ಪಂಜಾಬ್-ರಾಜಸ್ಥಾನ್: “ಮಂಕಡ್’ ಬಳಿಕ ಮರು ಪಂದ್ಯ
Team Udayavani, Apr 16, 2019, 10:02 AM IST
ಮೊಹಾಲಿ: ಆರಂಭಿಕ ಸುತ್ತಿನ ಪಂದ್ಯದಲ್ಲಿ “ಮಂಕಡಿಂಗ್ ವಿವಾದ’ದಿಂದ ಸುದ್ದಿಯಾದ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ಥಾನ್ ರಾಯಲ್ಸ್ ಮಂಗಳವಾರದ ಐಪಿಎಲ್ನ ಮರು ಹಣಾಹಣಿಗೆ ಮುಂದಾಗಲಿದ್ದಾರೆ. ಎರಡೂ ಸೋಲಿನ ದೋಣಿಯ ಪಯಣಿಗರಾಗಿದ್ದು, ಮತ್ತೆ ಗೆಲುವಿನ ದಡ ಸೇರುವ ತಂಡ ಯಾವುದು ಎಂಬುದೊಂದು ಕೌತುಕ.
ಪಂಜಾಬ್ ಪಾಲಿಗೆ ಇದು ತವರಿನ ಪಂದ್ಯವಾದ್ದ ರಿಂದ ಫೇವರಿಟ್ ಆಗಿ ಗುರುತಿಸಲ್ಪಟ್ಟಿದ್ದರೂ ತವರಿನಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಲು ರಾಜಸ್ಥಾನ್ ಹೊಂಚು ಹಾಕಿದೆ ಎಂಬುದನ್ನು ಮರೆಯುವಂತಿಲ್ಲ.
ರಾಜಸ್ಥಾನ್ ಬಲಾಬಲ
ಜಾಸ್ ಬಟ್ಲರ್ ರಾಜಸ್ಥಾನ್ ತಂಡದ ದೊಡ್ಡ ಶಕ್ತಿ. ದುರಂತವೆಂದರೆ, ಬಟ್ಲರ್ ಅವರನ್ನು ಹೊರತುಪಡಿಸಿ ಉಳಿದವರ್ಯಾರೂ ಫಾರ್ಮ್ನಲ್ಲಿಲ್ಲ. ನಾಯಕ ಅಜಿಂಕ್ಯ ರಹಾನೆ ಪ್ರತಿ ಪಂದ್ಯದಲ್ಲೂ ವಿಫಲವಾಗುತ್ತಿರುವುದು ದೊಡ್ಡ ಹೊಡೆತ. ಸ್ಟೀವ್ ಸ್ಮಿತ್ ಅವರ ನಿಧಾನ ಗತಿಯ ಬ್ಯಾಟಿಂಗ್, ಮಧ್ಯಮ ಕ್ರಮಾಂಕದ ಹಠಾತ್ ಕುಸಿತವೆಲ್ಲ ರಾಜಸ್ಥಾನ್ ತಂಡದ ಪ್ರಮುಖ ಸಮಸ್ಯೆ. ಇದಕ್ಕೆ ಮುಂಬೈ ವಿರುದ್ಧದ ಕಳೆದ ಪಂದ್ಯವೇ ಸಾಕ್ಷಿ. ಸುಲಭವಾಗಿ ಗೆಲ್ಲುವ ಪಂದ್ಯವನ್ನು ಬಟ್ಲರ್ ಔಟಾದ ಬಳಿಕ ಪರದಾಡಿ ಗೆದ್ದಿತ್ತು.
ಬೌಲಿಂಗ್ನಲ್ಲಿ ಕರ್ನಾಟಕದ ಸ್ಪಿನ್ನರ್ಗಳಾದ ಕೆ. ಗೌತಮ್, ಶ್ರೇಯಸ್ ಗೋಪಾಲ್ ಉತ್ತಮ ಲಯದಲ್ಲಿದ್ದಾರೆ. ಧವಳ್ ಕುಳಕರ್ಣಿ, ಜೋಫÅ ಆರ್ಚರ್, ಜೈದೇವ್ ಉನಾದ್ಕತ್ ಕೂಡ ಕ್ಲಿಕ್ ಆದರೆ ರಾಜಸ್ಥಾನ್ ಮೇಲುಗೈ ನಿರೀಕ್ಷಿಸಬಹುದು.
