ಧರ್ಮಶಾಲಾದಲ್ಲಿ ಇಂದು, ನಾಳೆ ಟಿ20 ಪಂದ್ಯ ; ಮಳೆ ಭೀತಿಯಲ್ಲಿ ಭಾರತ-ಲಂಕಾ ಸರಣಿ
Team Udayavani, Feb 26, 2022, 6:50 AM IST
ಧರ್ಮಶಾಲಾ: ಶ್ರೀಲಂಕಾ ವಿರುದ್ಧವೂ ಟಿ20 ಪ್ರಭುತ್ವ ಮುಂದುವರಿಸಿರುವ ಭಾರತವೀಗ ನಯನಮನೋಹರ ಧರ್ಮಶಾಲಾ ಅಂಗಳದಲ್ಲಿ ಸರಣಿ ವಶಪಡಿಸಿಕೊಳ್ಳಲು ಹೊರಟಿದೆ. ಶನಿವಾರ ಮತ್ತು ರವಿ ವಾರ ಇಲ್ಲಿ ಕೊನೆಯ ಎರಡೂ ಪಂದ್ಯಗಳು ಏರ್ಪಡಲಿವೆ. ಆದರೆ ಮಳೆ ಸಹಕರಿಸಿದರೆ ಮಾತ್ರ ಟೀಮ್ ಇಂಡಿಯಾಕ್ಕೆ ಸರಣಿ ಎಂಬುದು ಸದ್ಯದ ಸ್ಥಿತಿ.
ಹಿಮಾಚಲ ಪ್ರದೇಶದ ಧರ್ಮ ಶಾಲಾದಲ್ಲಿ ಕಳೆದ ಕೆಲವು ದಿನಗಳಿಂದ ದಿನವೂ ಸಂಜೆ ಮಳೆಯಾಗುತ್ತಿದೆ. ಶನಿವಾರವೂ ಮಳೆಯ ಮುನ್ಸೂಚನೆ ಇದೆ. ಮಳೆಯಿಂದಾಗಿಯೇ ದಕ್ಷಿಣ ಆಫ್ರಿಕಾ ಎದುರಿನ 2019ರ ಟಿ20 ಪಂದ್ಯ ಹಾಗೂ 2020ರ ಏಕದಿನ ಪಂದ್ಯಗಳೆರಡೂ ಒಂದೂ ಎಸೆತ ಕಾಣದೆ ಕೊಚ್ಚಿಹೋಗಿದ್ದನ್ನು ನೆನಪಿಸಿ ಕೊಳ್ಳಬಹುದು. ಭಾರತ- ಶ್ರೀಲಂಕಾ ಪಂದ್ಯಗಳಿಗೂ ಇದೇ ಸ್ಥಿತಿ ಎದುರಾದರೆ ಅಚ್ಚರಿಪಡಬೇಕಾಗಿಲ್ಲ.
ವಿಂಡೀಸಿಗಿಂತಲೂ ದುರ್ಬಲ
ಟಿ20 ಸ್ಪೆಷಲಿಸ್ಟ್ ಎಂದೇ ಗುರು ತಿಸಲ್ಪಟ್ಟಿದ್ದ ಅಪಾಯಕಾರಿ ವೆಸ್ಟ್ ಇಂಡೀಸಿಗೆ ವೈಟ್ವಾಶ್ ಮಾಡಿದ ಹಿಗ್ಗಿನಲ್ಲಿದ್ದ ಭಾರತಕ್ಕೆ ಶ್ರೀಲಂಕಾ ವನ್ನು ಮಣಿಸುವುದು ದೊಡ್ಡ ಸವಾ ಲಾಗಿರಲಿಲ್ಲ. ಏಕೆಂದರೆ, ಲಂಕನ್ನರ ಈ ಪಡೆ ವಿಂಡೀಸಿಗಿಂತಲೂ ದುರ್ಬಲ ವಾಗಿತ್ತು. ಆಸ್ಟ್ರೇಲಿಯದ ಕೈಯಲ್ಲಿ 4-1 ಏಟು ತಿಂದು ಬಂದಿತ್ತು. ಗುರುವಾರದ ಲಕ್ನೋ ಪಂದ್ಯದಲ್ಲಿ ಲಂಕನ್ನರ ದೌರ್ಬಲ್ಯ ಮತ್ತೆ ಸಾಬೀತಾಯಿತು. ರೋಹಿತ್ ಪಡೆಯ 62 ರನ್ನುಗಳ ಮೇಲುಗೈ ಟಿ20 ಮಟ್ಟಿಗೆ ಬೃಹತ್ ಗೆಲುವೇ ಆಗಿದೆ.
ಭಾರತ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಭರವಸೆಯ ಪ್ರದ ರ್ಶನ ನೀಡಿತ್ತು. ಆದರೆ ಫೀಲ್ಡಿಂಗ್ ಮಾತ್ರ ಶ್ರೀಲಂಕಾದಷ್ಟೇ ಕಳಪೆ ಯಾಗಿತ್ತು. ಅನೇಕ ಕ್ಯಾಚ್ಗಳು ನೆಲಕಚ್ಚಿದ್ದವು. ತಂಡದ ಯುವ ಕ್ರಿಕೆಟಿಗರು ಕ್ಷೇತ್ರರಕ್ಷಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಾದ ಸಮಯವೀಗ ಸನ್ನಿಹಿತವಾಗಿದೆ.
