ಹರಿಯಾಣಕ್ಕೆ ಶರಣಾದ ಮುಂಬಾ
Team Udayavani, Oct 5, 2017, 6:10 AM IST
ಚೆನ್ನೈ: ಪ್ರೊ ಕಬಡ್ಡಿ ಲೀಗ್ ಐದರ ಚೆನ್ನೈ ಚರಣದ ಎ ವಲಯದ ಬುಧವಾರದ ಮೊದಲ ಪಂದ್ಯದಲ್ಲಿ ಎರಡು ಬಾರಿ ಆಲೌಟ್ ಸಂಕಟಕ್ಕೆ ಸಿಲುಕಿದ ಮುಂಬಾ ತಂಡ 30-41 ಅಂಕಗಳಿಂದ ಹರಿಯಾಣ ಸ್ಟೀಲರ್ಗೆ ಶರಣಾಯಿತು.
ಇಲ್ಲಿನ ಜವಹರ್ಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಹೋರಾಟದ ಆರಂಭದಲ್ಲಿ ಎರಡೂ ತಂಡಗಳು ಸಮಬಲದ ಕಾದಾಟ ನಡೆಸಿದವು. ಆದರೆ ವಿಕಾಸ್ ಖಂಡೋಲ, ವಜೀರ್ ಸಿಂಗ್ ಮತ್ತು ದೀಪಕ್ ಕುಮಾರ್ ದಹಿಯ ಅವರ ಭರ್ಜರಿ ಆಟದಿಂದಾಗಿ ಹರಿಯಾಣ ಮೇಲುಗೈ ಸಾಧಿಸಿತು. 2 ಬಾರಿ ಮುಂಬಾ ಆಲೌಟ್ಗೆ ಗುರಿಯಾದ ಕಾರಣ ಸೋಲು ಕಾಣುಂತಾಯಿತು. ಈ ಗೆಲುವಿನಿಂದ ಹರಿಯಾಣ ತಾನಾಡಿದ ಒಟ್ಟು 19 ಪಂದ್ಯಗಳಿಂದ 10ನೇ ಗೆಲುವು ದಾಖಲಿಸಿ 64 ಅಂಕ ಪಡೆದು ಸೂಪರ್ ಪ್ಲೇ ಆಫ್ಗೆ ತೇರ್ಗಡೆಯಾಗುವ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿತು. ಸೋತ ಮುಂಬಾಗೂ ಮುನ್ನಡೆಯುವ ಅವಕಾಶವಿದೆ. ಆದರೆ ಮುಂದಿನ ಮೂರು ಪಂದ್ಯಗಳಲ್ಲಿ ಅದು ಗೆಲ್ಲಬೇಕಾದ ಅನಿವಾರ್ಯತೆಯಿದೆ.
ದ್ವಿತೀಯ ಅವಧಿ ಆರಂಭವಾಗಿ 8 ನಿಮಿಷ ಮುಗಿದಾಗ ವಿಕಾಸ್ ಸ್ನಾಯು ಸೆಳತಕ್ಕೆ ಒಳಗಾದರು. ಆಬಳಿಕ ಅವರು ಅಂಗಣಕ್ಕೆ ಬರಲಿಲ್ಲ. ಆದರೂ ಹರಿಯಾಣ ದೀಪಕ್ ಮತ್ತು ವಜೀರ್ ಅವರ ಮಿಂಚಿನಾಟದಿಂದ ಮೇಲುಗೈ ಸಾಧಿಸಲು ಯಶಸ್ವಿಯಾಯಿತು. ವಿಕಾಸ್ 8 ಅಂಕ ಪಡೆದರೆ ದೀಪಕ್ ಕುಮಾರ್ ದಹಿಯ 8 ಅಂಕ ಮತ್ತು ವಜೀರ್ ಸಿಂಗ್ 7 ಅಂಕ ಗಳಿಸಿದರು.
