ಸೋಲಿಗೆ ನಾನೇ ಕಾರಣ ಎಂದ ಶೇನ್ ವಾಟ್ಸನ್
Team Udayavani, Apr 12, 2017, 3:09 PM IST
ಇಂದೋರ್: “ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ಸೋಲಿಗೆ ನಾನೇ ಕಾರಣ…’
ಈ ಹೇಳಿಕೆ ನೀಡಿದವರು ಬೇರೆ ಯಾರೂ ಅಲ್ಲ, ತಂಡದ ಉಸ್ತುವಾರಿ ನಾಯಕ ಶೇನ್ ವಾಟ್ಸನ್. ಸೋಮವಾರ ರಾತ್ರಿ ಇಂದೋರ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 8 ವಿಕೆಟ್ ಅಂತರದ ಸೋಲನುಭವಿಸಿದ ಬಳಿಕ ವಾಟ್ಸನ್ ಈ ಹೇಳಿಕೆ ನೀಡಿದ್ದಾರೆ.
“ನಾನು ಉತ್ತಮ ಆರಂಭ ಒದಗಿಸಲು ವಿಫಲನಾದೆ. ಮೊದಲ ಓವರಿನಲ್ಲೇ ಔಟಾದೆ. ಇದರಿಂದ ತಂಡದ ಮೇಲೆ ಒತ್ತಡ ಬಿತ್ತು. ಹೀಗಾಗಿ ಈ ಸೋಲಿಗೆ ನಾನೇ ಹೊಣೆ ಹೊರುತ್ತಿದ್ದೇನೆ…’ ಎಂದು ವಾಟ್ಸನ್ ಹೇಳಿದರು.
ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 4 ವಿಕೆಟಿಗೆ ಕೇವಲ 148 ರನ್ ಗಳಿಸಿದರೆ, ಪಂಜಾಬ್ 14.3 ಓವರ್ಗಳಲ್ಲಿ ಎರಡೇ ವಿಕೆಟಿಗೆ 150 ರನ್ ಬಾರಿಸಿ ಸತತ 2ನೇ ವಿಜಯೋತ್ಸವ ಆಚರಿಸಿತು. ಹಾಗೆಯೇ, ಇದು 3 ಪಂದ್ಯಗಳಲ್ಲಿ ಆರ್ಸಿಬಿಗೆ ಎದುರಾದ 2ನೇ ಸೋಲು.
“ಉತ್ತಮ ಮೊತ್ತ ಪೇರಿಸುವ ನಿರೀಕ್ಷೆಯಲ್ಲಿ ನಾವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದೆವು. ಆದರೆ ಇದರಲ್ಲಿ ಯಶಸ್ಸು ಸಿಗಲಿಲ್ಲ. ಈ ಟ್ರ್ಯಾಕ್ನಲ್ಲಿ ಕನಿಷ್ಠ 170 ರನ್ನಾದರೂ ಒಟ್ಟು ಗೂಡಬೇಕಿತ್ತು. ಡಿ ವಿಲಿಯರ್ ಸ್ಫೋಟಿಸದೇ ಹೋಗಿದ್ದರೆ ನಾವು ಇನ್ನಷ್ಟು ಕೆಳ ಮಟ್ಟಕ್ಕೆ ಇಳಿಯುತ್ತಿದ್ದೆವು…’ ಎಂದು ವಾಟ್ಸನ್ ಹೇಳಿದರು.
ಮೊದಲ ಪಂದ್ಯದಲ್ಲೇ ಎಬಿಡಿ ಮಿಂಚು
ದಕ್ಷಿಣ ಆಫ್ರಿಕಾದ ಸಿಡಿಲಬ್ಬರ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್ ತಂಡವನ್ನು ಸೇರಿಕೊಂಡ ಖುಷಿಯಲ್ಲಿ ಆರ್ಸಿಬಿ ಆಡಲಿಳಿದಿತ್ತು. ವಿಪರ್ಯಾಸವೆಂದರೆ, ಎಬಿಡಿ ಹೊರತುಪಡಿಸಿ ಉಳಿದವರ್ಯಾರೂ ಬ್ಯಾಟಿಂಗಿನಲ್ಲಿ ಕ್ಲಿಕ್ ಆಗಲಿಲ್ಲ. 15 ಓವರ್ ಮುಗಿಯುವಾಗ ತಂಡದ ಮೊತ್ತ ಕೇವಲ 71 ರನ್ ಆಗಿತ್ತು. ಉಳಿದ 77 ರನ್ ಸಿಡಿದದ್ದೇ ಕೊನೆಯ 5 ಓವರ್ಗಳಲ್ಲಿ!
ಎಂದಿನ ಸ್ಫೋಟಕ ಬ್ಯಾಟಿಂಗಿಗೆ ಮುಂದಾದ ಎಬಿಡಿ 15ನೇ ಓವರ್ ಬಳಿಕ ಪಂಜಾಬ್ ಮೇಲೆ ಘಾತಕವಾಗಿ ಎರಗಿದರು. 15ನೇ ಓವರ್ ಮುಕ್ತಾಯಕ್ಕೆ 31 ರನ್ (2 ಬೌಂಡರಿ, 1 ಸಿಕ್ಸರ್) ಮಾಡಿ ಆಡುತ್ತಿದ್ದ ಎಬಿಡಿ, 20ನೇ ಓವರ್ ಮುಗಿಯುವಾಗ ಅಜೇಯ 89ರಲ್ಲಿದ್ದರು. 48 ಎಸೆತಗಳ ಈ ಅಮೋಘ ಆಟದ ವೇಳೆ 9 ಸಿಕ್ಸರ್, 3 ಬೌಂಡರಿ ಸಿಡಿಯಲ್ಪಟ್ಟಿತು.ಈ ಪಂದ್ಯಕ್ಕಾಗಿ ಆರ್ಸಿಬಿ ಮತ್ತೂಬ್ಬ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರನ್ನು ಕೈಬಿಟ್ಟಿತ್ತು.