ಕಳಪೆ ಆಯ್ಕೆಯಿಂದಲೇ ಆರ್ಸಿಬಿಗೆ ಈ ಗತಿ….
ಮಾಜಿ ಕ್ರಿಕೆಟಿಗ, ವಿಶ್ಲೇಷಕ ವಿಜಯ್ ಭಾರದ್ವಾಜ್ ಅಸಮಾಧಾನ
Team Udayavani, May 2, 2019, 11:08 AM IST
ಬೆಂಗಳೂರು: ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ಒಟ್ಟಾರೆ ಆಯ್ಕೆಯೇ ನಿರಾಸೆ ತಂದಿದೆ. ಸಮರ್ಥ ಆಟಗಾರರನ್ನು ತಂಡಕ್ಕೆ ತೆಗೆದುಕೊಂಡಿಲ್ಲ. ಕೆಟ್ಟ ಆಯ್ಕೆಯಿಂದಲೇ ಇಂದು ಆರ್ಸಿಬಿಗೆ ಈ ಗತಿ ಬಂದಿದೆ ಎಂದು ಮಾಜಿ ಕ್ರಿಕೆಟಿಗ, ಸ್ಟಾರ್ ನ್ಪೋರ್ಟ್ಸ್ 1 ಕನ್ನಡ ಚಾನೆಲ್ನ ಕ್ರಿಕೆಟ್ ವಿಶ್ಲೇಷಕ ವಿಜಯ್ ಭಾರದ್ವಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಅಸಮಾಧಾನ ಹೊರಗೆಡಹಿದರು.
ಸುಮ್ಮನೆ ಕೂರಲು ಸಾಧ್ಯವಿಲ್ಲ
“ಮೊದಲಿನಿಂದಲೇ ಆರ್ಸಿಬಿ ಆಯ್ಕೆ ಮಾಡಿದ ಆಟಗಾರರ ಬಗ್ಗೆ ನಾನು ಅಸಮಾಧಾನ ವ್ಯಕ್ತಪಡಿ ಸುತ್ತಲೇ ಬಂದಿದ್ದೇನೆ. ಕೆಲವು ಸಲ ನಮ್ಮ ಮಾತುಗಳು ಮತ್ತೂಬ್ಬರಿಗೆ ಹಿಡಿಸುವುದಿಲ್ಲ. ಕೆಲವು ಸಲ ಇದ್ದದ್ದನ್ನು ಇದ್ದ ಹಾಗೆ ಹೇಳಿ ಕೆಟ್ಟವನು ಎನಿಸಿ ಕೊಂಡಿದ್ದೇನೆ. ಹಾಗಂತ ಆರ್ಸಿಬಿ ಸತತ ಸೋಲುತ್ತಿದ್ದರೆ, ಕೆಟ್ಟ ಬ್ಯಾಟಿಂಗ್, ಬೌಲಿಂಗ್ ಮಾಡುತ್ತಿದ್ದರೆ ಏನೋ ಮಾತನಾಡದೇ ಸುಮ್ಮನೆ ಕುಳಿತು ಕೊಳ್ಳಲು ಸಾಧ್ಯವಿಲ್ಲ’ ಎಂದರು.
ಕೇವಲ ಇಬ್ಬರ ಮೇಲೆ ತಂಡದ ಗೆಲುವು ಅವಲಂಬನೆ
“ಕೆಲವು ಸಲ ನಾನು ಖಡಕ್ ಆಗಿ ಹೀಗೆ ಮಾತನಾಡಿದ್ದೇನೆ. ಈ ವೇಳೆ ಸ್ವತಃ ಆರ್ಸಿಬಿ ಅಭಿಮಾನಿಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದ್ದೇನೆ. ಐಪಿಎಲ್ ಫ್ಯಾನ್ಸ್ಗಾಗಿ ಆಡುವುದು, ಅವರಿಂದಲೇ ಈ ಚುಟುಕು ಕೂಟ ಬದುಕಿರುವುದು, ನಾನು ಆರ್ಸಿಬಿಗೆ ಮೂರು ವರ್ಷ ಕೋಚ್ ಆಗಿದ್ದೆ. ಯಾವತ್ತಿಗೂ ತಂಡ ಒಬ್ಬಿಬ್ಬರ ಮೇಲೆ ಅವಲಂಬಿಸಿರುವುದನ್ನು ನೋಡಿಲ್ಲ. ಇದೇ ಮೊದಲ ಸಲ ಕೊಹ್ಲಿ, ಎ ಬಿಡಿ ವಿಲಿಯರ್ ಆಡುವುದರ ಮೇಲೆಯೇ ತಂಡದ ಗೆಲುವು ನಿಂತಿತ್ತು. ಇದು ದುರದೃಷ್ಟಕರ’ ಎಂದರು ವಿಜಯ್.
