ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ; ಆಯ್ಕೆ ಸಮಿತಿಯಲ್ಲಿ ಮೇರಿ, ಭುಟಿಯ
Team Udayavani, Aug 9, 2019, 9:22 AM IST
ಹೊಸದಿಲ್ಲಿ: ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ಆಯ್ಕೆಗಾಗಿ 12 ಸದಸ್ಯರ ನೂತನ ಆಯ್ಕೆ ಸಮಿತಿಯನ್ನು ರಚಿಸಲಾಗಿದ್ದು, ಇದರಲ್ಲಿ 6 ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಮತ್ತು ಭಾರತೀಯ ಫುಟ್ಬಾಲ್ ತಂಡದ ಮಾಜಿ ನಾಯಕ ಬೈಚುಂಗ್ ಭುಟಿಯ ಸೇರಿದ್ದಾರೆ.
“ಎಲ್ಲ ಪ್ರಶಸ್ತಿಗಳಿಗೆ ಒಂದೇ ಆಯ್ಕೆ ಸಮಿತಿ ಕ್ರೀಡಾ ಸಾಧಕರನ್ನು ಆರಿಸುವುದು ನಮ್ಮ ನೂ ತನ ಪರಿಕಲ್ಪನೆಯಾಗಿದೆ. ಇದಕ್ಕಾಗಿ ಹಲವು ಸಮಿತಿಗಳು ಅನಗತ್ಯ’ ಎಂಬುದಾಗಿ ಕ್ರೀಡಾ ಸಚಿವಾಲಯದ ಮೂಲವೊಂದು ತಿಳಿಸಿದೆ.
ನ್ಯಾ| ಮುಕುಂದಕಮ್ ಅಧ್ಯಕ್ಷ
12 ಸದಸ್ಯರ ಈ ಆಯ್ಕೆ ಸಮಿತಿಗೆ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಮುಕುಂದಕಮ್ ಶರ್ಮ ಅಧ್ಯಕ್ಷರಾಗಿದ್ದಾರೆ. ಕ್ರೀಡಾ ಕಾರ್ಯದರ್ಶಿ ರಾಧೇಶ್ಯಾಮ್ ಜುಲಾನಿಯ, ಸಾಯ್ ನಿರ್ದೇಶಕ ಜ| ಸಂದೀಪ್ ಪ್ರಧಾನ್, ಟಾಪ್ಸ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಮಾಂಡರ್ ರಾಜೇಶ್ ರಾಜಗೋಪಾಲನ್, ವನಿತಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಅಂಜುಮ್ ಚೋಪ್ರ, ಮಾಜಿ ಲಾಂಗ್ಜಂಪರ್ ಅಂಜು ಬಾಬ್ಬಿ ಜಾರ್ಜ್, ಟಿಟಿ ಕೋಚ್ ಕಮಲೇಶ್ ಮೆಹ್ತಾ ಮೊದಲಾದವರು ಆಯ್ಕೆ ಸಮಿತಿಯಲ್ಲಿರುವ ಪ್ರಮುಖರು. ಇವರ ಜತೆಗೆ ಪತ್ರಕರ್ತ ರಾಜೇಶ್ ಕಾಲಾ, ವೀಕ್ಷಕ ವಿವರಣಕಾರ ಚಾರು ಶರ್ಮ ಕೂಡ ಇದ್ದಾರೆ.
ಈ ಸಮಿತಿ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ರತ್ನ, ಅರ್ಜುನ, ದ್ರೋಣಾಚಾರ್ಯ, ಧ್ಯಾನ್ಚಂದ್, ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪ್ರಶಸ್ತಿಗಾಗಿ ಕ್ರೀಡಾ ಸಾಧಕರನ್ನು ಆರಿಸಲಿದ್ದಾರೆ. ಹಾಕಿ ಮಾಂತ್ರಿಕ ಧ್ಯಾನ್ಚಂದ್ ಅವರ ಜನ್ಮದಿನವಾದ ಆ. 29ರ “ರಾಷ್ಟ್ರೀಯ ಕ್ರೀಡಾ ದಿನ’ದಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಮುಂದಿನ ವಾರ ಆಯ್ಕೆ ಸಮಿತಿಯ ಮೊದಲ ಸಭೆ ನಡೆಯಲಿದೆ. ಈ ವಾರಾಂತ್ಯದಲ್ಲಿ ಪ್ರಶಸ್ತಿ ವಿಜೇತ ಕ್ರೀಡಾಪಟುಗಳ ಯಾದಿ ಅಂತಿಮಗೊಳ್ಳುವ ಸಂಭವವಿದೆ.