ಮಗನ ವರ್ತನೆಯಿಂದ ನೊಂದು ತಾಯಿ ಉಪವಾಸ
19 ವಯೋಮಿತಿ ವಿಶ್ವಕಪ್ ನಂತರ ಭಾರತ-ಬಾಂಗ್ಲಾ ಆಟಗಾರರ ನಡುವೆ ತಳ್ಳಾಟ
Team Udayavani, Feb 13, 2020, 9:26 AM IST
ಜೋಧಪುರ (ರಾಜಸ್ಥಾನ): ಫೆ.9ರಂದು ನಡೆದ 19 ವಯೋಮಿತಿ ವಿಶ್ವಕಪ್ ಫೈನಲ್ ನಂತರ ಭಾರತ-ಬಾಂಗ್ಲಾ ಆಟಗಾರರ ನಡುವೆ ಚಕಮಕಿ ನಡೆಯಿತು.
ಪರಿಣಾಮ ಭಾರತದ ಸ್ಪಿನ್ನರ್ ರವಿ ಬಿಷ್ಣೋಯಿಗೆ ನಿಷೇಧಾಂಕ ಹೇರಲಾಗಿದೆ. ಈ ಘಟನೆಯ ನಂತರ ಮುಂದಿನ ಒಂದು ದಿನದವರೆಗೆ ನನ್ನ ಪತ್ನಿ ಏನನ್ನೂ ತಿಂದಿಲ್ಲ ಎಂದು ರವಿ ತಂದೆ ಮಾಂಗಿಲಾಲ್ ನೊಂದು ನುಡಿದಿದ್ದಾರೆ. ನನ್ನ ಪುತ್ರನಿಗೆ ಬಹಳ ತಾಳ್ಮೆ. ಅವನು ಯಾಕೆ ಹಾಗೆ ತಾಳ್ಮೆ ಕಳೆದುಕೊಂಡನೋ ನನಗೆ ಗೊತ್ತಾಗುತ್ತಿಲ್ಲ ಎಂದು ಮಾಂಗಿಲಾಲ್ ಹೇಳಿದ್ದಾರೆ.
ಆಗಿದ್ದೇನು?: ಫೆ.9ರಂದು ನಡೆದ 19 ವಯೋಮಿತಿ ವಿಶ್ವಕಪ್ ಫೈನಲ್ನಲ್ಲಿ ಭಾರತ ಸೋತುಹೋಯಿತು. ಪಂದ್ಯ ಮುಗಿದ ಕೂಡಲೇ ಬಾಂಗ್ಲಾ ಕ್ರಿಕೆಟಿಗರು ದುರ್ವರ್ತನೆ ತೋರಿದ ಪರಿಣಾಮ, ಭಾರತ-ಬಾಂಗ್ಲಾ ಆಟಗಾರರ ನಡುವೆ ಚಕಮಕಿ ನಡೆಯಿತು. ಬಾಂಗ್ಲಾದ ಅಭಿಮಾನಿಗಳು ಮೈದಾನದೊಳಕ್ಕೆ ನುಗ್ಗಿ ನರ್ತಿಸಿ, ಭಾರತೀಯರನ್ನು ಹಂಗಿಸಿದರು. ಇದರಿಂದ ಎರಡೂ ತಂಡಗಳ ನಡುವೆ ತಳ್ಳಾಟ ನಡೆಯಿತು. ಈ ವೇಳೆ ಬಾಂಗ್ಲಾದ ಮೂವರು, ಭಾರತದ ಇಬ್ಬರಿಗೆ ನಿಷೇಧಾಂಕ ಹೇರಲಾಯಿತು. ಪಂದ್ಯದಲ್ಲಿ ಅಮೋಘ ಸ್ಪಿನ್ ದಾಳಿ ಮಾಡಿದ್ದ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ, ತನ್ನ ಆಟಗಾರರನ್ನು ಕಾಪಾಡಿಕೊಳ್ಳುವ ಇಕ್ಕಟ್ಟಿನಲ್ಲಿ ತಳ್ಳಾಟ ನಡೆಸಿದ್ದಾರೆ.
ಘಟನೆಯ ತರುವಾಯ, ಭಾರತದ ನಾಯಕ ಪ್ರಿಯಂ ಗರ್ಗ್, ಬಾಂಗ್ಲಾ ಆಟಗಾರರ ವರ್ತನೆ ಕೊಳಕಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಸೋಲು ಗೆಲುವು ಮಾಮೂಲಾಗಿದ್ದರಿಂದ ನಾವು ಆರಾಮಾಗಿಯೇ ಇದ್ದೆವು. ಆದರೆ ಅವರು ಮಾತ್ರ ವಿಪರೀತವಾಗಿ ವರ್ತಿಸಿದರು ಗರ್ಗ್ ಆರೋಪಿಸಿದರು.