ಮಲೇಶ್ಯ ಓಪನ್ ಬ್ಯಾಡ್ಮಿಂಟನ್: ಮೊದಲ ಸುತ್ತಿನಲ್ಲೇ ಸೈನಾಗೆ ಸೋಲು
ದ್ವಿತೀಯ ಸುತ್ತಿಗೆ ಸಿಂಧು, ಶ್ರೀಕಾಂತ್
Team Udayavani, Apr 4, 2019, 6:00 AM IST
ಕೌಲಾಲಂಪುರ: “ಮಲೇಶ್ಯಾ ಓಪನ್’ ಬ್ಯಾಡ್ಮಿಂಟನ್ ಕೂಟದಲ್ಲಿ ಭಾರತದ ಪಿ.ವಿ. ಸಿಂಧು, ಕೆ. ಶ್ರೀಕಾಂತ್ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ. ಆದರೆ ತಾರಾ ಆಟಗಾರ್ತಿ ಸೈನಾ ನೆಹ್ವಾಲ್, ಎಚ್.ಎಸ್. ಪ್ರಣಯ್, ಪುರುಷರ ಡಬಲ್ಸ್ ಜೋಡಿ ಮನು ಅತ್ರಿ-ಸುಮೀತ್ ಬಿ. ರೆಡ್ಡಿ ಮೊದಲ ಸುತ್ತಿನಲ್ಲೇ ಪರಾಭವಗೊಂಡು ಕೂಟದಿಂದ ನಿರ್ಗಮಿಸಿದ್ದಾರೆ.
ಬುಧವಾರ ನಡೆದ ವನಿತಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಪಿ.ವಿ. ಸಿಂಧು ಜಪಾನಿನ ಆಯಾ ಒಹೊರಿ ಅವರನ್ನು 22-20, 21-12 ಗೇಮ್ಗಳಿಂದ ಸೋಲಿಸಿದರು. ಮೊದಲ ಗೇಮ್ನಲ್ಲಿ ಸಿಂಧುಗೆ ಒಹೊರಿ ಅವರಿಂದ ತೀವ್ರ ಪೈಪೋಟಿ ಎದುರಾಯಿತಾದರೂ ದ್ವಿತೀಯ ಗೇಮ್ನಲ್ಲಿ ಸುಲಭ ಜಯ ಒಲಿಯಿತು. ಮುಂದಿನ ಪಂದ್ಯದಲ್ಲಿ ಸಿಂಧು ಕೊರಿಯಾದ ಸುಂಗ್ ಜಿ ಯುನ್ ಅವರನ್ನು ಎದುರಿಸಲಿದ್ದಾರೆ. ಕಳೆದ ತಿಂಗಳು ನಡೆದ “ಆಲ್ ಇಂಗ್ಲೆಂಡ್’ ಕೂಟದಲ್ಲಿ ಸುಂಗ್ ವಿರುದ್ಧ ಸಿಂಧು ಸೋತಿದ್ದರು.
ಸೈನಾಗೆ ಸೋಲಿನ ಆಘಾತ
ಸೈನಾ ನೆಹ್ವಾಲ್ ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿ ನಿರಾಸೆ ಮೂಡಿಸಿದರು. ಅವರನ್ನು ಥಾಯ್ಲೆಂಡ್ನ ಪೌರ್ಣಪವಿ ಚೊಚುವಾಂಗ್ 22-20, 21-15, 21-10 ಗೇಮ್ಗಳಿಂದ ಪರಾಭವಗೊಳಿಸಿದರು. ತೀವ್ರ ಪೈಪೋಟಿಯಿಂದ ಕೂಡಿದ ಮೊದಲ ಗೇಮ್ನಲ್ಲಿ ಸೈನಾ ಮೇಲುಗೈ ಸಾಧಿಸಿದ್ದೇ ದೊಡ್ಡ ಸಾಧನೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ “ಇಂಡಿಯಾ ಓಪನ್’ ಫೈನಲಿಸ್ಟ್ ಕೆ. ಶ್ರೀಕಾಂತ್ ಇಂಡೋನೇಶ್ಯದ ಎಹಸಾನ್ ಮೌಲಾನ ಮುಸ್ತಾಫಾ ವಿರುದ್ಧ 21-18, 21-16 ಗೇಮ್ಗಳಿಂದ ಸುಲಭ ಗೆಲುವು ಸಾಧಿಸಿ ಮುನ್ನಡೆದಿದ್ದಾರೆ. ಇನ್ನೊಂದು ಸಿಂಗಲ್ಸ್ನಲ್ಲಿ ಎಚ್.ಎಸ್. ಪ್ರಣಯ್ ಥಾಯ್ಲೆಂಡಿನ ಸಿತ್ತಿಕೋಮ್ ತಮ್ಮಸಿನ್ ವಿರುದ್ಧ 21-12, 16-21, 14-21ರಿಂದ ಪರಾಭವಗೊಂಡರು.
ಮನು-ಸುಮೀತ್ಗೆ ಸೋಲು
ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಮನು ಅತ್ರಿ-ಸುಮೀತ್ ಬಿ. ರೆಡ್ಡಿ ಜೋಡಿ ಚೀನದ ಹಾನ್ ಚೆಂಗ್ಕೈ-ಜೂ ಹಾದೊಂಗ್ ಜೋಡಿ ವಿರುದ್ಧ 16-21, 16-21 ಗೇಮ್ಗಳಿಂದ ಸೋತು ನಿರ್ಗಮಿಸಿದರು.