800 ಕೋಟಿ ರೂ. ಒಡೆಯ ಎಂ.ಎಸ್.ಧೋನಿ ನೀಡಿದ್ದು 1 ಲಕ್ಷ ರೂ.?
Team Udayavani, Mar 28, 2020, 9:00 AM IST
ಪುಣೆ: ಕೊರೊನಾ ವೈರಸ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಮಹಾರಾಷ್ಟ್ರದ ಪುಣೆಯ ದಿನಗೂಲಿ ನೌಕರರಿಗಾಗಿ ಖ್ಯಾತ ಕ್ರಿಕೆಟಿಗ ಎಂ.ಎಸ್.ಧೋನಿ 1 ಲಕ್ಷ ರೂ. ನೆರವನ್ನು ನೀಡಿದ್ದಾರೆ.
ಪುಣೆಯ ಸರ್ಕಾರೇತರ ಸಂಘ ಸಂಸ್ಥೆ (ಎನ್ಜಿಒ) “ಮುಕುಲ್ ಮಹದೇವ್ ಫೌಂಡೇಷನ್’ಗೆ ಈ ಹಣ ನೀಡಿದ್ದಾರೆ. ಧೋನಿಯ ಈ ನಡೆ ಅತ್ಯಂತ ಹೃದಯಸ್ಪರ್ಶಿ ಎಂದು ಗೌರವಿಸಲ್ಪಟ್ಟಿದ್ದರೂ, ಕೆಲವು ಕುಹಕಿಗಳು ಅದನ್ನೂ ಟೀಕಿಸಿದ್ದಾರೆ. 800 ಕೋಟಿ ರೂ. ನಿವ್ವಳ ಆಸ್ತಿ ಮೌಲ್ಯವನ್ನು ಹೊಂದಿರುವ ಧೋನಿ, ಕೊಟ್ಟಿದ್ದು ಬರೀ ಒಂದು ಲಕ್ಷವನ್ನೇ ಎಂದು ಪ್ರಶ್ನಿಸಿದ್ದಾರೆ. “ಇಂದು ದುಡಿದು ಇಂದೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಹಲವು ಹಲವು ಕುಟುಂಬಗಳು ಅನ್ನ ಆಹಾರವಿಲ್ಲದೆ ಕಷ್ಟಕ್ಕೆ ಸಿಲುಕಿವೆ, ಅವರಿಗೆ ನೆರವು ನೀಡಿ’ ಎಂದು ಸಂಸ್ಥೆ ಕೇಳಿಕೊಂಡಿತ್ತು. ಅದಕ್ಕೆ ಧೋನಿ ಕೂಡಲೇ ಸ್ಪಂದಿಸಿದ್ದಾರೆ.
ಧೋನಿ ಪತ್ನಿ ಸಾಕ್ಷಿ ಕೂಡ ಜನರು ನೆರವಿಗೆ ಬರುವಂತೆ ಮನವಿ ಮಾಡಿದ್ದಾರೆ. ಧೋನಿ ದೇಣಿಗೆ ನೀಡಿದ ಬಳಿಕ ಒಟ್ಟು 12 ಲಕ್ಷ ರೂ.ವನ್ನು ಸಂಸ್ಥೆ ಸಂಗ್ರಹಿಸಿದೆ, ಈ ಹಣದಲ್ಲಿ ಬಡವರಿಗೆ ಅಕ್ಕಿ, ಬೇಳೆ ಸೇರಿದಂತೆ ಉಪಯುಕ್ತ ವಸ್ತುಗಳನ್ನು ಖರೀದಿಸಿ ನೀಡಲಾಗುತ್ತದೆ.