ರಾಜಸ್ಥಾನ್-ಪಂಜಾಬ್: ಬ್ಯಾಟಿಂಗ್ ಮೇಲಾಟದ ನಿರೀಕ್ಷೆ
Team Udayavani, Sep 21, 2021, 6:54 AM IST
ದುಬಾೖ: ಪ್ರಬಲ ಹಾಗೂ ಸ್ಫೋಟಕ ಬ್ಯಾಟಿಂಗ್ ಸರದಿಯನ್ನು ಹೊಂದಿರುವ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮಂಗಳವಾರ ದುಬಾೖಯಲ್ಲಿ ಮುಖಾಮುಖೀ ಆಗಲಿವೆ. ಒಂದೆಡೆ ರಾಹುಲ್, ಗೇಲ್; ಇನ್ನೊಂದೆಡೆ ಲಿವಿಂಗ್ಸ್ಟೋನ್, ಲೆವಿಸ್, ಸ್ಯಾಮ್ಸನ್ ಸಿಡಿಯಲು ಸಜ್ಜಾಗಿದ್ದಾರೆ.
ಮುಂಬಯಿಯಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಇತ್ತಂಡಗಳು ಸೇರಿ 438 ರನ್ ಪೇರಿಸಿದ್ದನ್ನು ಕಂಡಾಗ, ಇಲ್ಲಿಯೂ ಸ್ಫೋಟಕ ಬ್ಯಾಟಿಂಗ್ ನಿರೀಕ್ಷೆ ಸಹಜ. ಆದರೆ ದುಬಾೖ ಟ್ರ್ಯಾಕ್ನಲ್ಲಿ ರನ್ ಪ್ರವಾಹ ನಿರೀಕ್ಷಿಸುವುದು ಅವಸರಕ್ಕೆ ಕಾರಣವಾಗಬಹುದು.
ಎರಡೂ ತಂಡಗಳು ಟಾಪ್-4ರ ಆಚೆ ಇರುವುದರಿಂದ ಇಬ್ಬರಿಗೂ ಗೆಲುವು ಅನಿವಾರ್ಯ ಎಂಬ ಸ್ಥಿತಿ ಇದೆ. “ದ ಹಂಡ್ರೆಡ್’ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರರ್ಶಿಸಿರುವ ಇಂಗ್ಲೆಂಡಿನ ಲಿಯಮ್ ಲಿವಿಂಗ್ಸ್ಟೋನ್ ಸೇರ್ಪಡೆಯಿಂದ ರಾಜಸ್ಥಾನ್ ಇನ್ನಷ್ಟು ಬಲಿಷ್ಠವಾಗಿ ಗೋಚರಿಸುತ್ತಿದೆ. ಬೆನ್ ಸ್ಟೋಕ್ಸ್ ಸ್ಥಾನಕ್ಕೆ ಲಿವಿಂಗ್ಸ್ಟೋನ್ ಅರ್ಹ ಆಯ್ಕೆ ಎಂಬುದರಲ್ಲಿ ಎರಡು ಮಾತಿಲ್ಲ. ಇವರು ವಿಂಡೀಸ್ನ ಎವಿನ್ ಲೆವಿಸ್ ಜತೆ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.
ಸಂಜು ಸ್ಯಾಮ್ಸನ್, ಕ್ರಿಸ್ ಮಾರಿಸ್, ಮಿಲ್ಲರ್, ಕಳೆದ ಸಲ ಯುಎಇಯಲ್ಲಿ ದೊಡ್ಡ ಸ್ಟಾರ್ ಆಗಿ ಮೆರೆದ ರಾಹುಲ್ ತೇವಟಿಯಾ, ಆಲ್ರೌಂಡರ್ ರಿಯಾನ್ ಪರಾಗ್, ಸ್ಪೀಡ್ಸ್ಟರ್ ಚೇತನ್ ಸಕಾರಿಯಾ, ಜೈದೇವ್ ಉನಾದ್ಕತ್, ಶಂಸಿ, ಮುಸ್ತಫಿಜುರ್ ಅವರಂಥ ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ಹೊಂದಿರುವ ರಾಜಸ್ಥಾನ್ ಸಾಕಷ್ಟು ಬಲಿಷ್ಠವಾಗಿ ಗೋಚರಿಸುತ್ತಿದೆ.
ರಾಹುಲ್ ಮರಳಿ ನಾಯಕ:
ಪಂಜಾಬ್ ಕೆ.ಎಲ್. ರಾಹುಲ್ ಸಾರಥ್ಯವನ್ನು ಮರಳಿ ಪಡೆಯಲಿದೆ. ಮೇ ಮೊದಲ ವಾರ ಅಪೆಂಡಿಸೈಟಿಸ್ನಿಂದಾಗಿ ರಾಹುಲ್ ತಂಡದಿಂದ ಬೇರ್ಪಟ್ಟಿದ್ದರು. ಡೆಲ್ಲಿ ವಿರುದ್ಧ ಅಗರ್ವಾಲ್ ತಂಡವನ್ನು ಮುನ್ನಡೆಸಿದ್ದರು.
