“ಕೊಹ್ಲಿ, ಶಾಸ್ತ್ರಿ ಹೇಳಿಕೆ ಸಮಂಜಸವಲ್ಲ’
Team Udayavani, Jan 11, 2019, 12:30 AM IST
ಬೆಂಗಳೂರು: ಆಸ್ಟ್ರೇಲಿಯ ವಿರುದ್ಧದ ಸರಣಿ ಗೆಲುವು 1983 ಹಾಗೂ 2011ರ ವಿಶ್ವಕಪ್ ಗೆಲುವಿಗಿಂತ ಶ್ರೇಷ್ಠ ಎಂದು ಭಾರತದ ತರಬೇತುದಾರ ರವಿಶಾಸ್ತ್ರಿ, ನಾಯಕ ವಿರಾಟ್ ಕೊಹ್ಲಿ ಹೇಳಿದ್ದರು. ಇದನ್ನು ಕರ್ನಾಟಕದ ಖ್ಯಾತ ಮಾಜಿ ಕ್ರಿಕೆಟಿಗರಾದ ವೆಂಕಟೇಶ ಪ್ರಸಾದ್ ಹಾಗೂ ಸುನೀಲ್ ಜೋಶಿ ಟೀಕಿಸಿದ್ದಾರೆ. ಇದು ಅವರಿಬ್ಬರ ವೈಯಕ್ತಿಕ ಅಭಿಪ್ರಾಯವೇ ಹೊರತು, ಸಾರ್ವಜನಿಕವಾಗಿ ಸಮಂಜಸವಲ್ಲಿ ಎಂದರು.
“ಕಪಿಲ್ದೇವ್ ನೇತೃತ್ವದಲ್ಲಿ 1983ರ ವಿಶ್ವಕಪ್ ಹಾಗೂ ಮಹೇಂದ್ರಸಿಂಗ್ ಧೋನಿ ನೇತೃತ್ವದ 2011ರ ವಿಶ್ವಕಪ್ ಜಯ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಶ್ರೇಷ್ಠವಾಗಿವೆ. ಅದರಲ್ಲೂ 1983ರ ವಿಶ್ವಕಪ್ ಭಾರತೀಯ ಕ್ರಿಕೆಟ್ನ ತಾಯಿಯಿದ್ದಂತೆ’ ಎಂದು ಪ್ರಸಾದ್ ಹಾಗೂ ಜೋಶಿ ಬಣ್ಣಿಸಿದ್ದಾರೆ.
“1983ರ ವಿಶ್ವಕಪ್ ಗೆಲುವು ದೇಶದಲ್ಲಿ ಕ್ರಿಕೆಟ್ ಬೆಳವಣಿಗೆಗೆ ಪೂರಕವಾಯಿತು. ಭಾರತ ಟೆಸ್ಟ್ ತಂಡ ಆಸ್ಟ್ರೇಲಿಯದಲ್ಲಿ 71 ವರ್ಷಗಳ ಅನಂತರ ಸರಣಿ ಗೆದ್ದ ಖುಷಿಯಲ್ಲಿ ಕೊಹ್ಲಿ, ಶಾಸ್ತ್ರಿ ಸ್ವಲ್ಪ ಹೆಚ್ಚೇ ಪ್ರತಿಕ್ರಿಯಿಸಿದ್ದಾರೆ. ಮುಖ್ಯವಾಗಿ ಆಸ್ಟ್ರೇಲಿಯ ತಂಡ ಹಿಂದಿನಷ್ಟು ಬಲಿಷ್ಠವಾಗಿಲ್ಲ. ಖ್ಯಾತನಾಮರು ಈಗ ತಂಡದಲ್ಲಿಲ್ಲ. ಇಂತಹ ಸಮಯದಲ್ಲಿ ತಂಡ ಗೆಲುವು ಸಾಧಿಸಿದೆ. ಈ ಗೆಲುವಿಗೆ ಮಹತ್ವವಿದ್ದರೂ ವಿಶ್ವಕಪ್ನಷ್ಟು ಪ್ರಾಮುಖ್ಯ ಹೊಂದಿಲ್ಲ’ ಎಂದು ಇಬ್ಬರೂ ಹೇಳಿದರು.