ಇಂದು ದ್ವಿತೀಯ ಏಕದಿನ: ಸರಣಿ ಉಳಿಸಿಕೊಳ್ಳುವ ಒತ್ತಡದಲ್ಲಿ ಭಾರತ
Team Udayavani, Nov 27, 2022, 6:25 AM IST
ಹ್ಯಾಮಿಲ್ಟನ್: ಮುನ್ನೂರು ರನ್ ಗಡಿ ದಾಟಿಯೂ ನ್ಯೂಜಿಲ್ಯಾಂಡ್ ಎದುರಿನ ಮೊದಲ ಏಕದಿನ ಪಂದ್ಯವನ್ನು ಉಳಿಸಿಕೊಳ್ಳಲು ವಿಫಲವಾಗಿದ್ದ ಭಾರತಕ್ಕೀಗ ಸರಣಿ ಯನ್ನು ಉಳಿಸಿಕೊಳ್ಳುವ ತೀವ್ರ ಒತ್ತಡ ಎದುರಾಗಿದೆ.
ರವಿವಾರ ಹ್ಯಾಮಿಲ್ಟನ್ನಲ್ಲಿ ದ್ವಿತೀಯ ಮುಖಾಮುಖಿ ಏರ್ಪಡಲಿದ್ದು, ಶಿಖರ್ ಧವನ್ ಪಡೆಗೆ ಇದು ಮಾಡು-ಮಡಿ ಪಂದ್ಯವಾಗಿದೆ.
ಆಕ್ಲೆಂಡ್ನ “ಈಡನ್ ಪಾರ್ಕ್ ‘ನಂತೆ ಹ್ಯಾಮಿಲ್ಟನ್ನ “ಸೆಡ್ಡನ್ ಪಾರ್ಕ್’ ಕೂಡ ಬ್ಯಾಟಿಂಗ್ ಫ್ರೆಂಡ್ಲಿ ಟ್ರ್ಯಾಕ್ ಆಗಿದೆ.
ಹೀಗಾಗಿ ಬೌಲರ್ಗಳು ಮತ್ತೂಮ್ಮೆ ಪರದಾಡಬೇಕಾದ ಅನಿವಾರ್ಯ ಸ್ಥಿತಿ ಎದುರಾಗುವ ಎಲ್ಲ ಸಾಧ್ಯತೆ ಇದೆ. ಹೀಗಾಗಿ ಇಲ್ಲಿಯೂ ಚೇಸಿಂಗ್ ತಂಡಕ್ಕೆ ಹೆಚ್ಚಿನ ಯಶಸ್ಸು ಎಂಬುದೊಂದು ಲೆಕ್ಕಾಚಾರ.
ಭಾರತ ಬಹುತೇಕ ಯುವ ಆಟ ಗಾರರನ್ನೇ ಒಳಗೊಂಡ ತಂಡವಾಗಿದೆ. ಆದರೂ ಆಕ್ಲೆಂಡ್ನಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ಭರ್ಜರಿ ಯಶಸ್ಸು ಕಂಡಿತ್ತು. ಶಿಖರ್ ಧವನ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್- ಈ ಮೂವರಿಂದಲೇ 202 ರನ್ ಹರಿದು ಬಂದಿತ್ತು. ಕೆಳ ಸರದಿಯಲ್ಲಿ ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್ ಕೂಡ ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ ಸಿಡಿದು ನಿಲ್ಲಬೇಕಾದ ಅಗತ್ಯವಿದೆ. ಆದರೆ ಮೊದಲ ಪವರ್ ಪ್ಲೇಯಲ್ಲಿ ಭಾರತ ಕೇವಲ 40 ರನ್ ಮಾಡಿತ್ತೆಂಬುದನ್ನು ಗಮನಿಸಬೇಕು.
