“ಚೆನ್ನೈ ಪರ ಆಡಿದ್ದು ನೆರವಿಗೆ ಬಂತು’
Team Udayavani, Nov 12, 2019, 5:18 AM IST
ನಾಗ್ಪುರ: ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದು ತನ್ನ ವಿಶ್ವದಾಖಲೆಯ ಬೌಲಿಂಗಿಗೆ ಕಾರಣ ಎಂದಿದ್ದಾರೆ ನಾಗ್ಪುರ ಪಂದ್ಯದ ಹೀರೋ ದೀಪಕ್ ಚಹರ್.
“ರಾತ್ರಿಯ ಮಂಜು ಮತ್ತು ಬೆವರಿನ ಸಮಸ್ಯೆಯನ್ನು ಹೇಗೆ ನೀಗಿಸಕೊಳ್ಳಬೇಕು ಎಂಬುದು ಚೆನ್ನೈಯಲ್ಲಿ ಆಡುವಾಗ ಅರಿವಾಯಿತು. ಇಂಥ ಸಂದರ್ಭದಲ್ಲಿ ಕೈಗಳನ್ನು ಒದ್ದೆಯಾಗದಂತೆ ನೋಡಿಕೊಳ್ಳಬೇಕು. ಒಣಮಣ್ಣನ್ನು ಕೈಗೆ ತಿಕ್ಕಿಕೊಳ್ಳುತ್ತ ಉಳಿದುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳತೊಡಗಿದೆ’ ಎಂದು ಬಿಸಿಸಿಐ ವೆಬ್ಸೈಟ್ಗೆ ಯಜುವೇಂದ್ರ ಚಹಲ್ ನಡೆಸಿಕೊಟ್ಟ ಸಂದರ್ಶನದ ವೇಳೆ ಚಹರ್ ಹೇಳಿದರು.
ಈ ಪಂದ್ಯಕ್ಕಾಗಿ ಬೌಲಿಂಗ್ ತಂತ್ರಗಾರಿಕೆ ಏನಾಗಿತ್ತು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚಹರ್, “ದೊಡ್ಡ ಕ್ರೀಡಾಂಗಣವಾದ್ದರಿಂದ ಕೆಲವೆಡೆ ಇಲ್ಲಿನ ಬೌಂಡರಿ ದೂರ ಕೂಡ ಹೆಚ್ಚಿತ್ತು. ಹೀಗಾಗಿ ಬ್ಯಾಟ್ಸ್ ಮನ್ಗಳನ್ನು ಅದೇ ದಿಕ್ಕಿನಲ್ಲಿ ದೊಡ್ಡ ಹೊಡೆತಗಳಿಗೆ ಪ್ರಚೋದಿಸಬೇಕಿತ್ತು. ಇದರಲ್ಲಿ ಯಶಸ್ಸು ಕಂಡೆ’ ಎಂದರು.