ಆರ್ಸಿಬಿ ಬಿಟ್ಟಿರಲಾರೆನು: ವಿರಾಟ್ ಕೊಹ್ಲಿ
Team Udayavani, Oct 13, 2021, 5:49 AM IST
ಶಾರ್ಜಾ: ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ನಾಯಕನಾಗಿ ಕೊನೆಯ ಬಾರಿ ವಿರಾಟ್ ಕೊಹ್ಲಿ ತಮ್ಮ ಬೆಂಬಲಿಗರಿಗೆ ಹಾಗೂ ಆರ್ಸಿಬಿ ಅಭಿಮಾನಿಗಳಿಗೆ ವಿಶೇಷ ಸಂದೇಶವೊಂದನ್ನು ರವಾನಿಸಿದ್ದಾರೆ. ಸೋಮವಾರ ಕೆಕೆಆರ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ 4 ವಿಕೆಟ್ಗಳಿಂದ ಸೋತ ಬಳಿಕ ಮಾತನಾಡಿದ ಕೊಹ್ಲಿ, ತನ್ನ ಕೊನೆಯ ಐಪಿಎಲ್ ಪಂದ್ಯದ ವರೆಗೂ ಆರ್ಸಿಬಿ ಪರವಾಗಿಯೇ ಆಡುವುದಾಗಿ ತಿಳಿಸಿದ್ದಾರೆ.
“ಯುವ ಕ್ರಿಕೆಟಿಗರು ಮುಂದೆ ಬಂದು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವ ವಾತಾವರಣ ನಿರ್ಮಿಸಲು ನನ್ನಿಂದ ಸಾಧ್ಯವಾದಷ್ಟು ಪ್ರಯತ್ನ ನಡೆಸಿದ್ದೇನೆ. ಕೆಲವೊಮ್ಮೆ ಭಾರತ ತಂಡದ ಮಟ್ಟಕ್ಕೂ ಇಲ್ಲಿ ಪ್ರಯತ್ನ ನಡೆಸಿರುವುದುಂಟು. ನನ್ನಿಂದ ಸಾಧ್ಯವಾದಷ್ಟು ಉತ್ತಮವಾದುದನ್ನೇ ಆರ್ಸಿಬಿಗೆ ನೀಡಿದ್ದೇನೆ. ಇಲ್ಲಿಯವರೆಗೂ ಬೆಂಗಳೂರು ಫ್ರಾಂಚೈಸಿಗೆ ನೂರಲ್ಲ, ಶೇ. 120ರಷ್ಟು ಸಹಕಾರ ಹಾಗೂ ಬೆಂಬಲ ನೀಡಿದ್ದೇನೆ. ಮುಂದೆ ಸಾಮಾನ್ಯ ಆಟಗಾರನಾಗಿಯೂ ಮೈದಾನದಲ್ಲಿ ಇದನ್ನೇ ಮುಂದುವರಿಸುತ್ತೇನೆ’ ಎಂದು ಕೊಹ್ಲಿ ಹೇಳಿದರು.
ತಂಡ ಕಟ್ಟಲು ಇದು ಸಕಾಲ
“ಮುಂದಿನ ಮೂರು ವರ್ಷಗಳಿಗೆ ತಂಡವನ್ನು ಮತ್ತೆ ಕಟ್ಟಲು ಇದು ಸಕಾಲವಾಗಿದೆ. ನಾನಂತೂ ಖಚಿತವಾಗಿ ಆರ್ಸಿಬಿ ಪರವಾಗಿ ಆಡುತ್ತೇನೆ. ಇದು ನಿಷ್ಠೆ ಹಾಗೂ ಬದ್ಧತೆಯ ವಿಷಯ, ಬೇರೆ ಯಾವುದೇ ತಂಡದ ಪರ ಆಡಲು ನಾನು ಬಯಸಿಲ್ಲ. ನನಗೆ ನಿಷ್ಠೆಯೇ ಮುಖ್ಯ. ಈ ಫ್ರಾಂಚೈಸಿ ನನ್ನ ಮೇಲೆ ನಂಬಿಕೆ ಇಟ್ಟಿದೆ. ನಾನು ಈಗಾಗಲೇ ಹೇಳಿದಂತೆ ಐಪಿಎಲ್ ವೃತ್ತಿ ಬದುಕಿನ ಕೊನೆಯ ದಿನದವರೆಗೂ ಆರ್ಸಿಬಿ ಪರ ಆಡುತ್ತೇನೆ’ ಎಂದು ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಮಿಥಾಲಿ ರಾಜ್ ಶತಕದ ದಾಖಲೆ ಮುರಿದ ಆ್ಯಮಿ ಹಂಟರ್
ಅಭಿಮಾನಿಗಳಿಗೆ ಧನ್ಯವಾದ
“ನಮಗೆ ಫಲಿತಾಂಶ ಬೇಕಿಲ್ಲ. ಆದರೆ ಟೂರ್ನಿಯುದ್ದಕ್ಕೂ ತಂಡದ ಹುಡುಗರು ನಿರ್ವಹಿಸಿದ ಪಾತ್ರದ ಬಗ್ಗೆ ನನಗೆ ನಿಜಕ್ಕೂ ಹೆಮ್ಮೆ ಅನಿಸುತ್ತಿದೆ. ಇದು ನಿರಾಶಾದಾಯಕ ಅಂತ್ಯವಾದರೂ ನಾವು ಮುನ್ನಡೆಯುತ್ತೇವೆ. ನಿರಂತರವಾಗಿ ತಂಡವನ್ನು ಬೆಂಬಲಿಸುತ್ತಿದ್ದ ಅಭಿಮಾನಿಗಳು, ತಂಡದ ಆಡಳಿತ ಮಂಡಳಿ ಹಾಗೂ ಸಹಾಯಕ ಸಿಬಂದಿ ಸೇರಿದಂತೆ ಎಲ್ಲರಿಗೂ ಧನ್ಯವಾದಗಳು’ ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.