ಮುಂಬಾ ಗೆಲುವಿಗೆ ಶಕ್ತಿಮೀರಿ ಪ್ರಯತ್ನಿಸಿದ ನಾಯಕ ಅನೂಪ್ ಕುಮಾರ್ 10 ಅಂಕ ಪಡೆದರೆ, ಶ್ರೀಕಾಂತ್ ಜಾಧವ್ 5 ಅಂಕ, ಅಡಕೆ ಮತ್ತು ಶಬ್ಬೀರ್ 3 ಮೂರು ಅಂಕ ಗಳಿಸಿದರು.
ಹರಿಯಾಣ ಮುನ್ನಡೆ
ಮೊದಲ ನಿಮಿಷದಲ್ಲಿಯೇ ಅನೂಪ್ ಅವರನ್ನು ಹಿಡಿದು ಹರಿಯಾಣ ಮುನ್ನಡೆ ಸಾಧಿಸಿದರೂ 4ನೇ ನಿಮಿಷದಲ್ಲಿ ಮುಂಬಾ 3-3ರಿಂದ ಸಮಬಲ ಸಾಧಿಸಲು ಯಶಸ್ವಿಯಾಯಿತು. ಆಬಳಿಕ ಎರಡೂ ತಂಡಗಳು ಸಮಬಲದ ಹೋರಾಟ ನೀಡಿದ್ದರಿಂದ ಮೊದಲ 10 ನಿಮಿಷದ ಆಟ ಮುಗಿದಾಗ 8-6ರಿಂದ ಹರಿಯಾಣ ಮುನ್ನಡೆಯಲ್ಲಿತ್ತು.
12ನೇ ನಿಮಿಷದಲ್ಲಿ ಅನೂಪ್ ಸೂಪರ್ ರೈಡ್ ಮೂಲಕ ಮೂರಂಕ ಪಡೆದು ಮುಂಬಾಗೆ ಮುನ್ನಡೆ ಒದಗಿಸಿದರು. ಆದರೆ ಆಬಳಿಕ ವಿಕಾಸ್ ಖಂಡೋಲ ಭರ್ಜರಿ ಆಟ ಆಡಿದ್ದರಿಂದ ಹರಿಯಾಣದ ಮೊತ್ತ ಏರತೊಡಗಿತು. ರೈಡ್ ಮತ್ತು ಟ್ಯಾಕಲ್ನಲ್ಲಿ ಮಿಂಚಿದ ಹರಿಯಾಣ 17ನೇ ನಿಮಿಷದಲ್ಲಿ ಮುಂಬಾ ತಂಡವನ್ನು ಆಲೌಟ್ ಮಾಡಿಸಿ ಮುನ್ನಡೆಯನ್ನು 19-14ಕ್ಕೇರಿಸಿತು. ಮೊದಲ ಅವಧಿಯ ಆಟ ಮುಗಿದಾಗ ಹರಿಯಾಣ 22-16ರಿಂದ ಮುನ್ನಡೆ ಸಾಧಿಸಿತ್ತು.
ದ್ವಿತೀಯ ಅವಧಿ ಆರಂಭವಾಗಿ 8ನೇ ನಿಮಿಷದಲ್ಲಿ ವಿಕಾಸ್ ಸ್ನಾಯು ಸೆಳೆತಕ್ಕೆ ಒಳಗಾಗಿ ಅಂಗಣದಿಂದ ಹೊರನಡೆದರು. ಅವರು ಮತ್ತೆ ಅಂಗಣಕ್ಕೆ ಇಳಿಯಲಿಲ್ಲ. ಆಬಳಿಕ ದೀಪಕ್ ಮತ್ತು ವಝೀರ್ ಭರ್ಜರಿ ಆಟವಾಡಿದ್ದರಿಂದ ಹರಿಯಾಣದ ಮುನ್ನಡೆ ಏರತೊಡಗಿತು. ಪಂದ್ಯ ಮುಗಿಯಲು 5 ನಿಮಿಷವಿರುವಾಗ ಮುಂಬಾ ಎರಡನೇ ಬಾರಿ ಆಲೌಟಾಯಿತು. ಅಂತಿಮವಾಗಿ 30-41ರಿಂದ ಹರಿಯಾಣಕ್ಕೆ ಶರಣಾಯಿತು.
– ಶಂಕರನಾರಾಯಣ.ಪಿ