ನಾನು ಯಾರಿಗೂ ಏನನ್ನೂ ಸಾಬೀತು ಮಾಡಬೇಕಿಲ್ಲ!
Team Udayavani, Sep 23, 2018, 7:00 AM IST
ದುಬೈ: ಹೆಚ್ಚು ಕಡಿಮೆ ಒಂದೂವರೆ ವರ್ಷದ ನಂತರ ರವೀಂದ್ರ ಜಡೇಜ ಮತ್ತೆ ಭಾರತ ಸೀಮಿತ ಓವರ್ಗಳ ಕ್ರಿಕೆಟ್ ತಂಡದಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಅಕ್ಷರ್ ಪಟೇಲ್ ಗಾಯಗೊಂಡ ಕಾರಣ ಏಷ್ಯಾಕಪ್ ತಂಡಕ್ಕೆ ಅವರನ್ನು ಆಯ್ಕೆ ಮಾಡಿದೆ. ಶುಕ್ರವಾರ ಸಿಕ್ಕಿದ ಅವಕಾಶದಲ್ಲೇ ಮಿಂಚಿದ ಅವರು ಬಾಂಗ್ಲಾ ವಿರುದ್ಧ 4 ವಿಕೆಟ್ ಕಿತ್ತು ಪಂದ್ಯಶ್ರೇಷ್ಠರಾದರು. ಅದರ ಬೆನ್ನಲ್ಲೇ ನಾನು ಯಾರಿಗೂ, ಏನನ್ನೂ ಸಾಬೀತು ಮಾಡಬೇಕಿಲ್ಲ ಎಂಬ ದಿಟ್ಟ ಹೇಳಿಕೆಯನ್ನೂ ನೀಡಿದ್ದಾರೆ. ಈ ಹೇಳಿಕೆ ಮಹತ್ವ ಪಡೆದಿದೆ.
“ನಾನು ಮತ್ತೆ ತಂಡಕ್ಕೆ ಮರಳಿದ ಈ ಸಂದರ್ಭವನ್ನು ಯಾವಾಗಲೂ ನೆನಪಿಟ್ಟುಕೊಳ್ಳುತ್ತೇನೆ. ನಾನು 480 ದಿನಗಳ ನಂತರ ತಂಡಕ್ಕೆ ಮರಳಿದ್ದೇನೆ. ಹಿಂದೆ ತಂಡಕ್ಕೆ ಮರಳಿದ್ದಾಗ ಇಷ್ಟು ದೀರ್ಘ ಅಂತರವಿರಲಿಲ್ಲ. ಸದ್ಯಕ್ಕೆ ನನ್ನ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕಿದೆ. ನಾನೇನು ಮಾಡಬಲ್ಲೆನೆಂದು ಯಾರಿಗೂ ತೋರಿಸುವ ಅಗತ್ಯವಿಲ್ಲ. ನಾನು ನನಗೆ ಸವಾಲನ್ನು ಒಡ್ಡಿಕೊಳ್ಳಬೇಕಿದೆ’ ಎಂದು ಹೇಳಿದ್ದಾರೆ.
ಜಡೇಜ ಈ ಹೇಳಿಕೆ ಸ್ವಲ್ಪ ಕಠಿಣವಾಗಿದೆ. ಜೊತೆಗೆ ನೋವೂ ಇದೆ. ಜೊತೆಗೆ ಯಾವುದಕ್ಕೂ ತಾನು ಹೆದರುವುದಿಲ್ಲ ಎಂಬ ಸಂದೇಶವೂ ಇದೆ. ಇದು ಭಾರತ ಕ್ರಿಕೆಟ್ನ ಹಿರಿಯಣ್ಣಂದಿರನ್ನೇ ಗುರಿಯಾಗಿಸಿಕೊಂಡಿದೆ ಎಂದು ಊಹಿಸಲಾಗಿದೆ. ಉತ್ತಮ ಫಾರ್ಮ್ನಲ್ಲಿದ್ದಾಗಲೇ ಅವರು ಸೀಮಿತ ಓವರ್ಗಳ ತಂಡದಿಂದ ಹೊರಬಿದ್ದರು. ಅವರ ಬ್ಯಾಟಿಂಗ್ ವೈಫಲ್ಯ ಇದಕ್ಕೆ ಕಾರಣವಾಯಿತು. ಮತ್ತೆ ಅವರು ತಂಡಕ್ಕೆ ಮರಳಲೇ ಇಲ್ಲ. ಟೆಸ್ಟ್ ತಂಡದ ಭಾಗವಾಗಿದ್ದರೂ ಮೊನ್ನೆ ಇಂಗ್ಲೆಂಡ್ ಪ್ರವಾಸದಲ್ಲಿ ಅವರಿಗೆ ಬಹುತೇಕ ಆಡಲು ಅವಕಾಶವೇ ಸಿಗಲಿಲ್ಲ.
ಈ ಎಲ್ಲವೂ ಜಡೇಜ ಅವರನ್ನು ನೋಯಿಸಿದೆ. ಸಾಮರ್ಥ್ಯವಿದ್ದರೂ ತನ್ನನ್ನು ಕಡೆಗಣಿಸಲಾಗಿದೆ ಎಂಬ ಕಾರಣದಿಂದ ಅವರು ನೊಂದಿಕೊಂಡಿರುವ ಸಾಧ್ಯತೆಯಿದೆ. ಅದನ್ನು ಪರೋಕ್ಷವಾಗಿ ಹೀಗೆ ಹೊರಹಾಕಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.