ಇ ಮೇಲ್, ಮೊಬೈಲ್ನಲ್ಲಿ ಕ್ರಿಕೆಟ್ ಕುರಿತು ಚರ್ಚೆ: ರಾಜ್ಯ ಕ್ರಿಕೆಟ್ ಸಂಸ್ಥೆ ಸೂಚನೆ
Team Udayavani, Mar 19, 2020, 8:31 AM IST
ಬೆಂಗಳೂರು: ಕೊರೊನಾ ವೈರಸ್ ಅಟ್ಟಹಾಸಕ್ಕೆ ವಿಶ್ವವೇ ಗಡಗಡ ನಡುಗಿದೆ. ಕ್ರೀಡಾ ಚಟುವಟಿಕೆಗಳೆಲ್ಲ ಸಂಪೂರ್ಣ ಸ್ಥಗಿತಗೊಂಡಿದೆ. ಇದಕ್ಕೆ ಕರ್ನಾಟಕ ಕೂಡ ಹೊರತಾಗಿಲ್ಲ, ಮುಂಬೈನಲ್ಲಿ ಬಿಸಿಸಿಐ ಕೇಂದ್ರ ಕಚೇರಿಗೆ ಬೀಗ ಜಡಿದ ಬೆನ್ನಲ್ಲೇ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಕೂಡ ಬುಧವಾರ ಸಂಪೂರ್ಣವಾಗಿ ಕಾರ್ಯ ನಿಲ್ಲಿಸಿದೆ. ಈ ಸಂಬಂಧ ಎಲ್ಲ ಪದಾಧಿಕಾರಿ, ಸಿಬ್ಬಂದಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದೆ.
ಮೇಲ್, ಮೊಬೈಲ್ ಬಳಸಿ: ಕೊರೊನಾ ಅತ್ಯಂತ ವೇಗವಾಗಿ ಹಬ್ಬುತ್ತಿರುವ ಬೆನ್ನಲ್ಲೇ ಕೆಎಸ್ಸಿಎ ಎಚ್ಚೆತ್ತುಕೊಂಡಿತ್ತು. ಮಾ.14 ರಂದೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ಕ್ಲಬ್ ಅನ್ನು ಬಂದ್ ಮಾಡಲಾಗಿತ್ತು. ಹೊರಗಿನಿಂದ ಯಾವುದೇ ವ್ಯಕ್ತಿಗಳು ಕ್ರೀಡಾಂಗಣಕ್ಕೆ ಆಗಮಿಸದಂತೆ ಎಚ್ಚರಿಕೆ ವಹಿಸಲಾಗಿತ್ತು. ಆದರೆ ಆಡಳಿತಾಧಿಕಾರಿಗಳು ಹಾಗೂ ಕಚೇರಿ ಸಿಬ್ಬಂದಿ ಯಥಾಪ್ರಕಾರವಾಗಿ ಕೆಲಸಕ್ಕೆ ಹಾಜರಾಗಿದ್ದರು, ಇದೀಗ ಸಂಪೂರ್ಣ ಕೆಎಸ್ಸಿಎ ಕಚೇರಿ ಕೆಲಸವನ್ನು ಸ್ಥಗಿತ ಮಾಡಲಾಗಿದೆ.
ಮನೆಯಿಂದಲೇ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಲಾಗಿದೆ. ಅಗತ್ಯ ಸಮಯದಲ್ಲಿ ಮನೆಯಿಂದ ಇ ಮೇಲ್ ಹಾಗೂ ಮೊಬೈಲ್ನಲ್ಲಿ ಕೆಲಸ ಮಾಡಬೇಕು ಎಂದು ಆದೇಶಿಸಿದೆ. ಆದರೆ ಕ್ರೀಡಾಂಗಣ ನಿರ್ವಹಣೆ, ದಿನನಿತ್ಯ ಕೆಲಸ ಎಂದಿನಂತೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ಕೆಎಸ್ಸಿಎ ಖಜಾಂಚಿ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ
ಸಚಿನ್, ಪಿ.ವಿ.ಸಿಂಧು ಜಾಗೃತಿ
ವಿಶ್ವಾದ್ಯಂತ ಹರಡುತ್ತಿರುವ ಕೊರೊನಾ ವೈರಸ್ ಬಗ್ಗೆ ಅನೇಕ ಕ್ರೀಡಾಪಟುಗಳು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಇದೀಗ ಭಾರತದ ಮಾಜಿ ಆಟ ಗಾರ ಸಚಿನ್ ತೆಂಡುಲ್ಕರ್ ಹಾಗೂ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಕೂಡ ವಿಡಿಯೊ ಮೂಲಕ “ಕೈತೊಳೆದು ಕೊಂಡು ಶುಚಿಯಾಗಿರಿ, ಕೊರೊನಾದಿಂದ ದೂರವಿರಿ’ ಎಂದು ಜಾಗೃತಿ ಮೂಡಿಸಿದ್ದಾರೆ.