ಕ್ರಿಸ್ ಗೇಲ್ ಮತ್ತು ಫ್ಯಾಬಿಯನ್ ಅಲೆನ್ ಪಂಜಾಬ್ನ ಬಿಗ್ ಸ್ಟಾರ್. ಇಬ್ಬರೂ ಇತ್ತೀಚೆಗಷ್ಟೇ ಚೊಚ್ಚಲ ಕೆರಿಬಿಯನ್ ಪ್ರೀಮಿಯರ್ ಲೀಗ್ ವಿಜೇತ ಸೇಂಟ್ ಕಿಟ್ಸ್ ತಂಡದ ಸದಸ್ಯರೆಂಬುದು ಉಲ್ಲೇಖನೀಯ. ಐಡನ್ ಮಾರ್ಕ್ರಮ್ ಸೇರ್ಪಡೆಯಿಂದ ಪಂಜಾಬ್ ಇನ್ನಷ್ಟು ಬಲಿಷ್ಠಗೊಂಡಿದೆ.
ಶಮಿ, ಆರ್ಷದೀಪ್, ಹೆನ್ರಿಕ್ಸ್, ಜೋರ್ಡನ್, ಬಿಷ್ಣೋಯಿ, ಎಂ. ಅಶ್ವಿನ್, ಪೂರಣ್, ಬ್ರಾರ್ ಅವರೆಲ್ಲ ಪಂಜಾಬ್ನ ಭರವಸೆಯ ಆಟಗಾರರು.
ವ್ಯರ್ಥವಾಗಿತ್ತು ಸ್ಯಾಮ್ಸನ್ ಶತಕ :
ಪಂಜಾಬ್-ರಾಜಸ್ಥಾನ್ ಮೊದಲ ಸುತ್ತಿನಲ್ಲಿ ದೊಡ್ಡ ಮೊತ್ತದ ಮೇಲಾಟದಿಂದ ಕ್ರಿಕೆಟ್ ಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದ್ದವು. ಇದಕ್ಕೆ ಸಾಕ್ಷಿಯಾದದ್ದು ಮುಂಬಯಿಯ ವಾಂಖೇಡೆ ಸ್ಟೇಡಿಯಂ. ಇದು ಎರಡೂ ತಂಡಗಳಿಗೆ 2021ರ ಋತುವಿನ ಮೊದಲ ಪಂದ್ಯವಾಗಿತ್ತು. ಚೇಸಿಂಗ್ ವೇಳೆ ಸಂಜು ಸ್ಯಾಮ್ಸನ್ ಭರ್ಜರಿ 119 ರನ್ ಬಾರಿಸಿದರೂ ರಾಜಸ್ಥಾನ್ 4 ರನ್ನುಗಳಿಂದ ಸೋಲು ಕಾಣಬೇಕಾಯಿತು.
ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್, ರಾಹುಲ್ (91) ಮತ್ತು ದೀಪಕ್ ಹೂಡಾ (64) ಅವರ ಅಮೋಘ ಆಟದ ನೆರವಿನಿಂದ 6 ವಿಕೆಟಿಗೆ 221 ರನ್ ರಾಶಿ ಹಾಕಿತು. ರಾಜಸ್ಥಾನ್ ಮೊದಲ ಓವರ್ನಲ್ಲೇ ಬೆನ್ ಸ್ಟೋಕ್ಸ್ (0) ವಿಕೆಟ್ ಕಳೆದುಕೊಂಡಿತು. ಆದರೆ ವನ್ಡೌನ್ನಲ್ಲಿ ಬಂದ ಸಂಜು ಸ್ಯಾಮ್ಸನ್ ಮುನ್ನುಗ್ಗಿ ಹೋಗಿ ಸೆಂಚುರಿ ಸಿಡಿಸಿದರು. ಆರ್ಷದೀಪ್ ಸಿಂಗ್ ಅವರ ಅಂತಿಮ ಓವರ್ನಲ್ಲಿ 13 ರನ್, ಅಂತಿಮ 2 ಎಸೆತಗಳಲ್ಲಿ 5 ರನ್ ತೆಗೆಯುವ ಸವಾಲು ಎದುರಾಯಿತು.
4ನೇ ಎಸೆತವನ್ನು ಸಿಕ್ಸರ್ಗೆ ಬಡಿದಟ್ಟಿದ ಸ್ಯಾಮ್ಸನ್ ಫುಲ್ ಜೋಶ್ನಲ್ಲಿದ್ದರು. ಹೀಗಾಗಿ 5ನೇ ಎಸೆತದಲ್ಲಿ ಕ್ರಿಸ್ ಮಾರಿಸ್ಗೆ
ಸಿಂಗಲ್ ಬೇಡ ಎಂದು ಸೂಚಿಸಿದರು. ಆದರೆ ಕೊನೆಯ ಎಸೆತವನ್ನು ಬೌಂಡರಿ ಲೈನ್ನಲ್ಲಿದ್ದ ಹೂಡಾಗೆ ಕ್ಯಾಚ್ ನೀಡಿದ ಸ್ಯಾಮ್ಸನ್ ತೀವ್ರ ನಿರಾಸೆ ಅನುಭವಿಸಬೇಕಾಯಿತು! ರಾಜಸ್ಥಾನ್ 7 ವಿಕೆಟಿಗೆ 221 ರನ್ ಮಾಡಿ ಶರಣಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
Narayan Gowda: ಹೆಚ್ಚಿನ ಮತಗಳಿಂದ ಎಚ್ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Raksha Ramaiah: ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