ಚಾಹಲ್, ಯಾದವ್ ಎದುರಿಸಲು ಬೇರೇಯೇ ಗೇಮ್ಪ್ಲ್ರಾನ್ ಬೇಕು
Team Udayavani, Feb 9, 2018, 6:15 AM IST
ಕೇಪ್ಟೌನ್:ಭಾರತದ ಘಾತಕ ಸ್ಪಿನ್ನರ್ಗಳಾದ ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಅವರನ್ನು ಎದುರಿಸಲು ನಾವು ಬೇರೆಯೇ ಆದ ಗೇಮ್ಪ್ಲ್ರಾನ್ ರೂಪಿಸಬೇಕಾದ ಅಗತ್ಯವಿದೆ ಎಂಬುದಾಗಿ ದಕ್ಷಿಣ ಆಫ್ರಿಕಾ ತಂಡದ ಅನುಭವಿ ಆಟಗಾರ ಜೆಪಿ ಡ್ಯುಮಿನಿ ಅಭಿಪ್ರಾಯಪಟ್ಟಿದ್ದಾರೆ. ಈವರೆಗಿನ ಮೂರೂ ಪಂದ್ಯಗಳಲ್ಲಿ ಇವರ ಸ್ಪಿನ್ ಬಲೆಗೆ ಸಿಲುಕಿದ ಆಫ್ರಿಕಾ ಈಗ ಸರಣಿ ಸೋಲಿನತ್ತ ಮುಖ ಮಾಡಿ ನಿಂತಿರುವ ಸಂದರ್ಭದಲ್ಲಿ ಡ್ಯುಮಿನಿ ಈ ಹೇಳಿಕೆ ನೀಡಿದ್ದಾರೆ.
“ಇಲ್ಲಿನ ವಾತಾವರಣ ಹಾಗೂ ಪರಿಸ್ಥಿತಿಗೆ ಏನು ಬೇಕೋ, ಎಷ್ಟು ಬೇಕೋ… ಅದನ್ನೆಲ್ಲ ಈ ಸ್ಪಿನ್ ಜೋಡಿ ಅಚ್ಚುಕಟ್ಟಾಗಿ ನಿಭಾಯಿಸುತ್ತ ಬಂದಿದೆ. ಎಸೆತಗಳಿಗೆ ಎಷ್ಟು ವೇಗ ಇರಬೇಕು, ಲೆಂತ್ ಹೇಗಿರಬೇಕು ಎಂಬುದನ್ನು ಚೆನ್ನಾಗಿ ಅರಿತು ದಾಳಿ ನಡೆಸುತ್ತಿದ್ದಾರೆ. ನಮಗೆ ಸಿಂಗಲ್ಸ್ ಕೂಡ ಗಳಿಸಲಾಗುತ್ತಿಲ್ಲ’ ಎಂದು ಡ್ಯುಮಿನಿ ಅಸಹಾಯಕತೆ ವ್ಯಕ್ತಪಡಿಸಿದರು.
“ಇವರ ಗೂಗ್ಲಿ ಎಸೆತಗಳನ್ನು ಈವರೆಗೆ ನಾವ್ಯಾರೂ ಎದುರಿಸಿದವರಲ್ಲ. ಹೀಗಾಗಿ ಕಷ್ಟವಾಗುತ್ತಿದೆ. ನಮ್ಮ ಗೇಮ್ಪ್ಲ್ರಾನ್ ಪ್ರಕಾರ ಆಡಲು ಸಾಧ್ಯವೇ ಆಗುತ್ತಿಲ್ಲ. ಇದಕ್ಕೆ ಬೇರೆಯೇ ಕಾರ್ಯತಂತ್ರ ರೂಪಿಸಿ ಸರಣಿ ಉಳಿಸಿಕೊಳ್ಳಲು ಪ್ರಯತ್ನಿಸಬೇಕಿದೆ…’ ಎಂದು ಡ್ಯುಮಿನಿ ಹೇಳಿದರು.