ವಿರಾಟ್ ಕೊಹ್ಲಿಗೆ ಅದೃಷ್ಟ ಕೈಕೊಟ್ಟಿದೆ: ಸೆಹವಾಗ್
Team Udayavani, Mar 6, 2020, 11:35 PM IST
ಹೊಸದಿಲ್ಲಿ: ವಿರಾಟ್ ಕೊಹ್ಲಿಗೆ ಕಣ್ಣು-ಕೈಗಳ ಸಮನ್ವಯದ ಸಮಸ್ಯೆ ಕಾಡುತ್ತಿಲ್ಲ, ಬದಲಾಗಿ ಅದೃಷ್ಟ ಕೈಹಿಡಿಯುತ್ತಿಲ್ಲ ಎಂಬುದಾಗಿ ಭಾರತ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹವಾಗ್ ಹೇಳಿದ್ದಾರೆ.
ಮೂವತ್ತರ ಗಡಿ ದಾಟಿದಾಗ ಎಲ್ಲ ಆಟಗಾರರಿಗೂ ಸಾಮಾನ್ಯವಾಗಿ ಕಣ್ಣಿನ ಮತ್ತು ಕೈಗಳ ಸಮನ್ವಯದ ಸಮಸ್ಯೆ ಎದುರಾಗುತ್ತದೆ. ಕೊಹ್ಲಿಗೂ ಹೀಗೆಯೇ ಆಗಿದೆ ಎಂದು ಕಳೆದ ವಾರ ಕಪಿಲ್ದೇವ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಸಿದ ಸೆಹವಾಗ್, “ಕೊಹ್ಲಿಗೆ ಯಾವುದೇ ರೀತಿ ದೋಷವಿಲ್ಲ. ಅವರಿಗೆ ಅದೃಷ್ಟ ಕೈಹಿಡಿಯುತ್ತಿಲ್ಲ, ಅಷ್ಟೇ. ಆದರೆ ಇದು ಹೆಚ್ಚು ದಿನ ಇರದು. ಕೊಹ್ಲಿ ಮತ್ತೆ ಫಾರ್ಮ್ಗೆ ಮರಳಲಿದ್ದಾರೆ’ ಎಂದರು.
“ಪ್ರತಿಯೊಬ್ಬರ ಜೀವನದಲ್ಲೂ ಅದೃಷ್ಟ ಕೈಕೊಡುತ್ತದೆ. ಆಗ ನಾವು ಏನು ಮಾಡಿದರೂ ಯಶಸ್ಸು ಕಾಣದು. ಈ ವೇಳೆ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಮುಂದಿನ ದಿನಗಳಲ್ಲಿ ಇದು ಸರಿಹೋಗುತ್ತದೆ’ ಎಂದು ವೀರೂ ಹೇಳಿದರು.