ಕೆಪಿಎಲ್: ಮಳೆಯಾಟಕ್ಕೆ ಪಂದ್ಯ ಬಲಿ
Team Udayavani, Sep 6, 2017, 10:03 AM IST
ಮೈಸೂರು: ನಗರದಲ್ಲಿ ನಡೆಯುತ್ತಿರುವ ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಮೈಸೂರು ಚರಣದ 2ನೇ ದಿನದ ಪಂದ್ಯ ಮಳೆಯಿಂದಾಗಿ ರದ್ದಾಗಿದೆ.
ಮಾನಸಗಂಗೋತ್ರಿಯ ಎಸ್ಡಿಎನ್ಆರ್ ಒಡೆಯರ್(ಗ್ಲೆಡ್ಸ್) ಅಂಗಳದಲ್ಲಿ ಮಂಗಳವಾರ ಸಂಜೆ ನಮ್ಮ ಶಿವಮೊಗ್ಗ ಹಾಗೂ ಬಳ್ಳಾರಿ ಟಸ್ಕರ್ಸ್ ನಡುವೆ ಪಂದ್ಯ ನಡೆಯಬೇಕಿತ್ತು. ಆದರೆ ಪಂದ್ಯ ಆರಂಭಕ್ಕೆ ಕೆಲವೇ ನಿಮಿಷಕ್ಕೂ ಮುನ್ನ ಮಳೆ ಜೋರಾಗಿ ಸುರಿಯಿತು. ಮಳೆಯಿಂದಾಗಿ ಮೈಸೂರು ಚರಣದ 2ನೇ ಪಂದ್ಯ ಕನಿಷ್ಠ ಟಾಸ್ಗೂ ಸಾಧ್ಯವಾಗಲಿಲ್ಲ. ಕೊನೆಗೆ ಪಂದ್ಯ ರದ್ದು ಎಂದು ಘೋಷಿಸಲಾಯಿತು. ಇದರಿಂದಾಗಿ ಉಭಯ ತಂಡಗಳು ತಲಾ 1 ಅಂಕಗಳನ್ನು ಹಂಚಿಕೊಂಡವು.
ಅಭಿಮಾನಿಗಳಿಗೆ ಬೇರೆ ಪಂದ್ಯ ವೀಕ್ಷಿಸಲು ವ್ಯವಸ್ಥೆ: 2ನೇ ದಿನದಂದು ನಡೆಯಬೇಕಿದ್ದ ನಮ್ಮ ಶಿವಮೊಗ್ಗ ಹಾಗೂ ಬಳ್ಳಾರಿ ಟಸ್ಕಸ್Õì ನಡುವಿನ ಪಂದ್ಯವನ್ನು ವೀಕ್ಷಿಸುವ ಸಲುವಾಗಿ ಅಂದಾಜು 800ಕ್ಕೂ ಹೆಚ್ಚು ಪ್ರೇಕ್ಷಕರು ಮೈದಾನಕ್ಕಾಗಮಿಸಿದ್ದರು. ಆದರೆ ವರುಣನ ಅವಕೃಪೆಯಿಂದಾಗಿ ಪಂದ್ಯ ಒಂದು ಎಸೆತವನ್ನು ಕಾಣದೆ ರದ್ದಾಗಿದ್ದರಿಂದ ಟಿಕೆಟ್ ಖರೀದಿಸಿ ಮೈದಾನಕ್ಕೆ ಬಂದಿದ್ದ ಪ್ರೇಕ್ಷಕರು ನಿರಾಸೆಗೆ ಒಳಗಾಗಿದ್ದರು. ಹೀಗಾಗಿ ಮಂಗಳವಾರದ ಪಂದ್ಯದ ಟಿಕೆಟ್ ಖರೀದಿಸಿದ್ದ ಕೆಲವು ಪ್ರೇಕ್ಷಕರಿಗೆ ಟಿಕೆಟ್ ಹಣವನ್ನು ಹಿಂದಿರುಗಿಸುವ ಅಥವಾ ಮುಂದಿನ ದಿನಗಳಲ್ಲಿ(ಶುಕ್ರವಾರ, ಶನಿವಾರ ಹಾಗೂ ಬಾನುವಾರ ಹೊರತುಪಡಿಸಿ)ವಾರದ ಮಧ್ಯದಲ್ಲಿ ಒಂದು ಪಂದ್ಯ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಕೊಡೆ ಹಿಡಿದುಕೊಂಡು ಗಮನ ಸೆಳೆದ ಬ್ರೆಟ್ ಲೀ: ಆಸ್ಟ್ರೇಲಿಯಾ ತಂಡದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಭಾರೀ ಮಳೆಯ ನಡುವೆಯೂ ಛತ್ರಿ ಹಿಡಿದುಕೊಂಡು ಮೈದಾನದಲ್ಲಿ ಗಮನ ಸೆಳೆದರು. ಪ್ರೇಕ್ಷಕರು ಇವರನ್ನು ನೋಡಿ ಜೋರಾಗಿ ಬ್ರೆಟ್ ಲೀ…ಬ್ರೆಟ್ ಲೀ ಎಂದು ಕೂಗಿ ಕರೆದರು.