ಅಮೋಘ ಬ್ಯಾಟಿಂಗ್
ಲಕ್ನೋ ಪಂದ್ಯದ ಹೈಲೈಟ್ ಎಂದರೆ ಭಾರತದ ಭರ್ಜರಿ ಬ್ಯಾಟಿಂಗ್. ಕೊಹ್ಲಿ, ಪಂತ್ ಮತ್ತು ಇನ್ಫಾರ್ಮ್ ಸೂರ್ಯಕುಮಾರ್ ಗೈರಲ್ಲೂ ಭಾರತ ಇನ್ನೂರರ ಗಡಿ ಸಮೀಪಿಸಿದ್ದು, ಅದೂ ಎರಡೇ ವಿಕೆಟ್ ನಷ್ಟದಲ್ಲಿ, ನಿಜಕ್ಕೂ ಅಮೋಘ ಪರಾಕ್ರಮ. ವಿಂಡೀಸ್ ವಿರುದ್ಧ ಬಹಳ ಮಂದಗತಿಯಲ್ಲಿದ್ದ, ಐಪಿಎಲ್ನ ಬಹುಕೋಟಿ ಒಡೆಯ ಇಶಾನ್ ಕಿಶನ್ ನೈಜ ಬ್ಯಾಟಿಂಗ್ ಅಬ್ಬರ ತೋರ್ಪಡಿಸಿದ್ದು ಭಾರತಕ್ಕೆ ಬಂಪರ್ ಆಗಿ ಪರಿಣಮಿಸಿತು. ಇದಕ್ಕೂ ಮಿಗಿಲಾಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಮಾಲಕರಿಗೆ ಹೆಚ್ಚು
ಖುಷಿ ತಂದಿರುವುದು ಸುಳ್ಳಲ್ಲ!
ಮುಂಬೈ ಇಂಡಿಯನ್ಸ್ ಆರಂಭಿಕ ಜತೆಗಾರರೂ ಆಗಿರುವ ರೋಹಿತ್ ಶರ್ಮ-ಇಶಾನ್ ಕಿಶನ್ ಹತ್ತರ ಸರಾ ಸರಿಯಲ್ಲಿ ರನ್ ಪೇರಿಸುತ್ತ ಶತಕದ ಜತೆಯಾಟ ನಡೆಸಿದರು. ಬಳಿಕ ಶ್ರೇಯಸ್ ಅಯ್ಯರ್ ಅಬ್ಬರಿಸಿದರು. ಇದು ಕೆಕೆಆರ್ ಮಾಲಕರ ಸಂತಸಕ್ಕೆ ಕಾರಣವಾಗಿರಬಹುದು!
ಭಾರತ ಎರಡೇ ವಿಕೆಟ್ ಕಳೆದು ಕೊಂಡಿದ್ದರಿಂದ ಸಂಜು ಸ್ಯಾಮ್ಸನ್, ವೆಂಕಟೇಶ್ ಅಯ್ಯರ್, ಪದಾರ್ಪಣ ಪಂದ್ಯವಾಡಿದ ದೀಪಕ್ ಹೂಡಾ ಅವರಿಗೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ. ತಂಡಕ್ಕೆ ಮರಳಿದ ರವೀಂದ್ರ ಜಡೇಜಾಗೆ ಎದುರಿಸಲು ಸಿಕ್ಕಿದ್ದು 4 ಎಸೆತ ಮಾತ್ರ.
7 ಮಂದಿಯ ಬೌಲಿಂಗ್ ದಾಳಿ
ಬೌಲಿಂಗ್ನಲ್ಲೂ ಭಾರತ ಘಾತಕ ಪ್ರಹಾರ ನಡೆಸಿತು. 7 ಮಂದಿ ದಾಳಿಗೆ ಇಳಿದರು. ಇನ್ನಿಂಗ್ಸಿನ ಮೊದಲ ಎಸೆತದಲ್ಲೇ ಭುವನೇಶ್ವರ್ ಕುಮಾರ್ ವಿಕೆಟ್ ಉಡಾಯಿಸಿದರು. ಇಬ್ಬರೂ ಆರಂಭಿಕರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಬ್ಯಾಟಿಂಗ್ ಅವಕಾಶ ಪಡೆಯದ ವೆಂಕಟೇಶ್ ಅಯ್ಯರ್ ಬೌಲಿಂಗ್ನಲ್ಲಿ ಮಿಂಚು ಹರಿಸಿದರು. ತುಸು ದುಬಾರಿಯೆನಿಸಿದರೂ 2 ವಿಕೆಟ್ ಕೆಡವಿದರು. ಚಹಲ್, ಜಡೇಜ ಒಂದೊಂದು ವಿಕೆಟ್ ಕಿತ್ತರು. ಬುಮ್ರಾ, ಹರ್ಷಲ್ ಪಟೇಲ್ ಮತ್ತು ಹೂಡಾಗೆ ವಿಕೆಟ್ ಸಿಗಲಿಲ್ಲ.
ಮಧ್ಯಮ ಕ್ರಮಾಂಕದ ಚರಿತ ಅಸಲಂಕ ಅವರ ಅರ್ಧ ಶತಕವೊಂದೇ ಲಂಕಾ ಬ್ಯಾಟಿಂಗ್ ಸರದಿಯ ಗಮನಾರ್ಹ ಅಂಶವಾಗಿತ್ತು. ಲಂಕಾ ಸರಣಿ ಸಮಬಲಗೊಳಿಸಬೇಕಾದರೆ ಉಳಿದವರ ಬ್ಯಾಟ್ ಕೂಡ ಮಾತಾಡಬೇಕು.
ಆರಂಭ: 7.00
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್