ಇಂಡೋನೇಷ್ಯಾ ಮಾಸ್ಟರ್: ಸಿಂಧು, ಶ್ರೀಕಾಂತ್ ಸೆಮಿಫೈನಲ್ ಪ್ರವೇಶ
ಶ್ರೀಕಾಂತ್ಗೆ ಶರಣಾದ ಪ್ರಣಯ್
Team Udayavani, Nov 20, 2021, 5:00 AM IST
ಬಾಲಿ (ಇಂಡೋನೇಷ್ಯ): ಪಿ.ವಿ. ಸಿಂಧು ಮತ್ತು ಕಿಡಂಬಿ ಶ್ರೀಕಾಂತ್ ಇಂಡೋನೇಷ್ಯಾ ಮಾಸ್ಟರ್ ಸೂಪರ್ 750 ಬ್ಯಾಡ್ಮಿಂಟನ್ ಪಂದ್ಯಾವಳಿಯ ಸೆಮಿಫೈನಲ್ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.
ಶುಕ್ರವಾರದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ತೃತೀಯ ಶ್ರೇಯಾಂಕದ ಸಿಂಧು ಟರ್ಕಿಯ ಶ್ರೇಯಾಂಕ ರಹಿತ ಆಟಗಾರ್ತಿ ನೆಸ್ಲಿಹಾನ್ ಯಿಗಿಟ್ ಅವರನ್ನು 21-13, 21-10 ಅಂತರದಿಂದ ಸುಲಭದಲ್ಲಿ ಪರಾಭವಗೊಳಿಸಿದರು. ಇದರೊಂದಿಗೆ ಯಿಗಿಟ್ ವಿರುದ್ಧ ಆಡಿದ ಎಲ್ಲ 4 ಪಂದ್ಯಗಳಲ್ಲೂ ಸಿಂಧು ಮೇಲುಗೈ ಸಾಧಿಸಿದಂತಾಯಿತು. ಕಳೆದ ತಿಂಗಳ ಡೆನ್ಮಾರ್ಕ್ ಓಪನ್ ಪಂದ್ಯಾವಳಿಯಲ್ಲೂ ಯಿಗಿಟ್ ಅವರನ್ನು ಸಿಂಧು ಹಿಮ್ಮೆಟ್ಟಿಸಿದ್ದರು.
ಇಲ್ಲಿಯ ತನಕ ಸಿಂಧು ಅವರಿಗೆ ಸುಲಭ ಎದುರಾಳಿಗಳೇ ಸಿಕ್ಕಿದ್ದರು. ಮುಂದಿನ ಸವಾಲು ಕಠಿಣವಾಗಲಿದೆ. ಸೆಮಿಫೈನಲ್ನಲ್ಲಿ ಅಗ್ರ ಶ್ರೇಯಾಂಕದ ಅಕಾನೆ ಯಮಾಗುಚಿ ಅವರನ್ನು ಸಿಂಧು ಎದುರಿಸಬೇಕಿದೆ. ದಿನದ ಇನ್ನೊಂದು ಕ್ವಾರ್ಟರ್ ಫೈನಲ್ನಲ್ಲಿ ಅವರು ಥಾಯ್ಲೆಂಡ್ನ ಪೋರ್ಣಪವೀ ಚೊಚುವೋಂಗ್ ವಿರುದ್ಧ 8-21, 21-12, 21-10 ಅಂತರದ ಜಯ ಸಾಧಿಸಿದರು.
ಇದನ್ನೂ ಓದಿ:ಕೈಗೆ ಗಾಯ: ಎರಡನೇ ಟಿ20ಯಿಂದ ಸಿರಾಜ್ ಹೊರಗೆ;ಹರ್ಷಲ್ ಪಟೇಲ್ ಪಾದಾರ್ಪಣೆ
ಆಲ್ ಇಂಡಿಯನ್ ಹಣಾಹಣಿ
ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ನ ಆಲ್ ಇಂಡಿಯನ್ ಹಣಾಹಣಿಯಲ್ಲಿ ಕೆ. ಶ್ರೀಕಾಂತ್ ಗೆದ್ದು ಬಂದರು. ಅವರು ಎಚ್.ಎಸ್ ಪ್ರಣಯ್ ವಿರುದ್ಧ 21-7, 21-18 ಅಂತರದ ಮೇಲುಗೈ ಸಾಧಿಸಿದರು. ಪ್ರಣಯ್ ಟೋಕಿಯೊ ಒಲಿಂಪಿಕ್ಸ್ ಬಂಗಾರ ವಿಜೇತ ವಿಕ್ಟರ್ ಅಕ್ಸೆಲ್ಸೆನ್ ಅವರನ್ನು ಸೋಲಿಸಿ ಸುದ್ದಿಯಾಗಿದ್ದರು.