ಸಂದೀಪ್ ಸೆಳೆಯಲು ವಿಫಲ; ಪ್ರೀತಿ ಜಿಂಟಾಗೆ ಬೇಸರ
Team Udayavani, Feb 1, 2018, 6:15 AM IST
ಮೊಹಾಲಿ: ಮೊನ್ನೆಯ ಐಪಿಎಲ್ ಹರಾಜಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸಿ ಅತ್ಯಂತ ಹುರುಪಿನಿಂದ ಪಾಲ್ಗೊಂಡು, ಸ್ಟಾರ್ ಕ್ರಿಕೆಟಿಗರನೇಕರನ್ನು ಬುಟ್ಟಿಗೆ ಹಾಕಿಕೊಂಡು ಸುದ್ದಿಯಾಯಿತು. ಮುಖ್ಯವಾಗಿ, ಕರ್ನಾಟಕದ ಕೆ.ಎಲ್. ರಾಹುಲ್ ಅವರನ್ನು 11 ಕೋ.ರೂ.ಗೆ, ಯಾರಿಗೂ ಬೇಡವಾಗಿದ್ದ ಕ್ರಿಸ್ ಗೇಲ್ ಅವರನ್ನು 2 ಕೋ.ರೂ. ಮೊತ್ತಕ್ಕೆ ಸೆಳೆದು ಎಲ್ಲರ ಗಮನ ಸೆಳೆಯಿತು.
ಕೇವಲ ಅಕ್ಷರ್ ಪಟೇಲ್ ಅವರನ್ನಷ್ಟೇ ಉಳಿಸಿಕೊಂಡ ಪಂಜಾಬ್, ಬಳಿಕ ಆರ್ಟಿಎಮ್ ಮೂಲಕ ಡೇವಿಡ್ ಮಿಲ್ಲರ್, ಮಾರ್ಕಸ್ ಸ್ಟೊಯಿನಿಸ್, ಮೋಹಿತ್ ಶರ್ಮ ಅವರನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಯಿತು. ಆದರೂ ಫ್ರಾಂಚೈಸಿ ಮಾಲಕಿ ಪ್ರೀತಿ ಜಿಂಟಾ ಅವರಿಗೆ ಓರ್ವ ಕ್ರಿಕೆಟಿಗನನ್ನು ತಂಡಕ್ಕೆ ಸೇರಿಸಿಕೊಳ್ಳಲಾಗದ ಬಗ್ಗೆ ಬೇಸರವಿದೆ. ಈ ಕ್ರಿಕೆಟಿಗ ಬೇರ್ಯಾರೂ ಅಲ್ಲ, ಸ್ಪೀಡ್ಸ್ಟರ್ ಸಂದೀಪ್ ಶರ್ಮ. ಇಷ್ಟು ವರ್ಷ ಪಂಜಾಬ್ ತಂಡದ ಪ್ರಮುಖ ವೇಗಿಯಾಗಿದ್ದ ಸಂದೀಪ್ ಶರ್ಮ ಅವರನ್ನು ಈ ಬಾರಿ ಸನ್ರೈಸರ್ ಹೈದರಾಬಾದ್ 3 ಕೋ.ರೂ.ಗೆ ಖರೀದಿಸಿದೆ. ಶರ್ಮ ಅವರನ್ನು ಆರ್ಟಿಎಮ್ ಮೂಲಕ ಪಡೆಯಲು ಪಂಜಾಬ್ಗ ಸಾಧ್ಯವಾಗಲಿಲ್ಲ.
“ಸ್ಯಾಂಡಿಯನ್ನು (ಸಂದೀಪ್ ಶರ್ಮ) ಮರಳಿ ತಂಡಕ್ಕೆ ಸೇರಿಸಿಕೊಳ್ಳಲಾಗದಿದ್ದುದು ನನಗೆ ನಿಜಕ್ಕೂ ಬೇಸರ ಹಾಗೂ ಆಘಾತವನ್ನುಂಟು ಮಾಡಿದೆ. ಅವರೋರ್ವ ಕಠಿನ ಪರಿಶ್ರಮಿ. ಇದಕ್ಕೀಗ ಸೂಕ್ತ ಬೆಲೆ ಲಭಿಸಿದರೂ ಅವರು ಪಂಜಾಬ್ ತಂಡದಲ್ಲಿಲ್ಲ ಎಂಬ ಕೊರಗು ಮಾತ್ರ ಹಾಗೆಯೇ ಉಳಿಯುತ್ತದೆ’ ಎಂದು ಪ್ರೀತಿ ಜಿಂಟಾ ಪ್ರತಿಕ್ರಿಯಿಸಿದ್ದಾರೆ.