ಹುಬ್ಬಳ್ಳಿ ಟೈಗರ್ಸ್ಗೆ ಕೆಪಿಎಲ್ ಕಿರೀಟ
ಟೈಗರ್ಸ್ಗೆ ಎಂಟು ರನ್ ಜಯ, ಬಳ್ಳಾರಿ ರನ್ನರ್ಅಪ್
Team Udayavani, Sep 2, 2019, 5:41 AM IST
ಮೈಸೂರು: ಕೆಪಿಎಲ್ನ ಎಂಟನೇ ಆವೃತ್ತಿಯ ಟಿ20 ಪ್ರಶಸ್ತಿಯನ್ನು ಹುಬ್ಬಳ್ಳಿ ಟೈಗರ್ಸ್ ತನ್ನದಾಗಿಸಿಕೊಂಡಿದೆ. ಶನಿವಾರ ಸಾಂಸ್ಕೃತಿಕ ನಗರಿಯಲ್ಲಿ ನಡೆದ ಫೈನಲ್ನಲ್ಲಿ ಹುಬ್ಬಳ್ಳಿ ತಂಡವು ಬಳ್ಳಾರಿ ಟಸ್ಕರ್ಸ್ ವಿರುದ್ಧ ರೋಚಕ 8 ರನ್ನುಗಳ ಜಯ ಸಾಧಿಸಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಹುಬ್ಬಳ್ಳಿ 20 ಓವರ್ಗಳಲ್ಲಿ 6 ವಿಕೆಟಿಗೆ 152 ರನ್ ಗಳಿಸಿತ್ತು. 153 ರನ್ ಜಯದ ಗುರಿ ಬೆನ್ನಟ್ಟಿದ ಬಳ್ಳಾರಿ ಟಸ್ಕರ್ಸ್ ದೇವದತ್ತ ಪಡೀಕ್ಕಲ್ (68 ರನ್) ಅವರ ಏಕಾಂಗಿ ಹೋರಾಟದ ಹೊರತಾಗಿಯೂ ಸೋಲು ಕಂಡಿತು. ಅಭಿಲಾಷ್ ಶೆಟ್ಟಿ (34ಕ್ಕೆ 3), ಆದಿತ್ಯ ಸೋಮಣ್ಣ (24ಕ್ಕೆ 3) ಹುಬ್ಬಳ್ಳಿ ಜಯದಲ್ಲಿ ಮಿಂಚಿದರು.ವಿಜೇತ ಹುಬ್ಬಳ್ಳಿ ತಂಡ 10 ಲಕ್ಷ ರೂ. ನಗದು ಹಾಗೂ ಟ್ರೋಫಿ ಪಡೆಯಿತು. ರನ್ನರ್ಅಪ್ ಬಳ್ಳಾರಿ 5 ಲಕ್ಷ ರೂ. ನಗದು ಹಾಗೂ ಟ್ರೋಫಿ ಪಡೆದುಕೊಂಡಿತು.
ಸೋಮಣ್ಣ ಬ್ಯಾಟಿಂಗ್ ನೆರವು
ಟಾಸ್ ಗೆದ್ದ ಹುಬ್ಬಳ್ಳಿ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ನಿರೀಕ್ಷೆಗೆ ತಕ್ಕಂತೆ ರನ್ ಹರಿದುಬರಲಿಲ್ಲ. ಇದಕ್ಕೆ ಬಳ್ಳಾರಿ ತಂಡದ ಬಿಗು ಬೌಲಿಂಗ್ ಕಾರಣ. ಹುಬ್ಬಳ್ಳಿ ಪರ ಮಿಂಚಿದ್ದು ಆದಿತ್ಯ ಸೋಮಣ್ಣ. ಆರಂಭಕಾರರಾಗಿ ಬ್ಯಾಟಿಂಗ್ ನಡೆಸಿದ ಅವರು 38 ಎಸೆತಗಳಲ್ಲಿ 47 ರನ್ ಗಳಿಸಿದರು. ಇದರಲ್ಲಿ ಯಾವುದೇ ಬೌಂಡರಿಯಿರಲಿಲ್ಲ. ಆದರೆ 2 ಸಿಕ್ಸರ್ ಇದ್ದವು. ಬಳ್ಳಾರಿ ಪರ ಕೆ.ಪಿ.ಅಪ್ಪಣ್ಣ 19 ರನ್ ನೀಡಿ 2 ವಿಕೆಟ್ ಕಿತ್ತರು.