ರಣಜಿ ಪಂದ್ಯ: ಮತ್ತೆ ಸಿಡಿದು ನಿಂತ ಸರ್ಪರಾಜ್ ಖಾನ್
ಹಿಮಾಚಲ ವಿರುದ್ಧ ಅಜೇಯ 226 ಮುಂಬಯಿ 372/5
Team Udayavani, Jan 28, 2020, 12:04 AM IST
ಧರ್ಮಶಾಲಾ: ಉತ್ತರಪ್ರದೇಶ ವಿರುದ್ಧದ ಕಳೆದ ರಣಜಿ ಪಂದ್ಯದಲ್ಲಿ ಅಮೋಘ ತ್ರಿಶತಕ ಬಾರಿಸಿ (ಅಜೇಯ 301) ಮೆರೆದಾಡಿದ್ದ ಮುಂಬಯಿಯ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಸರ್ಪರಾಜ್ ಖಾನ್ ಇದೇ ಜೋಶ್ ಮುಂದುವರಿಸಿದ್ದಾರೆ. ಹಿಮಾಚಲ ಪ್ರದೇಶ ವಿರುದ್ಧ ಸೋಮವಾರ ಮೊದಲ್ಗೊಂಡ ರಣಜಿ ಮುಖಾಮುಖೀಯಲ್ಲಿ ಭರ್ಜರಿ 226 ರನ್ ಸಿಡಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸರ್ಪರಾಜ್ ಅವರ ಬ್ಯಾಟಿಂಗ್ ಪರಾಕ್ರಮದಿಂದ ಮುಂಬಯಿ 5 ವಿಕೆಟಿಗೆ 372 ರನ್ ಗಳಿಸಿದೆ. ತಂಡದ 4 ವಿಕೆಟ್ 71 ರನ್ ಆಗುವಷ್ಟರಲ್ಲಿ ಉರುಳಿ ಹೋಗಿತ್ತು.
ಸಫìರಾಜ್ ಖಾನ್ ಅವರ ಬ್ಯಾಟಿಂಗ್ ಅತ್ಯಂತ ಬಿರುಸಿನಿಂದ ಕೂಡಿತ್ತು. 226 ರನ್ 213 ಎಸೆತಗಳಿಂದ ಬಂತು. ಈ ಅಬ್ಬರದ ವೇಳೆ ಸಿಡಿದದ್ದು 32 ಬೌಂಡರಿ ಹಾಗೂ 4 ಸಿಕ್ಸರ್. ಅವರಿಗೆ ನಾಯಕ ಆದಿತ್ಯ ತಾರೆ ಉತ್ತಮ ಬೆಂಬಲವಿತ್ತರು (62). ಇವರಿಂದ 5ನೇ ವಿಕೆಟಿಗೆ 143 ರನ್ ಹರಿದು ಬಂತು. ಸಫìರಾಜ್ ಜತೆ 44 ರನ್ ಮಾಡಿರುವ ಶುಭಂ ರಂಜನೆ ಕ್ರೀಸಿನಲ್ಲಿದ್ದಾರೆ. ಮುರಿಯದ 6ನೇ ವಿಕೆಟಿಗೆ 158 ರನ್ ಸಂಗ್ರಹಗೊಂಡಿದೆ.
ಸಂಕ್ಷಿಪ್ತ ಸ್ಕೋರ್
ಮುಂಬಯಿ-5 ವಿಕೆಟಿಗೆ 372 (ಸರ್ಪರಾಜ್ ಬ್ಯಾಟಿಂಗ್ 226, ರಂಜನೆ ಬ್ಯಾಟಿಂಗ್ 44, ತಾರೆ 62, ಅರೋರಾ 28ಕ್ಕೆ 2, ರಾಘವ್ ಧವನ್ 81ಕ್ಕೆ 2).
ಆಂಧ್ರ ವಿರುದ್ಧ ಕೇರಳ ಕುಸಿತ
ಓಂಗೋಲ್: ಆತಿಥೇಯ ಆಂಧ್ರಪ್ರದೇಶ ವಿರುದ್ಧ ಇಲ್ಲಿ ಆರಂಭಗೊಂಡ ರಣಜಿ ಮುಖಾಮುಖೀಯಲ್ಲಿ ಕೇರಳ 162ಕ್ಕೆ ಕುಸಿದಿದೆ. ಜವಾಬಿತ್ತ ಆಂಧ್ರ ಒಂದು ವಿಕೆಟಿಗೆ 57 ರನ್ ಮಾಡಿದೆ.
ಶೋಯಿಬ್ ಮೊಹಮ್ಮದ್ ಖಾನ್ 62ಕ್ಕೆ 5 ವಿಕೆಟ್ ಕಿತ್ತು ಕೇರಳವನ್ನು ಕಾಡಿದರು. ವೈ. ಪೃಥ್ವೀರಾಜ್ 3, ಕೆ.ವಿ. ಶಶಿಕಾಂತ್ 2 ವಿಕೆಟ್ ಉರುಳಿಸಿದರು. ಕೇರಳ ಪರ ಬಾಸಿಲ್ ಥಂಪಿ 42 ರನ್ ಹೊಡೆದರು.