ಮತ್ತೂಂದು ಸೆಣಸಾಟಕ್ಕೆ ಸಿಂಧು ಸಿದ್ಧತೆ
ಜಪಾನ್ ಓಪನ್ ಬ್ಯಾಡ್ಮಿಂಟನ್
Team Udayavani, Jul 23, 2019, 5:20 AM IST
ಹೊಸದಿಲ್ಲಿ: ಇಂಡೋನೇಶ್ಯ ಓಪನ್ನ ಫೈನಲ್ನಲ್ಲಿ ಮತ್ತೆ ಆಘಾತಕಾರಿ ಸೋಲನ್ನು ಕಂಡ ಭಾರತದ ಪ್ರಮುಖ ಶಟ್ಲರ್ ಪಿ.ವಿ. ಸಿಂಧು ಮತ್ತೂಂದು ಸೆಣ ಸಾಟಕ್ಕೆ ಸಿದ್ಧರಾಗಬೇಕಾಗಿದೆ.
ಜಪಾನ್ ಓಪನ್ ಬಿಡಬ್ಲ್ಯುಎಫ್ ವಿಶ್ವ ಟೂರ್ ಸೂಪರ್ 750 ಬ್ಯಾಡ್ಮಿಂಟನ್ ಕೂಟ ಮಂಗಳವಾರದಿಂದ ಆರಂಭವಾಗಲಿದ್ದು ಭಾರತದ ತಾರಾ ಆಟಗಾರ್ತಿಯರಾದ ಪಿ.ವಿ. ಸಿಂಧು ಮತ್ತು ಸೈನಾ ನೆಹ್ವಾಲ್ ಸ್ಪರ್ಧಾಕಣದಲ್ಲಿದ್ದಾರೆ. ಫಿಟ್ನೆಸ್ ಕಾರಣಕ್ಕೆ ಇಂಡೋನೇಶ್ಯ ಕೂಟದಿಂದ ಹಿಂದೆ ಸರಿದಿದ್ದ ಸೈನಾ ಇಲ್ಲಿ ತನ್ನ ಸಾಮರ್ಥ್ಯವನ್ನು ಪಣಕ್ಕಿಡಬೇಕಿದೆ.
ಇಂಡೋನೇಶ್ಯ ಓಪನ್ನ ಫೈನಲ್ನಲ್ಲಿ ಅಕಾನೆ ಯಮಾಗುಚಿ ವಿರುದ್ಧ ನೇರ ಸೆಟ್ಗಳಿಂದ ಸೋತ ಸಿಂಧು 7 ತಿಂಗಳ ಪ್ರಶಸ್ತಿ ಬರವನ್ನು ನೀಗಿಸುವಲ್ಲಿ ವಿಫಲರಾಗಿದ್ದಾರೆ. ಇದೀಗ “ಜಪಾನ್ ಓಪನ್’ ಕೂಟದಲ್ಲಾ ದರೂ ಪ್ರಶಸ್ತಿ ಒಲಿದೀತೆಂಬ ನಿರೀಕ್ಷೆ ಸಿಂಧು ಮತ್ತು ಭಾರತೀಯರದ್ದು.
ಚೀನದ ಹಾನ್ ಯುಯಿ ಅವರನ್ನು ಎದುರಿಸುವ ಮೂಲಕ ಸಿಂಧು ಜಪಾನ್ ಓಪನ್ನಲ್ಲಿ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಮೊದಲ ಹರ್ಡಲ್ ದಾಟಿದರೆ ದ್ವಿತೀಯ ಸುತ್ತಿನಲ್ಲಿ ಸ್ಕಾಟ್ಲೆಂಡಿನ ಕಸ್ಟಿì ಗಿಲ್ಮೋರ್ ಅಥವಾ ಜಪಾನಿನ ಅಯಾ ಒಹೊರಿ ಅವರನ್ನು ಎದುರಿಸಲಿದ್ದಾರೆ.
ಸಿಂಧು ಗೆಲುವಿನ ಮೆಟ್ಟಿಲು ಏರುತ್ತ ಹೋದರೆ ಕ್ವಾ. ಫೈನಲ್ನಲ್ಲಿ ಮತ್ತೆ ಅಕನೆ ಯಮಾಗುಚಿ ಎದುರಾಗುವ ಸಾಧ್ಯತೆಯಿದೆ. ಆಗ 5ನೇ ಶ್ರೇಯಾಂಕದ ಸಿಂಧು ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಬಹುದು.
