ಒಂದರ ಹಿಂದೊಂದು ಸರಣಿ; ಬಿಡುವಿಲ್ಲದ ವೇಳಾಪಟ್ಟಿಗೆ ಕೊಹ್ಲಿ ಅಸಮಧಾನ; ಶುಕ್ಲಾ ಬೆಂಬಲ
Team Udayavani, Jan 25, 2020, 2:44 PM IST
ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ವೇಳಾಪಟ್ಟಿ ತೀರಾ ಬಿಗಿಯಾಯಿತು ಎಂಬ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಆಕ್ಷೇಪಕ್ಕೆ ಐಪಿಎಲ್ ಮಾಜಿ ಮುಖ್ಯಸ್ಥ ರಾಜೀವ್ ಶುಕ್ಲಾ ಬೆಂಬಲ ನೀಡಿದ್ದಾರೆ.
ಟ್ವೀಟರ್ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜೀವ್ ಶುಕ್ಲಾ “ಕೊಹ್ಲಿ ಹೇಳಿಕೆಯನ್ನು ಸಂಪೂರ್ಣ ಬೆಂಬಲಿಸುತ್ತಿದ್ದೇನೆ. ಒಂದರ ಹಿಂದೆ ಒಂದರಂತೆ ಬಿಡುವಿಲ್ಲದೆ ವೇಳಾಪಪಟ್ಟಿಯನ್ನು ಬಿಗಿಗೊಳಿಸಬಾರದಿತ್ತು. ಒಂದು ಸರಣಿ ಬಳಿಕ ಆಟಗಾರರಿಗೆ ಸ್ವಲ್ಪ ವಿಶ್ರಾಂತಿಯಾದರೂ ಅಗತ್ಯ. ಮಾತ್ರವಲ್ಲ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಯವೂ ಬೇಕು. ಇದನ್ನೆಲ್ಲ ಬಿಸಿಸಿಐ ಗಮನದಲ್ಲಿಟ್ಟುಕೊಂಡು ಸಿಒಎ ವೇಳಾಪಟ್ಟಿ ಪ್ರಕಟಿಸಬೇಕಿತ್ತು. ಮುಂದೆ ವಿಶ್ವಕಪ್ ಟಿ20 ಕ್ರಿಕೆಟ್ ಇರುವುದರಿಂದ ಅದರತ್ತ ಗಮನ ವಹಿಸಬೇಕಿದೆ. ಈ ಬಗ್ಗೆ ರಾಜಿಯಾಗುವ ಪ್ರಶ್ನೆ ಇಲ್ಲ. ಭವಿಷ್ಯದಲ್ಲಿ ವೇಳಾಪಟ್ಟಿ ಬಗ್ಗೆ ಗಂಭೀರ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆಸಲಾಗುತ್ತದೆ’ ಎಂದು ತಿಳಿಸಿದ್ದಾರೆ.
ಆಸ್ಟ್ರೇಲಿಯ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿರ್ಣಾಯಕ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಿದ ಮರುದಿನವೇ ಭಾರತ ತಂಡ ಸುದೀರ್ಘ ಸರಣಿಗಾಗಿ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿತ್ತು. ಈ ಬಿಗುವಿನ ವೇಳಾಪಟ್ಟಿ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.