ಕತಾರ್ ವಿಶ್ವಕಪ್ ಫುಟ್ಬಾಲ್ ಭಾರತ ಪೊಲೀಸರಿಂದ ಭದ್ರತಾ ಸಲಹೆ
Team Udayavani, Jan 23, 2018, 7:00 AM IST
ಹೊಸದಿಲ್ಲಿ: 2022ರ ಕತಾರ್ ವಿಶ್ವಕಪ್ ಫುಟ್ಬಾಲ್ ಕೂಟಕ್ಕೆ ಭದ್ರತಾ ಸಲಹೆ ನೀಡಲು ಭಾರತದ ಪೊಲೀಸ್ ಅಧಿಕಾರಿಗಳ ನೆರವನ್ನು ಸಂಘಟಕರು ಕೇಳಿದ್ದಾರೆ. ಮಾರ್ಚ್ನಲ್ಲಿ ನಡೆಯುವ ಸಮಾವೇಶಕ್ಕೆ ಭಾರತದಿಂದ 20 ಅಧಿಕಾರಿಗಳಿಗೆ ಆಹ್ವಾನ ನೀಡಲಾಗಿದೆ.
2008ರಲ್ಲಿ ಮುಂಬಯಿ ದಾಳಿ ನಡೆದಾಗ ಪರಿಸ್ಥಿತಿಯನ್ನು ಯಶಸ್ವಿಯಾಗಿ ಪೊಲೀಸರು ನಿಭಾಯಿಸಿರುವುದು, ಐಪಿಎಲ್, ಐಎಸ್ಎಲ್ (ಇಂಡಿಯನ್ ಸೂಪರ್ ಲೀಗ್), ಇತ್ತೀಚೆಗೆ ನಡೆದ ಕಿರಿಯರ ವಿಶ್ವಕಪ್ ಸೇರಿದಂತೆ ಪ್ರಮುಖ ಕೂಟಗಳಿಗೆ ಕೈಗೊಂಡ ಅಚ್ಚುಕಟ್ಟಾದ ಭದ್ರತಾ ವ್ಯವಸ್ಥೆಯಿಂದ ಸಂಘಟಕರು ಪ್ರೇರಿತರಾಗಿದ್ದಾರೆ. ಹೀಗಾಗಿ ಭಾರತದಿಂದ ಭದ್ರತಾ ಸಲಹೆ ಪಡೆದು ಕೂಟದ ವೇಳೆ ಸಂಭವಿಸಬಹುದಾದ ಅಹಿತಕರ ಘಟನೆಗಳನ್ನು ತಪ್ಪಿಸಲು ಸಂಘಟಕರು ತಯಾರಿ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ 20 ಮಂದಿ ಐಪಿಎಸ್ (ಇಂಡಿಯನ್ ಪೊಲೀಸ್ ಸರ್ವಿಸ್) ಅಧಿಕಾರಿಗಳು ಕತಾರ್ನಲ್ಲಿ ನಡೆಯುವ ಮೊದಲ ಸೆಮಿನಾರ್ನಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
ಫುಟ್ಬಾಲ್ನಂತಹ ಕೂಟದ ವೇಳೆ ಗ್ಯಾಲರಿಯಲ್ಲಿ ಅಭಿಮಾನಿಗಳು ಪರಸ್ಪರ ಹೊಡೆದಾಟ ನಡೆಸುವುದು, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುವುದು ಸಾಮಾನ್ಯ. ಹೀಗಾಗಿ ಬಿಗಿ ಭದ್ರತೆಯೊಂದಿಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು ಕತಾರ್ ವಿಶ್ವಕಪ್ ಫುಟ್ಬಾಲ್ ಸಂಘಟಕರು ನಿರ್ಧರಿಸಿದ್ದಾರೆ.