ಪುರುಷರ ಸಿಂಗಲ್ಸ್ನ ಮೊದಲ ಸುತ್ತಿನಲ್ಲಿ ಭಾರತೀಯ ಶಟ್ಲರ್ಗಳಾದ ಎಚ್.ಎಸ್. ಪ್ರಣಯ್ ಮತ್ತು ಕಿಡಂಬಿ ಶ್ರೀಕಾಂತ್ ಮುಖಾಮುಖೀಯಾಗಲಿದ್ದಾರೆ. ಇವರಿಬ್ಬರು 4 ಬಾರಿ ಪರಸ್ಪರ ಮುಖಾಮುಖೀಯಾಗಿದ್ದು, ಶ್ರೀಕಾಂತ್ 4 ಬಾರಿ ಗೆದ್ದಿದ್ದಾರೆ.
ಭಾರತದ ಇನ್ನೋರ್ವ ಶಟ್ಲರ್ ಬಿ. ಸಾಯಿ ಪ್ರಣೀತ್ ಮೊದಲ ಸುತ್ತಿನಲ್ಲಿ ಜಪಾನಿನ ಕೆಂಟ ನಿಶಿಮೊಟೊ ಅವರ ಸವಾಲನ್ನು ಎದುರಿಸಲಿದ್ದಾರೆ. ಪ್ರಣೀತ್ ಸ್ವಿಸ್ ಓಪನ್ ಕೂಟದಲ್ಲಿ ಫೈನಲ್ ತನಕ ತಲುಪಿದ್ದರು.
ಭುಜದ ಸಮಸ್ಯೆಯಿಂದಾಗಿ ಇಂಡೋನೇಶ್ಯ ಓಪನ್ನಿಂದ ಹಿಂದೆ ಸರಿದಿದ್ದ ಸಮೀರ್ ವರ್ಮ ಡೆನ್ಮಾರ್ಕ್ನ ಆ್ಯಂಡೆರ್ ಆಂಟೊನ್ಸೆನ್ ಅವರನ್ನು ಎದುರಿಸಲಿದ್ದಾರೆ. ಆಂಟೊನ್ಸೆನ್ ಇಂಡೋನೇಶ್ಯ ಓಪನ್ನ ಫೈನಲ್ನಲ್ಲಿ ಸುದೀರ್ಘ ಹೋರಾಟ ನಡೆಸಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.
ಆತ್ಮವಿಶ್ವಾಸದೊಂದಿಗೆ ಹೋರಾಟ
“ನನ್ನ ಪಾಲಿಗೆ ಇದೊಂದು ಭಾರೀ ನಿರೀಕ್ಷೆಯ ಕೂಟವಾಗಿದೆ. ಇಂಡೋನೇಶ್ಯ ಫೈನಲ್ನಲ್ಲಿ ಸೋತಿರಬಹುದು. ಆದರೆ ಪ್ರಬಲ ಹೋರಾಟ ನೀಡಿದ್ದೆ. ಅದೇ ಆತ್ಮವಿಶ್ವಾಸದೊಂದಿಗೆ ಜಪಾನ್ ಕೂಟದಲ್ಲೂ ಹೋರಾಡುವೆ’ ಎಂದು ಸಿಂಧು ಹೇಳಿದ್ದಾರೆ.
8ನೇ ಶ್ರೇಯಾಂಕದ ಸೈನಾ ನೆಹ್ವಾಲ್ ಈ ಋತುವಿನಲ್ಲಿ ಪ್ರಶಸ್ತಿ ಗೆದ್ದ ಭಾರತದ ಏಕೈಕ ಆಟಗಾರ್ತಿಯಾಗಿದ್ದಾರೆ. ಅವರು ಥಾಯ್ಲೆಂಡಿನ ಬುಸಾನನ್ ಆಂಗ್ಬಾಮುರುಂಗನ್ ಅವರನ್ನು ಎದುರಿಸುವ ಮೂಲಕ ತನ್ನ ಹೋರಾಟ ಆರಂಭಿಸಲಿದ್ದಾರೆ. ಅವರೆದುರು ಸೈನಾ 3-1 ಜಯ-ಸೋಲಿನ ದಾಖಲೆ ಹೊಂದಿದ್ದಾರೆ.