ಮತ್ತೆ ತಂಡಕ್ಕೆ ಆಯ್ಕೆಯಾಗಲು ದ್ರಾವಿಡ್ ಕಾರಣ: ಕೆ.ಎಲ್.ರಾಹುಲ್
Team Udayavani, Feb 28, 2019, 9:02 AM IST
ಬೆಂಗಳೂರು: ಕಾಫಿ ಬ್ರೇಕ್ ನಿಂದಾಗಿ ಕೆಲ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದಾಗಿ ದೂರ ಉಳಿದಿದ್ದ ಕನ್ನಡಿಗ ಕೆ.ಎಲ್.ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಭರ್ಜರಿಯಾಗಿಯೇ ವಾಪಾಸಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಎರಡೂ ಟಿ-ಟ್ವೆಂಟಿ ಪಂದ್ಯಗಳಲ್ಲಿ ರಾಹುಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ತಾನು ಮತ್ತೆ ಬ್ಯಾಟಿಂಗ್ ಲಯ ಕಂಡುಕೊಂಡು ತಂಡಕ್ಕೆ ಆಯ್ಕೆಯಾಗಲು ರಾಹುಲ್ ದ್ರಾವಿಡ್ ಅವರೇ ಕಾರಣ ಎಂದು ರಾಹುಲ್ ಹೇಳಿಕೆ ನೀಡಿದ್ದಾರೆ.
ಬುಧವಾರ ರಾತ್ರಿ ಬೆಂಗಳೂರಿನಲ್ಲಿ ನಡೆದ ಪಂದ್ಯದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ರಾಹುಲ್, ಕೆಲ ದಿನಗಳಿಂದ ನಾನು ಅಂತಾರಾಷ್ಟ್ರೀಯ ಪಂದ್ಯಗಳಿಂದ ದೂರವಿದ್ದೆ. ಭಾರತ ಏ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದ್ದರಿಂದ ನನಗೆ ಮತ್ತೆ ಫಾರ್ಮ್ ಗೆ ಮರಳಲು ಸಾಧ್ಯವಾಯಿತು. ಆ ಸಮಯದಲ್ಲಿ ನಾನು ರಾಹುಲ್ ದ್ರಾವಿಡ್ ಜೊತೆ ಸುಮಾರು ಸಮಯ ಕಳೆದೆ. ಕ್ರಿಕೆಟ್ ಟೆಕ್ನಿಕ್ ಗಳ ಸುಧಾರಣೆಗೆ ದ್ರಾವಿಡ್ ರಿಂದ ನಾನು ಸಲಹೆಗಳನ್ನು ಪಡೆದೆ. ಇದರಿಂದಾಗಿ ನನಗೆ ಭಾರತ ತಂಡಕ್ಕೆ ಮರಳಲು ಸಾಧ್ಯವಾಯಿತು ಎಂದರು.
ಚಿನ್ನಸ್ವಾಮಿ ಅಂಗಳದಲ್ಲಿ ಸೋಲಿನ ಬಗ್ಗೆ ಮಾತನಾಡಿದ ರಾಹುಲ್, ರಾತ್ರಿ ಆಡುವಾಗ ಇಬ್ಬನಿ ಬೀಳುವುದರಿಂದ ಎರಡನೇ ಇನ್ನಿಂಗ್ಸ್ ನಲ್ಲಿ ಬೌಲಿಂಗ್ ಮಾಡುವುದು ಕಷ್ಟ. ಆದರೂ ಬೌಲರ್ ಗಳು ಉತ್ತಮ ಪ್ರದರ್ಶನ ನೀಡಿದರು. ಆದರೆ ಮ್ಯಾಕ್ಸ್ ವೆಲ್ ಅದ್ಭುತ ಆಟವಾಡಿದರು ಎಂದರು.
ಅಂತಾರಾಷ್ಟ್ರೀಯ ಪಂದ್ಯಗಳಿಂದ ದೂರವಿದ್ದುದರಿಂದ ಸ್ವಲ್ಪ ಮಟ್ಟಿನ ಒತ್ತಡವಿತ್ತು. ಎರಡೂ ಪಂದ್ಯಗಳಲ್ಲಿ ಉತ್ತಮ ಆರಂಭ ಸಿಕ್ಕಿತು. ಆದರೆ ಅದನ್ನು ದೊಡ್ಡ ಇನ್ನಿಂಗ್ಸ್ ಗಳನ್ನಾಗಿ ಪರಿವರ್ತಿಸಿದ್ದರೆ ತಂಡದ ಗೆಲುವಿಗೆ ಸಹಕಾರಿಯಾಗಬಹುದಿತ್ತು. ಆದರೂ ಮರಳಿ ಫಾರ್ಮ್ಗ ಗೆ ಬಂದಿರುವ ಬಗ್ಗೆ ಸಂತೋಷವಿದೆ ಎಂದರು.
ಖಾಸಗಿ ವಾಹಿನಿಯ ಕಾರ್ಯಕ್ರಮದ ವಿವಾದದ ಬಗ್ಗೆ ಮಾತನಾಡಿದ ರಾಹುಲ್, ಆ ವಿವಾದದ ನಂತರ ನಾನು ಮತ್ತಷ್ಟು ವಿನೀತನಾಗಿದ್ದೇನೆ. ಭಾರತ ತಂಡದ ಮೇಲೆ ಗೌರವ ಇನ್ನಷ್ಟು ಹೆಚ್ಚಾಗಿದೆ ಎಂದರು.