ಸೈನಿ, ಜಡೇಜಾ ಹೋರಾಟ: ಭಾರತಕ್ಕೆ ಸರಣಿ ಸೋಲಿನ ಆಘಾತ
Team Udayavani, Feb 8, 2020, 3:35 PM IST
ಆಕ್ಲಂಡ್: ರವೀಂದ್ರ ಜಡೇಜಾ ಮ್ತತು ನವದೀಪ್ ಸೈನಿ ಬ್ಯಾಟಿಂಗ್ ಸಾಹಸದ ಹೊರತಾಗಿಯೂ ಕಿವೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ಸೋಲನುಭವಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ಸೋತಿದೆ.
ನ್ಯೂಜಿಲ್ಯಾಂಡ್ ನೀಡಿದ 274 ರನ್ ಗುರಿ ಬೆನ್ನಟ್ಟಿದ ಭಾರತ ಪ್ರಮುಖ ಆಟಗಾರರ ಕಳಪೆ ಆಟದ ಕಾರಣ 251 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲನುಭವಿಸಿದೆ.
ಭಾರತದ ಪರ ಶ್ರೇಯಸ್ ಅಯ್ಯರ್ ಮತ್ತು ಜಡೇಜಾ ಅರ್ಧ ಶತಕ ಬಾರಿಸಿದರೆ, ಸೈನಿ 45 ರನ್ ಗಳಿಸಿದರು. ಉಳಿದವರ್ಯಾರು ಹೆಚ್ಚಿನ ಮೊತ್ತ ಕಲೆಹಾಕಲು ಶಕ್ತರಾಗಲಿಲ್ಲ.
ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಗೆ ಮಾರ್ಟಿನ್ ಗಪ್ಟಿಲ್ (79 ರನ್), ಹೆನ್ರಿ ನಿಕೋಲ್ಸ್ (41), ರಾಸ್ ಟೇಲರ್ (ಅಜೇಯ 73) ನೆರವಾದರು. ಅದರಲ್ಲೂ ಎಂಟನೇ ವಿಕೆಟ್ ಗೆ ಟೇಲರ್ ಮತ್ತು ಜಾಮಿಸನ್ 76 ರನ್ ಜೊತೆಯಾಟ ಆಡಿದರು.
ಭಾರತದ ನೂತನ ಆರಂಭಿಕರಿಬ್ಬರು ಮತ್ತೆ ವಿಫಲರಾದರು. ಕೊಹ್ಲಿ, ರಾಹುಲ್ ಬ್ಯಾಟ್ ಕೂಡಾ ಇಂದು ನಡೆಯಲಿಲ್ಲ. 96 ರನ್ ವೇಳೆಗೆ ಭಾರತ ೈದು ವಿಕೆಟ್ ಕಳೆದುಕೊಂಡಿತ್ತು. ಅಯ್ಯರ್ 52 ರನ್ ಗಳಿಸಿದರು.
ಎಂಟನೇ ವಿಕೆಟ್ ಗೆ ಜಡೇಜಾ ಮತ್ತು ಸೈನಿ ಜೊತೆಯಾಟ ಭಾರತಕ್ಕೆ ಗೆಲುವಿನ ಭರವಸೆ ನೀಡಿತ್ತು. ಉತ್ತಮ ಹೊಡೆತಗಳಿಂದ ಮಿಂಚಿದ ಸೈನಿ 45 ರನ್ ಬಾರಿಸಿದರು. ಜಡೇಜಾ 55 ರನ್ ಗಳಿಸಿದರು. ಅಂತಿಮವಾಗಿ ಭಾರತ 22 ರನ್ ಗಳ ಅಂತರದ ಸೋಲನುಭವಿಸಿತು.