ಸ್ಪಿನ್ನರ್ಗಳ ಪಾತ್ರವೂ ನಿರ್ಣಾಯಕ: ಮಣಿಂದರ್, ಪ್ರಸನ್ನ
Team Udayavani, Jul 29, 2018, 11:32 AM IST
ಹೊಸದಿಲ್ಲಿ: ಇಂಗ್ಲೆಂಡ್ ಸರಣಿಯ ವೇಳೆ ಸೀಮ್ ಬೌಲರ್ಗಳು ಮೇಲುಗೈ ಸಾಧಿಸಬಹುದು, ಆದರೆ ಸ್ಪಿನ್ನರ್ಗಳ ಪಾತ್ರವೂ ನಿರ್ಣಾ ಯಕವಾಗಲಿದೆ ಎಂದು ಭಾರತದ ಮಾಜಿ ಸ್ಪಿನ್ನರ್ಗಳಾದ ಇಎಎಸ್ ಪ್ರಸನ್ನ ಹಾಗೂ ಮಣಿಂದರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
“ಪ್ರಸಕ್ತ ಫಾರ್ಮ್ ಮತ್ತು ಲಯ ಭಾರತದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೊದಲ ಟೆಸ್ಟ್ ಪಂದ್ಯಕ್ಕೆ ಇಬ್ಬರು ಸ್ಪಿನ್ನರ್ಗಳನ್ನು ಆಡಿಸುವುದು ಸೂಕ್ತ. ಆಗ ಆರ್. ಅಶ್ವಿನ್ ಮತ್ತು ಕುಲದೀಪ್ ಯಾದವ್ ಅವರಿಗೆ ಅವಕಾಶ ಕಲ್ಪಿಸುವುದು ಒಳ್ಳೆಯದು. ವಿದೇಶಿ ನೆಲದಲ್ಲಿ ವಿಕೆಟ್ ಕೀಳುವವರ ಅಗತ್ಯ ಹೆಚ್ಚಿದೆ. ಇವರಿಬ್ಬರಲ್ಲೂ ಈ ಸಾಮರ್ಥ್ಯ ಇದೆ. ರವೀಂದ್ರ ಜಡೇಜ ಮೀಸಲು ಸ್ಪಿನ್ನರ್ ಆಗಿ ಉಳಿಯಬಹುದು. ಇಂಗ್ಲೆಂಡ್ ಕೂಡ ಅವಳಿ ಸ್ಪಿನ್ ದಾಳಿ ಸಂಘಟಿಸುವ ಸಾಧ್ಯತೆ ಇದೆ’ ಎಂದು ಮಣಿಂದರ್ ಸಿಂಗ್ ಹೇಳಿದರು. 1986ರ ಇಂಗ್ಲೆಂಡ್ ಪ್ರವಾಸದ ವೇಳೆ ಮಣಿಂದರ್ ಸಿಂಗ್ 15.58 ಸರಾಸರಿಯಲ್ಲಿ 12 ವಿಕೆಟ್ ಕಿತ್ತು ಭಾರತದ 2-0 ಸರಣಿ ಜಯಭೇರಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಹವಾಮಾನ ಕೂಡ ಸಹಕಾರಿ
ಭಾರತದ ಲೆಜೆಂಡ್ರಿ ಸ್ಪಿನ್ನರ್ ಇಎಎಸ್ ಪ್ರಸನ್ನ ಕೂಡ ಸ್ಪಿನ್ ಯಶಸ್ಸಿನ ಬಗ್ಗೆ ಮಾತಾಡಿದರು. “ಇಂಗ್ಲೆಂಡಿನ ಹವಾಮಾನ ಕೂಡ ಸ್ಪಿನ್ನಿಗೆ ಸಹಕಾರಿ. ಅಶ್ವಿನ್, ಕುಲದೀಪ್ ಇದರ ಲಾಭವೆತ್ತಬಹುದೆಂಬ ನಂಬಿಕೆ ಇದೆ. ಅಶ್ವಿನ್ ವೂರ್ಸೆಸ್ಟರ್ಶೈರ್ ಪರ ಸಾಕಷ್ಟು ವಿಕೆಟ್ ಉರುಳಿಸಿದ್ದಾರೆ. ವಿರಾಟ್ ಕೊಹ್ಲಿಯ ಜಾಣ್ಮೆಯ ನಾಯಕತ್ವದ ನೆರವು ಭಾರತಕ್ಕಿದೆ. “ಗೋ ಫಾರ್ ದಿ ಕಿಲ್’ ಎಂಬಂತೆ ಹೋರಾಟ ಸಂಘಟಿಸಬೇಕು. ಆಗ ಇದು ಬ್ಯಾಟ್-ಬಾಲ್ ನಡುವೆ ರೋಚಕ ಹಣಾಹಣಿಯೊಂದನ್ನು ಕಾಣಬಹುದು’ ಎಂದು ಪ್ರಸನ್ನ ಹೇಳಿದರು.
ಗೋ ಫಾರ್ ದಿ ಕಿಲ್’ ಎಂಬಂತೆ ಹೋರಾಟ ಸಂಘಟಿಸಬೇಕು. ಆಗ ಇದು ಬ್ಯಾಟ್-ಬಾಲ್ ನಡುವೆ ರೋಚಕ ಹಣಾಹಣಿಯೊಂದನ್ನು ಕಾಣಬಹುದು.
– ಇಎಎಸ್ ಪ್ರಸನ್ನ