯಮಬದ್ಧ ರನೌಟ್ ವಿಧಾನವನ್ನು ಒಪ್ಪಿಕೊಳ್ಳುವುದಿಲ್ಲವೇಕೆ ಎಂಬುದೇ ಇಲ್ಲಿನ ಪ್ರಶ್ನೆ!