ಚೆನ್ನೈ ತಂಡದಿಂದ ಹೊರಬಿದ್ದರೆ ರೈನಾ..? ಮಾಧ್ಯಮದ ಮುಂದೆ ರೈನಾ ಹೇಳಿದ್ದಿಷ್ಟು
Team Udayavani, Sep 2, 2020, 2:49 PM IST
ಮುಂಬೈ: 13ನೇ ಆವೃತ್ತಿಯ ಐಪಿಎಲ್ ಗಾಗಿ ದುಬೈಗೆ ಹಾರಿದ್ದ ಸುರೇಶ್ ರೈನಾ ಅಷ್ಟೇ ವೇಗವಾಗಿ ಮರಳಿ ಭಾರತಕ್ಕೆ ಬಂದಿದ್ದಾರೆ. ರೈನಾ ಭಾರತಕ್ಕೆ ಮರಳಿರುವ ಕುರಿತು ಕೆಲವು ಮಾತುಗಳು ಕೇಳಿ ಬರುತ್ತಿದೆ. ಕ್ವಾರಂಟೈನ್ ನಿಯಮಗಳಿಗೆ ಹೊಂದಿಕೊಳ್ಳದೆ ರೈನಾ ಭಾರತಕ್ಕೆ ಬಂದಿದ್ದಾರೆ, ಚೆನ್ನೈ ತಂಡ ಅವರನ್ನು ಕೈಬಿಟ್ಟಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡೆಯುತ್ತಿದೆ. ಈ ಮಧ್ಯೆ ಸ್ವತಃ ಸುರೇಶ್ ರೈನಾ ಅವರೇ ಈ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರೆ.
ಕ್ರಿಕ್ ಬಜ್ ನೊಂದಿಗೆ ಮಾತನಾಡಿರುವ ರೈನಾ, ಇದು ವೈಯಕ್ತಿಕ ನಿರ್ಧಾರ. ನನ್ನ ಕುಟುಂಬಕ್ಕಾಗಿ ನಾನು ಹಿಂತಿರುಗಬೇಕಾಗಿತ್ತು. ಸಿಎಸ್ ಕೆ ತಂಡವೂ ನನ್ನ ಕುಟುಂಬದಂತೆ ಆಗಿದೆ. ನಾಯಕ ಎಂಎಸ್ ಧೋನಿ ನನಗೆ ಬಹಳ ಮುಖ್ಯ. ಚೆನ್ನೈ ತಂಡ ಮತ್ತು ನನ್ನ ನಡುವೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.
ಒಂದು ಗಟ್ಟಿಯಾದ ಕಾರಣವಿಲ್ಲದೆ 12.5 ಕೋಟಿ ರೂ. ನಿಂದ ಯಾರೂ ಹಿಂದೆ ಸರಿಯುವುದಿಲ್ಲ ಎಂದಿರುವ ಅವರು, ನಾನು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿರಬಹುದು ಆದರೆ ನಾನಿನ್ನೂ ಯುವಕ. ಮುಂದಿನ 4-5 ವರ್ಷಗಳ ಕಾಲ ಐಪಿಎಲ್ನಲ್ಲಿ ಚೆನ್ನೈ ಪರವಾಗಿ ಆಡಲು ಎದುರು ನೋಡುತ್ತಿದ್ದೇನೆ ಎಂದು ರೈನಾ ಹೇಳಿಕೆ ನೀಡಿದ್ದಾರೆ.
ಪಠಾಣ್ ಕೋಟ್ ನಲ್ಲಿರುವ ರೈನಾ ಚಿಕ್ಕಪ್ಪನ ಮನೆಯ ಮೇಲೆ ದಾಳಿ ಮಾಡಲಾಗಿತ್ತು. ರೈನಾ ಚಿಕ್ಕಪ್ಪ ಮತ್ತು ಸೋದರ ಸಂಬಂಧಿಯೋರ್ವರು ಸಾವನ್ನಪ್ಪಿದ್ದಾರೆ. ಈ ಕಾರಣದಿಂದ ರೈನಾ ಯುಎಇನಿಂಧ ವಾಪಾಸ್ ಭಾರತಕ್ಕೆ ಮರಳಿದ್ದರು.