ಮತ್ತೆ ಆರ್. ಅಶ್ವಿನ್-ಜಾಸ್ ಬಟ್ಲರ್
ರಾಜಸ್ಥಾನ್ ಆಟಗಾರ ಜಾಸ್ ಬಟ್ಲರ್ ಅವರನ್ನು ಪಂಜಾಬ್ ಕಪ್ತಾನ ಆರ್. ಅಶ್ವಿನ್ ರನೌಟ್ ಮಾಡಿದ ರೀತಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಇಬ್ಬರೂ ಮತ್ತೂಮ್ಮೆ ಮುಖಾಮುಖೀಯಾಗಲಿದ್ದಾರೆ. ಅಶ್ವಿನ್ ಮೇಲಿನ ಕೋಪವನ್ನು ಬಟ್ಲರ್ ಹೇಗೆ ತೀರಿಸಿಕೊಳ್ಳಬಹುದೆಂಬುದು ಕೂಡ ಈ ಪಂದ್ಯದ ಕುತೂಹಲ.
ಆರಂಭಿಕರಾದ ಗೇಲ್-ರಾಹುಲ್ ಜೋಡಿಯನ್ನು ಪಂಜಾಬ್ ಹೆಚ್ಚು ಅವಲಂಬಿಸಿದೆ. ಅಗರ್ವಾಲ್, ನಿಕೋಲಸ್ ಪೂರಣ್, ಮಿಲ್ಲರ್ ಕೂಡ ಬಿಗ್ ಹಿಟ್ಟರ್ಗಳೇ ಆಗಿದ್ದಾರೆ. ಆದರೆ ಶಮಿ, ಟೈ, ಸ್ಯಾಮ್ ಕರನ್, ಅಶ್ವಿನ್ದ್ವಯರು ಧಾರಾಳ ರನ್ ನೀಡುತ್ತಿರುವುದು ತಂಡಕ್ಕೊಂದು ಹಿನ್ನಡೆ. ಇದರಿಂದ ಗೆಲ್ಲುವ ಪಂದ್ಯಗಳನ್ನೆಲ್ಲ ಕೊನೆಯ ಹಂತದಲ್ಲಿ ಕಳಪೆ ಬೌಲಿಂಗ್ನಿಂದ ಕಳೆದುಕೊಳ್ಳುತ್ತಿದೆ. ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಿದರೆ ಪಂಜಾಬ್ಗ ಗೆಲುವು ಸಮಸ್ಯೆಯಲ್ಲ. ಈ ಪಂದ್ಯಕ್ಕೆ ಸ್ಯಾಮ್ ಕರನ್ ಸ್ಥಾನಕ್ಕೆ ಮುಜೀಬ್ ಉರ್ ರೆಹಮಾನ್ ಆಯ್ಕೆಯಾಗುವ ಸಾಧ್ಯತೆ ಇದೆ.
ಶಕಿಬ್ಗ ಬುಲಾವ್
ಬಾಂಗ್ಲಾದೇಶದ ಆಲ್ರೌಂಡರ್ ಶಕಿಬ್ ಅಲ್ ಹಸನ್ ಅವರಿಗೆ ಅಲ್ಲಿನ ಕ್ರಿಕೆಟ್ ಮಂಡಳಿ ಸ್ವದೇಶಕ್ಕೆ ವಾಪಸಾಗುವಂತೆ ಸೂಚಿಸಿದೆ. ಮುಂಬರುವ ವಿಶ್ವಕಪ್ ಪಂದ್ಯಾವಳಿಗೆ ಬಾಂಗ್ಲಾ ಆಟಗಾರರ ಸಿದ್ಧತೆ ಆರಂಭವಾಗಿರುವುದೇ ಇದಕ್ಕೆ ಕಾರಣ. “ನಮ್ಮ ಕ್ರಿಕೆಟ್ ಅಭ್ಯಾಸ ಶಿಬಿರ ಈಗಾಗಲೇ ಆರಂಭಗೊಂಡಿದೆ. ಹೀಗಾಗಿ ಕೂಡಲೇ ಐಪಿಎಲ್ನಿಂದ ವಾಪಸಾಗಿ ಈ ಶಿಬಿರವನ್ನು ಸೇರಿಕೊಳ್ಳುವಂತೆ ಶಕಿಬ್ಗ ಈಗಾಗಲೇ ಪತ್ರವೊಂದನ್ನು ಕಳುಹಿಸಲಾಗಿದೆ. ಅವರು ಇದಕ್ಕೆ ಹೇಗೆ ಸ್ಪಂದಿಸುತ್ತಾರೆಂದು ಕಾದು ನೋಡಬೇಕು’ ಎಂಬುದಾಗಿ ಬಾಂಗ್ಲಾ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜ್ಮುಲ್ ಹಸನ್ ಹೇಳಿದ್ದಾರೆ. ಶಕಿಬ್ ಸನ್ರೈಸರ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.