ನಾಯಕ ಶಿಖರ್ ಧವನ್ ಬ್ಯಾಟಿಂಗ್ ತುಸು ನಿಧಾನ ಗತಿಯಿಂದ ಕೂಡಿತ್ತು. ಅವರು 77 ಎಸೆತಗಳಿಂದ 72 ರನ್ ಮಾಡಿದರೇನೋ ನಿಜ. ಇದರಲ್ಲಿ 13 ಬೌಂಡರಿಗಳಿದ್ದದ್ದೂ ನಿಜ. ಈ 13 ಬೌಂಡರಿಗಳಿಂದ (ಎಸೆತಗಳಿಂದ) 52 ರನ್ ಒಟ್ಟುಗೂಡಿತು. ಉಳಿದ 20 ರನ್ ಗಳಿಸಲು ಅವರು ತೆಗೆದುಕೊಂಡದ್ದು ಬರೋಬ್ಬರಿ 64 ಎಸೆತ. ಅರ್ಥಾತ್, ಇದರಲ್ಲಿ 44 ಡಾಟ್ ಬಾಲ್ ಆದಂತಾಯಿತು. ಶುಭಮನ್ ಗಿಲ್ ಮತ್ತೊಂದು ಅರ್ಧ ಶತಕ ಹೊಡೆದರೂ ಅವರ ಆಟವೂ ಬಿರುಸಿನಿಂದ ಕೂಡಿರಲಿಲ್ಲ. ಆದರೆ ಭದ್ರ ಬುನಾದಿ ನಿರ್ಮಿಸಲು ಇಂಥದೊಂದು ಬ್ಯಾಟಿಂಗ್ ಅನಿವಾರ್ಯ ವಾಗಿತ್ತು ಎಂಬುದನ್ನು ಒಪ್ಪದಿರಲು ಸಾಧ್ಯವಿಲ್ಲ. ಹಾಗೆಯೇ ಆರಂಭಿಕರು ಇನ್ನಷ್ಟು ಬಿರುಸಿನಿಂದ ಸಾಗಿದರೆ ಕನಿಷ್ಠ 20 ರನ್ನಾದರೂ ಹೆಚ್ಚು ಬರುತ್ತಿತ್ತು ಎಂಬುದೂ ಸುಳ್ಳಲ್ಲ. ನ್ಯೂಜಿಲ್ಯಾಂಡ್ ಕೇವಲ 47.1 ಓವರ್ಗಳಲ್ಲೇ ಈ ಮೊತ್ತವನ್ನು ಹಿಂದಿಕ್ಕಿದ್ದೇ ಇದಕ್ಕೆ ಸಾಕ್ಷಿ.
ನಡೆಯಬೇಕು ಬೌಲಿಂಗ್ ಮ್ಯಾಜಿಕ್
ತಂಡದ ಮೊತ್ತ ಮುನ್ನೂರರ ಗಡಿ ದಾಟಿದ್ದರಿಂದ ಭಾರತದ ಬ್ಯಾಟಿಂಗ್ ಮೇಲೆ ಗೂಬೆ ಕೂರಿಸುವುದು ತಪ್ಪಾಗುತ್ತದೆ. ಇಲ್ಲಿ ನಿಜವಾಗಿಯೂ ಮ್ಯಾಜಿಕ್ ಮಾಡಬೇಕಾದದ್ದು ಬೌಲರ್. ಕೇವಲ ಬೌಲಿಂಗ್ ಟ್ರ್ಯಾಕ್ ಮೇಲಷ್ಟೇ ಅಲ್ಲ, ಬ್ಯಾಟಿಂಗ್ ಟ್ರ್ಯಾಕ್ ಮೇಲೂ ಚಮತ್ಕಾರ ಮಾಡಬೇಕಾದ ಜಾಣ್ಮೆ ತೋರಬೇಕಾದುದು ಅಗತ್ಯ. ಹೆಚ್ಚು ಬೇಡ, ಮೊನ್ನೆ ಕೇನ್ ವಿಲಿ ಯಮ್ಸನ್-ಟಾಮ್ ಲ್ಯಾಥಂ ಜೋಡಿ ಯನ್ನು ಬೇರ್ಪಡಿಸಿದರೆ ಸಾಕಿತ್ತು, ಪಂದ್ಯದ ಗತಿ ಬದಲಾಗುವ ಎಲ್ಲ ಸಾಧ್ಯತೆ ಇತ್ತು.
ಸದ್ಯದ ಮಟ್ಟಿಗೆ ಟೀಮ್ ಇಂಡಿಯಾ ಇಂಥದೊಂದು ಪ್ರಬಲ ಬೌಲಿಂಗ್ ಪಡೆಯನ್ನು ಹೊಂದಿಲ್ಲ ಎಂದೇ ಹೇಳಬೇಕು. ಎಲ್ಲರೂ ಭಾರೀ ದುಬಾರಿಯಾದರೇ ಹೊರತು ಯಾವುದೇ ಪರಿಣಾಮ ಬೀರು ವಲ್ಲಿ ಯಶಸ್ವಿಯಾಗಲಿಲ್ಲ. ಹೀಗಾಗಿ ದ್ವಿತೀಯ ಪಂದ್ಯದಲ್ಲಿ ಕುಲದೀಪ್ ಯಾದವ್, ದೀಪಕ್ ಚಹರ್ ಅವ ರನ್ನು ದಾಳಿಗಿಳಿಸಿ ನೋಡಬೇಕಿದೆ.