ರಣಜಿ ಕ್ರಿಕೆಟ್: ಕರ್ನಾಟಕ ಹಳಿ ತಪ್ಪಿಸಿದ ರೈಲ್ವೇಸ್
Team Udayavani, Dec 23, 2018, 6:05 AM IST
ಶಿವಮೊಗ್ಗ: ಕರ್ನಾಟಕ ಮತ್ತೂಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಹಿಂದಿನ ಪಂದ್ಯಗಳ ತಪ್ಪನ್ನೇ ಮುಂದುವರಿಸಿದ್ದಕ್ಕೆ ಭಾರೀ ಬೆಲೆ ತೆತ್ತಿದೆ. ಪರಿಣಾಮ, ಶಿವಮೊಗ್ಗದ ನವುಲೆ ಕ್ರೀಡಾಂಗಣದಲ್ಲಿ ಶನಿವಾರ ಆರಂಭಗೊಂಡ ರೈಲ್ವೇಸ್ ವಿರುದ್ಧದ ರಣಜಿ ಪಂದ್ಯದಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 208 ರನ್ ಗಳಿಸಿದೆ.
ಮೊದಲು ಬ್ಯಾಟಿಂಗ್ಗೆ ಇಳಿದ ಕರ್ನಾಟಕ ಆರಂಭದಲ್ಲೇ ರೈಲ್ವೇಸ್ ತಂಡದ ನಿಖರ ಬೌಲಿಂಗ್ ದಾಳಿಗೆ ಸಿಲುಕಿ ವಿಕೆಟ್ ಕಳೆದುಕೊಳ್ಳತೊಡಗಿತು. ಎಸಿಪಿ ಮಿಶ್ರಾ (57ಕ್ಕೆ 3), ಅವಿನಾಶ್ ಯಾದವ್ (43ಕ್ಕೆ 3), ಕರಣ್ ಠಾಕೂರ್ (41ಕ್ಕೆ 2) ಸೇರಿಕೊಂಡು ರಾಜ್ಯ ಬ್ಯಾಟ್ಸ್ಮನ್ಗಳನ್ನು ನಡುಗಿಸಿದರು.
ನಿಶ್ಚಲ್ ಜತೆ ಇನಿಂಗ್ಸ್ ಆರಂಭಿಸಿದ ಆರ್. ಸಮರ್ಥ್ (3) ತಂಡದ ಮೊತ್ತ 7 ರನ್ ಆಗಿದ್ದಾಗ ಮಿಶ್ರಾ ಎಸೆತದಲ್ಲಿ ಗುಪ್ತಾಗೆ ಕ್ಯಾಚ್ ನೀಡಿ ಮೊದಲಿಗರಾಗಿ ನಿರ್ಗಮಿಸಿರು. ಒಂದೇ ರನ್ ಅಂತರದಲ್ಲಿ ದೇವದತ್ತ ಪಡಿಕ್ಕಲ್ (1) ಅವಿನಾಶ್ ಯಾದವ್ ಬೌಲಿಂಗ್ನಲ್ಲಿ ಬಿಲ್ಲೆಗೆ ಕ್ಯಾಚ್ ನೀಡಿ ಪೆವಿಲಿಯನ್ ದಾರಿ ಹಿಡಿದರು. ಐಪಿಎಲ್ನಲ್ಲಿ ಆರ್ಸಿಬಿ ಪಾಲಾಗಿರುವ ಪಡಿಕ್ಕಲ್ ಮೇಲೆ ಅಭಿಮಾನಿಗಳು ಭಾರೀ ನಿರೀಕ್ಷೆ ಇರಿಸಿದ್ದರು. ಆದರೆ ಇದು ಹುಸಿಯಾಯಿತು. ಕರ್ನಾಟಕದ 2 ವಿಕೆಟ್ 8 ರನ್ ಆಗುವಷ್ಟರಲ್ಲಿ ಉರುಳಿತು.
ಮನೀಷ್ ಪಾಂಡೆ (4) ಕೂಡ ತಂಡಕ್ಕೆ ಆಸರೆಯಾಗಲಿಲ್ಲ. ಕರಣ್ ಠಾಕೂರ್ ಮತ್ತೂಮ್ಮೆ ಆಘಾತಕಾರಿಯಾದರು. ಅನಗತ್ಯ ಹೊಡೆತಕ್ಕೆ ಮುಂದಾದ ಮನೀಷ್, ಬಿಲ್ಲೆಗೆ ಕ್ಯಾಚ್ ನೀಡಿ ಹೊರ ನಡೆದರು. ಮನೀಷ್ ಕಳೆದ ಪಂದ್ಯಗಳಲ್ಲಿ ರಾಜ್ಯ ತಂಡಕ್ಕೆ ಲಭ್ಯವಿರಲಿಲ್ಲ. ಇಲ್ಲಿ ವಿನಯ್ ಕುಮಾರ್ ಗೈರಲ್ಲಿ ತಂಡದ ನೇತೃತ್ವ ವಹಿಸಿದ್ದರು.
