ಸ್ವಹಿತಾಸಕ್ತಿ ಸಂಘರ್ಷ: ದ್ರಾವಿಡ್ ನಿರಾಳ
Team Udayavani, Nov 15, 2019, 5:54 AM IST
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಸ್ವಹಿತಾಸಕ್ತಿ ವಿವಾದದಿಂದ ಬಿಡುಗಡೆಯಾಗಿದ್ದಾರೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ನೂತನ ಅಧ್ಯಕ್ಷರಾಗಿರುವ ಅವರು, ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ತಂಡದ ಮಾಲಕ ಸಂಸ್ಥೆ ಇಂಡಿಯಾ ಸಿಮೆಂಟ್ಸ್ ಉಪಾಧ್ಯಕ್ಷರೂ ಆಗಿದ್ದಾರೆ. ಇದು ಸ್ವಹಿತಾಸಕ್ತಿ ಎಂದು ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ಆಜೀವ ಸದಸ್ಯ ಸಂಜೀವ್ ಗುಪ್ತಾ ದೂರು ಸಲ್ಲಿಸಿದ್ದರು.
ಇದನ್ನು ಸತತವಾಗಿ ವಿಚಾರಣೆ ನಡೆಸಿದ್ದ, ಬಿಸಿಸಿಐ ನೈತಿಕ ವಿಚಾರಣಾಧಿಕಾರಿ ಡಿ.ಕೆ. ಜೈನ್, ಕಡೆಗೂ ದ್ರಾವಿಡ್ ಪರವಾಗಿ ತೀರ್ಪು ನೀಡಿದ್ದಾರೆ. “ದ್ರಾವಿಡ್ ವಿರುದ್ಧದ ದೂರಿನಲ್ಲಿ ಯಾವುದೇ ಸತ್ವವಿಲ್ಲ. ಈ ದೂರನ್ನು ನಾನು ತಿರಸ್ಕರಿಸಿದ್ದೇನೆ. ದ್ರಾವಿಡ್ ಯಾವುದೇ ರೀತಿಯಲ್ಲೂ ಸ್ವಹಿತಾಸಕ್ತಿ ಸಮಸ್ಯೆಯನ್ನು ಹೊಂದಿಲ್ಲ’ ಎಂದು ಜೈನ್ ಹೇಳಿದ್ದಾರೆ.