ಕೊಹ್ಲಿ ಹೊರೆ ಕಡಿಮೆ ಮಾಡಿ: ಯುವರಾಜ್
Team Udayavani, Sep 28, 2019, 10:36 AM IST
ಹೊಸದಿಲ್ಲಿ: ಟಿ20 ಕ್ರಿಕೆಟಿಗೆ ರೋಹಿತ್ ಶರ್ಮ ಅವರನ್ನು ನಾಯಕನಾಗಿ ನೇಮಿಸಿ ವಿರಾಟ್ ಕೊಹ್ಲಿ ಮೇಲಿನ ಹೊರೆಯನ್ನು ಕಡಿಮೆಗೊಳಿಸಬೇಕಿದೆ ಎಂದು ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಮೂರೂ ಮಾದರಿಯ ಕ್ರಿಕೆಟಿಗೆ ಒಬ್ಬರೇ ನಾಯಕರಾದರೆ ಅವರ ಮೇಲಿನ ಒತ್ತಡ ಹೆಚ್ಚುತ್ತದೆ. ಇದರಿಂದ ನಿರ್ದಿಷ್ಟ ಮಾದರಿಯ ಕಡೆಗೆ ಗಮನಹರಿಸಲು ಸಾಧ್ಯವಾಗದು. ಕೊಹ್ಲಿಗೂ ಇದೇ ರೀತಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಇದನ್ನು ಅರಿತು ಅವರ ಮೇಲಿನ ನಾಯಕತ್ವದ ಹೊರೆಯನ್ನು ಕಡಿಮೆಗೊಳಿಸಬೇಕಿದೆ ಎಂದು ಯುವಿ ಸಲಹೆಯಿತ್ತಿದ್ದಾರೆ.
ಕೊಹ್ಲಿ ಮೂರೂ ಮಾದರಿಯ ಕ್ರಿಕೆಟಿಗೆ ನಾಯಕರಾಗಿದ್ದಾರೆ. ಟಿ20ಗೆ ರೋಹಿತ್ ಶರ್ಮ ಅವರನ್ನು ನಾಯಕನನ್ನಾಗಿಸಿದರೆ ಕೊಹ್ಲಿ ಮೇಲಿನ ಹೊರೆ ಕಡಿಮೆಗೊಳ್ಳುತ್ತದೆ ಎಂಬುದು ಯುವಿ ಸಲಹೆ.
ರೋಹಿತ್ ಟಿ20 ಮಾದರಿಯಲ್ಲಿ ಉತ್ತಮ ಆಟಗಾರ ಮತ್ತು ನಾಯಕನಾಗಿಯೂ ಗುರುತಿಸಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡವನ್ನು 4 ಬಾರಿ ಚಾಂಪಿಯನ್ ಪಟ್ಟಕೇರಿಸಿದ ಹೆಗ್ಗಳಿಕೆ ರೋಹಿತ್ ಶರ್ಮ ಅವರದ್ದು. ಭಾರತ ತಂಡದ ಉಪನಾಯಕನಾಗಿಯೂ ಕಾರ್ಯ ನಿರ್ವಹಿಸಿದ ಅನುಭವವನ್ನು ರೋಹಿತ್ ಹೊಂದಿದ್ದಾರೆ ಎಂದು ಯುವರಾಜ್ ಹೇಳಿದ್ದಾರೆ.