ಮಿಲಿಂದ್ ರೇಗೆ: ಹೀಗೊಂದು ಆಯ್ಕೆ ಸಂಯೋಗ
ಅಂದು ಸಚಿನ್, ಇಂದು ಅರ್ಜುನ್-ಇಬ್ಬರನ್ನೂ ಆಯ್ಕೆ ಮಾಡಿದ ಹೆಗ್ಗಳಿಕೆ!
Team Udayavani, Aug 10, 2019, 9:08 AM IST
ಮುಂಬಯಿ: ಮುಂಬಯಿ ರಣಜಿ ಕ್ರಿಕೆಟ್ ತಂಡದ ಮಾಜಿ ನಾಯಕ ಮಿಲಿಂದ್ ರೇಗೆ ವಿಚಿತ್ರ ಸಂಯೋಗದಿಂದ ಸುದ್ದಿಯಾಗಿದ್ದಾರೆ. ತಂದೆ ಹಾಗೂ ಮಗನನ್ನು ಮುಂಬಯಿ ತಂಡಕ್ಕೆ ಆಯ್ಕೆ ಮಾಡಿದ ಹೆಗ್ಗಳಿಕೆ ಇವರದ್ದಾಗಿದೆ.
ಈ ತಂದೆ ಮತ್ತು ಮಗ ಬೇರೆ ಯಾರೂ ಅಲ್ಲ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಮತ್ತು ಅವರ ಪುತ್ರ ಅರ್ಜುನ್ ತೆಂಡುಲ್ಕರ್!
31 ವರ್ಷಗಳ ಹಿಂದೆ ಸಚಿನ್…
31 ವರ್ಷಗಳ ಹಿಂದೆ, 1988ರಲ್ಲಿ ಸಚಿನ್ ತೆಂಡುಲ್ಕರ್ ಮೊದಲ ಸಲ ಮುಂಬಯಿ ರಣಜಿ ತಂಡಕ್ಕೆ ಆಯ್ಕೆಯಾಗುವ ವೇಳೆ ನರೇನ್ ತಮ್ಹಾನೆ ಮುಂಬಯಿ ಕ್ರಿಕೆಟ್ ಅಸೋಸಿಯೇಶನ್ ಆಯ್ಕೆ ಸಮಿತಿಯ ಅಧ್ಯಕ್ಷ ರಾಗಿದ್ದರು. ಮಿಲಿಂದ್ ರೇಗೆ ಈ ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿದ್ದರು. ಅಂದು ಗುಜರಾತ್ ವಿರುದ್ಧ ರಣಜಿಗೆ ಕಾಲಿಟ್ಟ ಸಚಿನ್, ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ್ದರು. ಮುಂದಿನ ವರ್ಷವೇ ಭಾರತ ತಂಡಕ್ಕೆ ಆಯ್ಕೆಯಾದರು. ಅನಂತರದ್ದೆಲ್ಲ ಇತಿಹಾಸ.
ಈಗ ಮಿಲಿಂದ್ ರೇಗೆ ಮುಂಬಯಿ ಕ್ರಿಕೆಟ್ ಅಸೋಸಿಯೇಶನ್ ಆಯ್ಕೆ ಸಮಿತಿಯ ಅಧ್ಯಕ್ಷ. ಮುಂಬರುವ “ವಿಜಿ ಟ್ರೋಫಿ’ ಸರಣಿಗಾಗಿ ಅರ್ಜುನ್ ತೆಂಡುಲ್ಕರ್ ಅವರನ್ನು ಮುಂಬಯಿ ತಂಡಕ್ಕೆ ಆಯ್ಕೆ ಮಾಡಿದ್ದಾರೆ. ಇದು ಬಿಸಿಸಿಐ ಆಯೋಜಿಸುವ ಅಂಡರ್-23 ವಯೋಮಿತಿಯ ಕ್ರಿಕೆಟ್ ಪಂದ್ಯಾವಳಿಯಾಗಿದೆ.
ಇದು ಕಾಕತಾಳೀಯ
ಈ ಆಯ್ಕೆ ಸಂಯೋಗದ ಬಗ್ಗೆ ಸ್ವತಃ ಮಿಲಿಂದ್ ರೇಗೆ ಅವರೇ ಹೇಳಿಕೊಂಡಿದ್ದಾರೆ. “ತಂದೆ ಮತ್ತು ಮಗ, ಇಬ್ಬರನ್ನೂ ಕ್ರಿಕೆಟ್ ತಂಡಕ್ಕೆ ಆರಿಸಿದ ಮತ್ತೂಬ್ಬ ಆಯ್ಕೆಗಾರನ ಬಗ್ಗೆ ನನಗೆ ತಿಳಿದಿಲ್ಲ. ಇದೊಂದು ಕಾಕತಾಳೀಯ ವಿದ್ಯಮಾನ. ಇಬ್ಬರೂ ತೆಂಡುಲ್ಕರ್ ಆಗಿರುವುದೊಂದು ವಿಶೇಷ’ ಎಂದಿದ್ದಾರೆ.