ಉಮೇಶ್ ಯಾದವ್ ಬೌಲಿಂಗೇ ಸರಿಯಿಲ್ಲ
ಆರ್ಸಿಬಿ ಇಂದಿನ ಸ್ಥಿತಿಗೆ ಬೌಲರ್ ಉಮೇಶ್ ಯಾದವ್ ಕೂಡ ಕಾರಣ. ಫ್ರಾಂಚೈಸಿ ಅವರನ್ನು ಹೆಚ್ಚು ನಂಬಿತ್ತು. ಆದರೆ ಈ ನಂಬಿಕೆಯನ್ನು ಉಳಿಸಿಕೊಳ್ಳಲಿಲ್ಲ. ಒಂದು ದಿನ ನಮಗೆ ಕೆಟ್ಟ ದಿನ ಬರಬಹುದು. ಅದು ಪ್ರತಿಯೊಬ್ಬರ ಜೀವನದಲ್ಲಿ ಸಹಜ ಎನ್ನಬಹುದು. ಆದರೆ ಪ್ರತಿ ಪಂದ್ಯದಲ್ಲೂ ಉಮೇಶ್ ಯಾದವ್ ಕಳಪೆ ಬೌಲಿಂಗ್ ಮಾಡುತ್ತಿದ್ದಾರೆ. ಅವರಲ್ಲಿ ಏನೋ ದೋಷವಿದೆ ಎಂದರ್ಥ. ಇದನ್ನು ಸ್ವತಃ ಉಮೇಶ್ ಪರಾಮರ್ಶಿಸಿಕೊಳ್ಳಬೇಕು’ ಎಂದರು.
“ಟಿ20ಯಲ್ಲಿ ಹೆಚ್ಚು ಕರಾರುವಕ್ ಬೌಲಿಂಗ್ ಜತೆಗೆ ಬೌನ್ಸಿಂಗ್ ಇರಬೇಕು. ಉಮೇಶ್ ಬೌಲಿಂಗ್ನಲ್ಲಿ ಅದ್ಯಾವುದು ಕಾಣಿಸುತ್ತಲೇ ಇಲ್ಲ. ಚಾಹಲ್ ಹೊರತುಪಡಿಸಿ ಉಳಿದವರಿಂದ ವಿಕೆಟ್ ಕೀಳುವ ಪ್ರದರ್ಶನ ಬರಲಿಲ್ಲ. ಹಲವು ಬಾರಿ ವಿಫಲರಾದರೂ ಮೊಹಮ್ಮದ್ ಸಿರಾಜ್, ಅಕ್ಷದೀಪ್ ನಾಥ್ಗೆ ವಿರಾಟ್ ಕೊಹ್ಲಿ ಮತ್ತೆ ಮತ್ತೆ ಅವಕಾಶ ಕೊಟ್ಟಿದ್ದಾರೆ. ಅದನ್ನು ಉಳಿಸಿಕೊಳ್ಳುವಲ್ಲಿ ಅವರೂ ಕೂಡ ವಿಫಲರಾಗಿರುವುದು ನಿರಾಸೆ ತಂದಿದೆ’ ಎಂದು ವಿಜಯ್ ಭಾರದ್ವಾಜ್ ಅವರು ಹೇಳಿದರು.
ನಮ್ಮಲ್ಲಿ ಪ್ರತಿಭಾವಂತರಿಲ್ಲವೇ?
ನಮ್ಮಲ್ಲಿ ಸಯ್ಯದ್ ಮುಷ್ತಾ¤ಕ್ ಅಲಿ ಟಿ20 ಟ್ರೋಫಿ ಗೆದ್ದ ಪ್ರತಿಭಾವಂತ ಆಟಗಾರರಿದ್ದಾರೆ. ಅವರನ್ನೆಲ್ಲ ಬಿಟ್ಟು 5-6 ಕೋಟಿ ರೂ.ಗಳಿಗೆ ಹೊರಗಿನ ಆಟಗಾರರನ್ನು ಕೊಂಡು ಅವಕಾಶ ಕೊಡಲಾಗುತ್ತಿದೆ. ಆಯ್ಕೆಯಲ್ಲಿ ನಮ್ಮವರನ್ನು ಯಾಕೆ ಕಡೆಗಣನೆ ಮಾಡಲಾಗುತ್ತಿದೆ?
ಭಾರದ್ವಾಜ್, ಮಾಜಿ ಕ್ರಿಕೆಟಿಗ
ಹೇಮಂತ್ ಸಂಪಾಜೆ