ಐಪಿಎಲ್ ಚಮತ್ಕಾರ: ಬಡವರ ಮನೆ ಮಕ್ಕಳೀಗ ಕೋಟಿ ವೀರರು!
Team Udayavani, Feb 22, 2017, 11:57 AM IST
ನವದೆಹಲಿ: ಪ್ರತಿ ವರ್ಷ ಐಪಿಎಲ್ ಹರಾಜು ನಡೆದಾಗಲೂ ಒಂದಷ್ಟು ಅಚ್ಚರಿಯ ಘಟನೆಗಳು ಸಂಭವಿಸುತ್ತದೆ. ನಾವು
ಇಂದೆಂದೂ ಕೇಳಿರದ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನೋಡಿರದ ಹೊಸ ಕ್ರಿಕೆಟಿಗರು ಬೆಳಕಿಗೆ ಬರುತ್ತಾರೆ. ಈ ಬಾರಿ
ಅದನ್ನೆಲ್ಲ ಮೀರಿದ ವಿದ್ಯಮಾನಗಳು ಐಪಿಎಲ್ ಹರಾಜಿನಲ್ಲಿ ನಡೆದಿದೆ. ಹರಾಜು ಆರಂಭಗೊಂಡ ಕೆಲವೇ ಸೆಕೆಂಡ್ಗಳಲ್ಲಿ
ಬಡವರ ಮನೆ ಮಕ್ಕಳಿಬ್ಬರು ಕೋಟ್ಯಾಧಿಪತಿಗಳಾಗಿದ್ದಾರೆ. ತಾವು ಕನಸಿನಲ್ಲೂ ನಿರೀಕ್ಷಿಸಿರದ ಮೊತ್ತಕ್ಕೆ ಮಾರಾಟಗೊಂಡು ಅಚ್ಚರಿಗೆ ಕಾರಣರಾಗಿದ್ದಾರೆ.
ಬಡತನದಲ್ಲಿ ಅರಳಿದ ಹೋವು ನಟರಾಜನ್, ಸಿರಾಜ್: 10ನೇ ಆವೃತ್ತಿಯಲ್ಲಿ ತಮಿಳುನಾಡಿನ ಹಮಾಲಿಯ ಮಗ ತಂಗರಸು ನಟರಾಜನ್ 3 ಕೋಟಿ ರೂ.ಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಪಾಲಾಗಿದ್ದಾರೆ. ಹೈದ್ರಾಬಾದ್ನ ಆಟೋ ಚಾಲಕ ಮಗ ಮೊಹಮ್ಮದ್ ಸಿರಾಜ್ 2.6 ಕೋಟಿ ರೂ.ಗೆ ಸನ್ರೈಸರ್ ಹೈದ್ರಾಬಾದ್ ತೆಕ್ಕೆಗೆ ಬಿದ್ದಿದ್ದಾರೆ. ಇವರಿಬ್ಬರೂ ಆಗರ್ಭ ಶ್ರೀಮಂತರಲ್ಲ. ಬಡವರ ಮನೆಮಕ್ಕಳು ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ.
ಯಾರಿವರು ನಟರಾಜನ್?
ನಟರಾಜನ್ ಸೇಲಂನವರು. ಅವರಿಗೆ 25 ವರ್ಷ ವಯಸ್ಸು. ಇವರ ತಂದೆ ರೈಲ್ವೇ ನಿಲ್ದಾಣದಲ್ಲಿ ಹಮಾಲಿ ಕೆಲಸ ಮಾಡುತ್ತಾರೆ.ತಾಯಿ ರಸ್ತೆ ಬದಿಯಲ್ಲಿ ಗೂಡಂಗಡಿ ಇಟ್ಟುಕೊಂಡಿದ್ದಾರೆ.ಕಡುಬಡತನದ ನಡುವೆ ಬೇಯುತ್ತಿದ್ದ ಕುಟುಂಬ ಇವರದ್ದು. 5 ಜನ ಮಕ್ಕಳಲ್ಲಿ ನಟರಾಜನ್ ಕೂಡ ಒಬ್ಬರು. ಎಲ್ಲ ಮಕ್ಕಳಂತೆ ಸೇಲಂ ಬೀದಿಯಲ್ಲಿ ಟೆನಿಸ್ ಬಾಲ್ನಲ್ಲಿ ನಟರಾಜನ್ ಕ್ರಿಕೆಟ್ ಆಡಿದರು. ವೇಗದ ಬೌಲರ್ ಆಗಿ ಗುರುತಿಸಿಕೊಂಡರು. ನಂತರ ತಮಿಳುನಾಡು ಕ್ಲಬ್ ತಂಡ ಜಾಲಿ ರೋವರ್ ಪರ ಆಡಿದರು.
ಬಳಿಕ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ದಿಂಡಿಗಲ್ ಡ್ರ್ಯಾಗನ್ಸ್ ಪರ ಆಡಿದರು. ಆರ್.ಅಶ್ವಿನ್, ಮುರಳಿ ವಿಜಯ್ ಒಡನಾಟ ಸಿಕ್ಕಿತು. ಇದೀಗ ಐಪಿಎಲ್ನಲ್ಲಿ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ. 10 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ಅವರು ಹರಾಜು ಮುಗಿಯುವ ಹೊತ್ತಿಗೆ ಕೋಟಿ ವೀರರಾಗಿದ್ದಾರೆ.
ಯಾರಿವರು ಸಿರಾಜ್?
ಸಿರಾಜ್ ಹೈದ್ರಾಬಾದ್ನವರು. ಅವರಿಗೆ 23 ವರ್ಷವಯಸ್ಸು. ಇವರ ತಂದೆ ಆಟೋ ಚಾಲಕ. ದುಡಿದು ಬರುವ ಹಣದಲ್ಲೇ ಜೀವನ ಬಂಡಿ ಸಾಗಬೇಕು. ಸಿರಾಜ್ಗೆ ಓದಿನಲ್ಲಿ ಆಸಕ್ತಿ ಕಡಿಮೆ. ಕ್ರಿಕೆಟರ್ ಆಗಬೇಕು ಎನ್ನುವುದಷ್ಟೇ ಕನಸಾಗಿತ್ತು. ಆದರೆ ಪೋಷಕರು ಕ್ರಿಕೆಟ್ ಬಿಟ್ಟು ಮೊದಲು ಉದ್ಯೋಗ ಹಿಡಿ ಎಂದು ಕಿವಿಮಾತು ಹೇಳಿದ್ದರು.
ಆದರೆ ಸಿರಾಜ್ ಪಾಠ ಕಡಿಮೆ ಮಾಡಿ ಆಟವನ್ನೇ ಜಾಸ್ತಿ ಮಾಡಿದರು. ಕ್ಲಬ್, ರಣಜಿ ತಂಡದಲ್ಲಿ ಸ್ಥಾನ ಪಡೆದು ಯಶಸ್ಸಿನ ಮೆಟ್ಟಿಲೇರಿದರು. ಬೌಲರ್ ಆಗಿರುವ ಸಿರಾಜ್ ಐಪಿಎಲ್ನಲ್ಲಿ ಮೂಲಬೆಲೆ 20 ಲಕ್ಷ ರೂ. μಕ್ಸ್ ಆಗಿತ್ತು. ಇದೀಗ ಲಕ್ಷ ಮೀರಿ ಕೋಟಿ ವೀರನಾಗಿದ್ದಾರೆ.