ಮಳೆಯಾಟದ ನಡುವೆ ಭಾರತ ಕುಸಿತ
Team Udayavani, Aug 11, 2018, 8:52 AM IST
ಲಂಡನ್: ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೆ ದ್ವಿತೀಯ ದಿನವಾದ ಶುಕ್ರವಾರವೂ ಮಳೆ ಅಪ್ಪಳಿಸಿದೆ. ಆದರೆ ಆಗಾಗ ಲಭಿಸಿದ “ಮಳೆ ವಿರಾಮ’ದಲ್ಲಿ ಭಾರತಕ್ಕೆ ಒಂದಿಷ್ಟು ಬ್ಯಾಟಿಂಗ್ ನಡೆಸುವ ಅವಕಾಶ ಲಭಿಸಿದೆ. ಜತೆಗೆ ಕುಸಿತವೂ ಸಂಭವಿಸಿದೆ. 15 ಓವರ್ಗಳಲ್ಲಿ 34 ರನ್ನಿಗೆ 3 ವಿಕೆಟ್ ಕಳೆದುಕೊಂಡು ಅಂತಿಮ ಅವಧಿಯ ಆಟವನ್ನು ಮುಂದುವರಿಸುತ್ತಿದೆ. ಆದರೆ ಕ್ಯಾಪ್ಟನ್ ಕೊಹ್ಲಿ ಕ್ರೀಸಿನಲ್ಲಿದ್ದಾರೆ (14). ಇವರೊಂದಿಗೆ ಅಜಿಂಕ್ಯ ರಹಾನೆ ಉಳಿದುಕೊಂಡಿದ್ದಾರೆ (7).
ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತಕ್ಕೆ ಮೊದಲ ಓವರಿನಲ್ಲೇ ಜೇಮ್ಸ್ ಆ್ಯಂಡರ್ಸನ್ ಆಘಾತವಿಕ್ಕಿದರು. ಖಾತೆ ತೆರೆಯದ ಮುರಳಿ ವಿಜಯ್ 5ನೇ ಎಸೆತದಲ್ಲಿ ಕ್ಲೀನ್ಬೌಲ್ಡ್ ಆದರು. ಶಿಖರ್ ಧವನ್ ಬದಲು ಆರಂಭಿಕನಾಗಿ ಇಳಿದ ಕೆ.ಎಲ್. ರಾಹುಲ್ ಬಡಬಡನೆ 2 ಬೌಂಡರಿ ಬಾರಿಸಿದರೂ ಎಂಟೇ ರನ್ ಮಾಡಿ “ಆ್ಯಂಡಿ’ಗೆ ಮತ್ತೂಂದು ವಿಕೆಟ್ ಒಪ್ಪಿಸಿದರು.
ಪೂಜಾರ ರನೌಟ್ ಸಂಕಟ !
ಭಾರೀ ನಿರೀಕ್ಷೆ ಮೂಡಿಸಿದ್ದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ತಾನು “ರನೌಟ್ ಸ್ಪೆಷಲಿಸ್ಟ್’ ಎನಿಸಿಕೊಳ್ಳಬೇಕಾಯಿತು. ಆದರೆ ಇದರಲ್ಲಿ ಪೂಜಾರ ಅವರ ತಪ್ಪೇನೂ ಇರಲಿಲ್ಲ. ಪೂಜಾರ ಚೆಂಡನ್ನು ಪಾಯಿಂಟ್ ವಿಭಾಗದತ್ತ ತಳ್ಳಿದರು. ಕೊಹ್ಲಿ ಕರೆಗೆ ಓಗೊಟ್ಟ ಪೂಜಾರ ಓಟ ಆರಂಭಿಸಿದರು, ಆದರೆ ಚೆಂಡು ಒಲಿವರ್ ಪೋಪ್ ಕೈಸೇರಿದ್ದನ್ನು ಕಂಡ ಕೊಹ್ಲಿ “ಬೇಡ’ ಎನ್ನುತ್ತಲೇ ವಾಪಸಾಗಿ ಸುರಕ್ಷಿತವಾಗಿ ಕ್ರೀಸ್ ತಲುಪಿದರು. ಪೂಜಾರ ರನೌಟಾದರು.ಕೂಡಲೇ ಮಳೆ ಸುರಿಯಿತು. ಭಾರತದ ಕಳೆದ 10 ಟೆಸ್ಟ್ ರನೌಟ್ಗಳಲ್ಲಿ ಪೂಜಾರ 7 ಸಲ ರನೌಟ್ ಆಗಿ ಅಗ್ರಸ್ಥಾನದಲ್ಲಿದ್ದಾರೆ.
ಸಂಜೆ 5 ಗಂಟೆ ಹೊತ್ತಿಗೆ ಉತ್ತಮ ಬಿಸಿಲು ಕಾಣಿಸಿಕೊಂಡ ಬಳಿಕ ಆಟವನ್ನು ಮುಂದುವರಿಸಲಾಯಿತು. ಆಗ 29.3 ಓವರ್ಗಳ ಆಟ ಬಾಕಿ ಇತ್ತು. ರಾತ್ರಿ 7.30ರ ತನಕ ಪಂದ್ಯ ಮುಂದುವರಿಸಲು ನಿರ್ಧರಿಸಲಾಯಿತು.