ನಿಶ್ಚಲ್, ಸಿದ್ಧಾರ್ಥ್ ಅರ್ಧ ಶತಕ
17ಕ್ಕೆ 3 ವಿಕೆಟ್ ಕಳೆದುಕೊಂಡು ತೀವ್ರ ಸಂಕಟಕ್ಕೆ ಸಿಲುಕಿದ ಕರ್ನಾಟಕ ತಂಡವನ್ನು ಓಪನರ್ ನಿಶ್ಚಲ್ (52) ಹಾಗೂ ಮಧ್ಯಮ ಕ್ರಮಾಂಕದ ಕೆ.ವಿ. ಸಿದ್ಧಾರ್ಥ್ (69) ತಾಳ್ಮೆ ಹಾಗೂ ಎಚ್ಚರಿಕೆಯ ಬ್ಯಾಟಿಂಗ್ ಮೂಲಕ ಆಧರಿಸತೊಡಗಿದರು. ರೈಲ್ವೇಸ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿ ಅರ್ಧ ಶತಕ ದಾಖಲಿಸಿದರು. ಒಟ್ಟು 185 ಎಸೆತ ಎದುರಿಸಿದ ಸಿದ್ಧಾರ್ಥ್ 6 ಬೌಂಡರಿ, 2 ಸಿಕ್ಸರ್ನಿಂದ ತಮ್ಮ ಇನ್ನಿಂಗ್ಸ್ ಕಟ್ಟಿದರು. ನಿಶ್ಚಲ್ ಬ್ಯಾಟಿಂಗ್ ಕೂಡ ಎಚ್ಚರಿಕೆಯಿಂದ ಕೂಡಿತ್ತು. 172 ಎಸೆತ ಎದುರಿಸಿದ ಅವರು 4 ಬೌಂಡರಿ ಹೊಡೆದರು. ಇವರಿಬ್ಬರಿಂದ 4ನೇ ವಿಕೆಟಿಗೆ 112 ರನ್ ಒಟ್ಟುಗೂಡಿತು.
ಈ ಹಂತದಲ್ಲಿ ದಾಳಿಗಿಳಿದ ಅವಿನಾಶ್ ಯಾದವ್ ಬೇರೂರಿದ್ದ ಜೋಡಿಯನ್ನು ಬೇರ್ಪಡಿಸಿದರು. ನಿಶ್ಚಲ್ ಕ್ಲೀನ್ಬೌಲ್ಡ್ ಆದರು. ಬೆನ್ನಲ್ಲೇ ಸಿದ್ಧಾರ್ಥ್ ಕೂಡ ಅವಿನಾಶ್ ಎಸೆತದಲ್ಲೇ ಔಟಾದರು. ಅನಂತರ ಕರ್ನಾಟಕ ತಂಡ ಮತ್ತೂಂದು ಹಂತದ ಕುಸಿತ ಕಂಡಿತು. ಶ್ರೇಯಸ್ ಗೋಪಾಲ್ (20), ಕೆ. ಗೌತಮ್ (0 ), ಅಭಿಮನ್ಯು ಮಿಥುನ್ (16) ಪೆವಿಲಿಯನ್ ಸೇರಿಕೊಂಡರು. ಕರ್ನಾಟಕದ ಕೊನೆಯ 5 ವಿಕೆಟ್ 19 ರನ್ ಅಂತರದಲ್ಲಿ ಉರುಳಿತು. ಎಸ್. ಶರತ್ (28) ಹಾಗೂ ಪ್ರಸಿದ್ಧ್ ಕೃಷ್ಣ (2) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ 9 ವಿಕೆಟಿಗೆ 208 (ಸಿದ್ಧಾರ್ಥ್ 69, ನಿಶ್ಚಲ್ 52, ಎಸ್. ಶರತ್ ಬ್ಯಾಟಿಂಗ್ 28, ಗೋಪಾಲ್ 20, ಎಸಿಪಿ ಮಿಶ್ರಾ 57ಕ್ಕೆ 3, ಅವಿನಾಶ್ ಯಾದವ್ 43ಕ್ಕೆ 3, ಕರಣ್ ಠಾಕೂರ್ 41ಕ್ಕೆ 2).
ವಿನಯ್ಗೆ ಮಂಡಿ ನೋವು
ಕರ್ನಾಟಕ ತಂಡದ ನಾಯಕ ಆರ್. ವಿನಯ್ ಕುಮಾರ್ ಮಂಡಿ ನೋವಿನಿಂದಾಗಿ ರೈಲ್ವೇಸ್ ವಿರುದ್ಧದ ಪಂದ್ಯದಿಂದ ಕಡೇ ಕ್ಷಣದಲ್ಲಿ ಹೊರಗುಳಿದರು. ವಿನಯ್ಗೆ ವಿಶ್ರಾಂತಿ ಸೂಚಿಸಲಾಗಿದೆ. ವಿನಯ್ ಗೈರಲ್ಲಿ ಮನೀಷ್ ಪಾಂಡೆ ತಂಡವನ್ನು ಮುನ್ನಸಿದರು.
ಗಂಟೆ ಬಾರಿಸಿ ಉದ್ಘಾಟನೆ
ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಶಿವಮೊಗ್ಗ ಜಿಲ್ಲಾ ಧಿಕಾರಿ ದಯಾನಂದ್ ಗಂಟೆ ಬಾರಿಸುವ ಮೂಲಕ ಕರ್ನಾಟಕ-ರೈಲ್ವೇಸ್ ನಡುವಿನ ರಣಜಿ ಪಂದ್ಯಕ್ಕೆ ಚಾಲನೆ ನೀಡಿದರು.