ಕೆಪಿಎಲ್: ಪೊಲೀಸರಿಗೆ ಲಭಿಸಿತು 2018ರ ಮ್ಯಾಚ್ ಫಿಕ್ಸಿಂಗ್ ಸುಳಿವು
Team Udayavani, Oct 26, 2019, 5:10 AM IST
ಬೆಂಗಳೂರು: ಕರ್ನಾಟಕ ಕ್ರಿಕೆಟ್ ಲೀಗ್ ( ಕೆಪಿಎಲ್) ಮ್ಯಾಚ್ ಫಿಕ್ಸಿಂಗ್ ಅಕ್ರಮ ಬಗೆದಷ್ಟೂ ಬಯ ಲಾಗುತ್ತಿದೆ. 2018ರ ಆವೃತ್ತಿಯಲ್ಲೂ ಮ್ಯಾಚ್ಫಿಕ್ಸಿಂಗ್ ನಡೆದಿರುವುದನ್ನು ಕೇಂದ್ರ ಅಪರಾಧ ವಿಭಾಗ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.
2019ರ ಪ್ರಕರಣದ ಬೆನ್ನತ್ತಿ ಹೊರಟ ಪೊಲೀಸರಿಗೆ, ಅನಿರೀಕ್ಷಿತ ವೆಂಬಂತೆ 2018ರ ಆವೃತ್ತಿಯಲ್ಲಿ ನಡೆದಿದೆ ಎನ್ನಲಾದ ಫಿಕ್ಸಿಂಗ್ ಪ್ರಕರಣಗಳ ಸುಳಿವು ಸಿಕ್ಕಿದೆ. ಈ ಹಿನ್ನೆಲೆ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಬೌಲಿಂಗ್ ತರಬೇತುದಾರರಾಗಿದ್ದ ವಿನೂಪ್ರಸಾದ್ ಹಾಗೂ ಬ್ಯಾಟ್ಸ್ಮನ್ ಎಂ. ವಿಶ್ವನಾಥನ್ ಅವರನ್ನು ಬಂಧಿಸಲಾಗಿದೆ.
ಇಬ್ಬರು ಆರೋಪಿಗಳು ಶಾಮೀಲು
ಕೆಪಿಎಲ್ 2018ರ ಆವೃತ್ತಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಬೆಳಗಾವಿ ಪ್ಯಾಂಥರ್ಸ್ ನಡುವಿನ ಪಂದ್ಯದಲ್ಲಿ ಬುಕ್ಕಿಗಳೊಂದಿಗೆ ಇಬ್ಬರು ಆರೋಪಿಗಳು ಕೈಜೋಡಿಸಿದ್ದರು. ನಿಧಾನಗತಿಯ ಬ್ಯಾಟಿಂಗ್ ಮಾಡುವ ಸಲುವಾಗಿ ವಿಶ್ವನಾಥನ್ ಬುಕ್ಕಿಗಳಿಂದ 5 ಲಕ್ಷ ರೂ. ಪಡೆದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬೌಲಿಂಗ್ ಕೋಚ್ ವಿನೂಪ್ರಸಾದ್, ಬುಕ್ಕಿಗಳೊಂದಿಗೆ ನೇರ ಸಂಪರ್ಕ ಹೊಂದಿದ್ದರು. ಬುಕ್ಕಿಗಳಾದ ಮುಖೇಶ್, ಖಾನ್, ವೆಂಕಿ ಅವರನ್ನು ಸಂಪರ್ಕಿಸಿದ್ದರು. ಬಳಿಕ, ಬ್ಯಾಟ್ಸ್ಮನ್ ವಿಶ್ವನಾಥನ್ ಅವರನ್ನು ಫಿಕ್ಸಿಂಗ್ಗೆ ಒಪ್ಪಿಸಿದ್ದರು.
ಬುಕ್ಕಿಗಳಾದ ಮುಖೇಶ್ ಮತ್ತಿತರರು ತಲೆಮರೆಸಿ ಕೊಂಡಿದ್ದಾರೆ. ಇನ್ನೂ ಹಲವು ಆಟಗಾರರು ಹಾಗೂ ಇತರ ತಂಡಗಳ ಸಿಬಂದಿ ಜತೆ ಶಾಮೀಲಾಗಿ ಮ್ಯಾಚ್ಫಿಕ್ಸಿಂಗ್ ನಡೆಸಿರುವ ಸಾಧ್ಯತೆಯಿದೆ, ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ.
2019ರ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿದ್ದ ವೇಳೆ ಹಲವು ಆಟಗಾರರನ್ನು, ಮಾಲಕರನ್ನು ವಿಚಾರ ಣೆಗೊಳಪಡಿಸಲಾಗಿದೆ. ಈ ಪ್ರಕರಣದ ವಿಸ್ತೃತ ತನಿಖೆಯಲ್ಲಿ 2018ರಲ್ಲಿಯೂ ಮ್ಯಾಚ್ಫಿಕ್ಸಿಂಗ್ ನಡೆದಿರುವುದು ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ ಸಿಸಿಬಿ 2018ರ ಮ್ಯಾಚ್ಫಿಕ್ಸಿಂಗ್ ಕುರಿತು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.
2019ರ ಫಿಕ್ಸಿಂಗ್ ಪ್ರಕರಣ
2019ರ ಕೆಪಿಎಲ್ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಸಂಬಂಧ ಬಳ್ಳಾರಿ ಟಸ್ಕರ್ಸ್ ತಂಡದ ಬೌಲರ್ ನೀಡಿದ ದೂರಿನ ಅನ್ವಯ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಈಗಾಗಲೇ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲಕ ಅಲಿ ಅಶ್ಫಾಕ್ ತಹ್ರಾ, ಬುಕ್ಕಿ ಬೆಂಗಳೂರಿನ ಭವೇಶ್ ಬಫಾ°ನನ್ನು ಬಂಧಿಸಿದೆ. ತಲೆಮರೆಸಿಕೊಂಡಿರುವ ದೆಹಲಿ ಮೂಲದ ಸನ್ಯಾಮ್ ಹೆಸರಿನ ಬುಕ್ಕಿ ಬಂಧನಕ್ಕೆ ಬಲೆಬೀಸಿದೆ.
ಬೌಲರ್ ಭವೇಶ್ ಗುಲ್ಚಾ ಅವರನ್ನು ಸಂಪರ್ಕಿಸಿದ್ದ ಭವೇಶ್ ಬಫಾ° ಹಾಗೂ ಇತರ ಬುಕ್ಕಿಗಳು ಒಂದು ಓವರ್ನಲ್ಲಿ 10ಕ್ಕೂ ಹೆಚ್ಚು ರನ್ ನೀಡಿದರೆ 2 ಲಕ್ಷ ರೂ. ನೀಡುವುದಾಗಿ ಆಮಿಷವೊಡ್ಡಿದ್ದರು. ಇದಕ್ಕೆ ಗುಲ್ಚಾ ಒಪ್ಪಿರಲಿಲ್ಲ ಎಂದು ಅಧಿಕಾರಿ ಹೇಳಿದರು.