ಇನ್ನಿಂಗ್ಸ್ ಮುನ್ನಡೆಗೆ ದಿಲ್ಲಿ ಪ್ರಯತ್ನ
Team Udayavani, Dec 9, 2017, 11:15 AM IST
ವಿಜಯವಾಡ: ಮಧ್ಯ ಪ್ರದೇಶ ತಂಡ ದೆದುರಿನ ರಣಜಿ ಟ್ರೋಫಿ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ದಿಲ್ಲಿ ತಂಡವು ಮೊದಲ ಇನ್ನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಲು ಪ್ರಯತ್ನಿಸುತ್ತಿದೆ.
ಮಧ್ಯ ಪ್ರದೇಶ ತಂಡದ 338 ರನ್ನಿಗೆ ಉತ್ತರವಾಗಿ ದಿಲ್ಲಿ ತಂಡವು ದ್ವಿತೀಯ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್ ಕಳೆದುಕೊಂಡಿದ್ದು 180 ರನ್ ಗಳಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ ಪಡೆಯಲು ತಂಡ ಇನ್ನುಳಿದ 8 ವಿಕೆಟ್ ನೆರವಿನಿಂದ 158 ರನ್ ಗಳಿಸಬೇಕಾಗಿದೆ.
6 ವಿಕೆಟಿಗೆ 223 ರನ್ನುಗಳಿಂದ ದಿನದಾಟ ಆರಂಂಭಿ ಸಿದ ಮಧ್ಯ ಪ್ರದೇಶ ತಂಡಕ್ಕೆ ಹರ್ಪ್ರೀತ್ ಸಿಂಗ್ ಆಸರೆ ಯಾದರು. ಅವರ ಶತಕದಿಂದಾಗಿ ಮಧ್ಯ ಪ್ರದೇಶದ ಮೊತ್ತ 300ರ ಗಡಿ ದಾಟುವಂತಾಯಿತು. 47 ರನ್ನಿನಿಂದ ದ್ವಿತೀಯ ದಿನದ ಆಟ ಮುಂದುವರಿಸಿದ ಹರ್ಪ್ರೀತ್ ತಂಡ ಆಲೌಟ್ ಆದಾಗ 107 ರನ್ ಗಳಿಸಿ ಅಜೇಯರಾಗಿ ಉಳಿದರು. 200 ಎಸೆತ ಎದುರಿಸಿದ ಅವರು 15 ಬೌಂಡರಿ ಬಾರಿಸಿದ್ದರು.
ಹರ್ಪ್ರೀತ್ ಮತ್ತು ಪುನೀತ್ ದತೆ 7ನೇ ವಿಕೆಟಿಗೆ 73 ರನ್ ಪೇರಿಸಿದರು. ಈ ಹಂತದಲ್ಲಿ 35 ರನ್ ಗಳಿಸಿದ ದತೆ ಔಟಾದರು. ಹರ್ಪ್ರೀತ್ ಆಬಳಿಕ ಮಿಹಿರ್ ಹಿರ್ವಾನಿ ಜತೆಗೂಡಿ 8ನೇ ವಿಕೆಟಿಗೆ 58 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ಮಧ್ಯಪ್ರದೇಶದ ರನ್ ಮೊತ್ತ ಏರಿಸಲು ನೆರವಾದರು. ಈ ಜೋಡಿ ಮುರಿದ ಬಳಿಕ ಮಧ್ಯ ಪ್ರದೇಶ 338 ರನ್ನಿಗೆ ಆಲೌಟಾಯಿತು.
ವಿಕಾಸ್ ಮಿಶ್ರಾ 58 ರನ್ನಿಗೆ 3 ವಿಕೆಟ್ ಕಿತ್ತರೆ ಮನನ್ ಶರ್ಮ 46 ರನ್ನಿಗೆ 4 ವಿಕೆಟ್ ಕಿತ್ತು ಮಧ್ಯ ಪ್ರದೇಶ ಬೇಗನೇ ಆಲೌಟ್ ಆಗಲು ಕಾರಣರಾದರು.
ದಿಲ್ಲಿ ಆರಂಭಿಕ ಆಘಾತ: ಅನುಭವಿ ಆಟಗಾರ ಗೌತಮ್ ಗಂಭೀರ್ ಅವರನ್ನು ಬೇಗನೇ ಕಳೆದುಕೊಂಡಾಗ ದಿಲ್ಲಿ ಆಘಾತ ಅನುಭವಿಸಿತು. ಆದರೆ ಕುನಾಲ್ ಚಾಂಡೇಲ ಮತ್ತು ದ್ರುವ್ ಶೋರೆ ದ್ವಿತೀಯ ವಿಕೆಟಿಗೆ 145 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡವನ್ನು ಆಧರಿಸಿದರು. ಇದರಿಂದ ದಿಲ್ಲಿ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳುವಂತಾಯಿತು. ದಿನದ ಅಂತಿಮ ಅವಧಿಯ ಆಟದಲ್ಲಿ 78 ರನ್ ಗಳಿಸಿದ ದ್ರುವ್ ಔಟಾದರೆ ಚಾಂಡೇಲ 73 ರನ್ನುಗಳಿಂದ ಮೂರನೇ ದಿನದ ಆಟ ಮುಂದುವರಿಸಲಿದ್ದಾರೆ.
ಸಂಕ್ಷಿಪ್ತ ಸ್ಕೋರು: ಮಧ್ಯ ಪ್ರದೇಶ 338 (ಹರ್ಪ್ರೀತ್ ಸಿಂಗ್ 107 ಔಟಾಗದೆ, ಅಂಕಿತ್ ದಾನೆ 59, ನುವನ್ ಓಜಾ 49, ಪುನೀತ್ ದಾತೆ 35, ವಿಕಾಸ್ ಮಿಶ್ರಾ 58ಕ್ಕೆ 3, ಮನನ್ ಶರ್ಮ 46ಕ್ಕೆ 4); ದಿಲ್ಲಿ 2 ವಿಕೆಟಿಗೆ 180 (ಕುನಾಲ್ ಚಾಂಡೇಲ 73 ಬ್ಯಾಟಿಂಗ್, ದ್ರುವ್ ಶೋರೆ 78).