ಅಶಿಸ್ತು ಪ್ರದರ್ಶನ: ಶಕೀಬ್, ನುರುಲ್ಗೆ ದಂಡ
Team Udayavani, Mar 18, 2018, 6:40 AM IST
ಕೊಲಂಬೊ: ತ್ರಿಕೋನ ಟಿ20 ಸರಣಿಯ ಶ್ರೀಲಂಕಾ ವಿರುದ್ಧದ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಅಂಪೈರ್ ನೋಬಾಲ್ ತೀರ್ಪು ನೀಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಬಾಂಗ್ಲಾ ತಂಡದ ನಾಯಕ ಶಕೀಬ್ ಅಲ್ ಹಸನ್ ಹಾಗೂ ನುರುಲ್ ಹಸನ್ಗೆ ದಂಡ ವಿಧಿಸಲಾಗಿದೆ.
ಶಕೀಬ್, ನುರುಲ್ ಇಬ್ಬರೂ ಐಸಿಸಿ ನಿಯಮ ಗಾಳಿಗೆ ತೂರಿ ವರ್ತಿಸಿರುವುದನ್ನು ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ) ಖಂಡಿಸಿದೆ. ಜತೆಗೆ ಇಬ್ಬರಿಗೂ ತಲಾ ಶೇ.25ರಷ್ಟು ಪಂದ್ಯದ ಸಂಭಾವನೆಯನ್ನು ತಡೆ ಹಿಡಿದಿದೆ. ಹಾಗೂ ಇಬ್ಬರೂ ಆಟಗಾರರಿಗೆ ಐಸಿಸಿ ತಲಾ 1 ಅಂಕವನ್ನು ಕಟ್ ಮಾಡಿದೆ. ಇಬ್ಬರು ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ.
ಪಂದ್ಯದ ಕೊನೆಯಲ್ಲಿ 6 ಎಸೆತದ ಮುಂದೆ 12 ರನ್ ಬೇಕಾಗಿತ್ತು. ಬಾಂಗ್ಲಾ ಎದುರಿಸಿದ ಅಂತಿಮ ಓವರ್ನಲ್ಲಿ ಮಹಮ್ಮದುಲ್ಲ ಮತ್ತು ಮುಸ್ತಾಫಿಜೂರ್ ರೆಹಮಾನ್ ಕ್ರೀಸ್ನಲ್ಲಿದ್ದರು. ಅಂತಿಮ ಓವರ್ ಎಸೆದ ಉದಾನ 2 ಬೌನ್ಸರ್ ಹಾಕಿದ್ದರು. 2ನೇ ಎಸೆತದಲ್ಲಿ ಮುಸ್ತಾಫಿಜೂರ್ ರನೌಟಾದರು. 1 ಓವರ್ನಲ್ಲಿ 1 ಬೌನ್ಸರ್ ಹಾಕಬಹುದು. ಆದರೆ ಉದಾನೆ 2 ಬೌನ್ಸರ್ ಹಾಕಿದ್ದರು. ಆದರೆ ಅಂಪೈರ್ ಇದನ್ನು ನೋಬಾಲ್ ಎಂದು ಪರಿಗಣಿಸಿರಲಿಲ್ಲ. ಇದರಿಂದ ಬಾಂಗ್ಲಾ ನಾಯಕ ಶಕೀಬ್ ಸಿಟ್ಟಾಗಿದ್ದರು. ಬ್ಯಾಟ್ಸ್ಮನ್ಗಳನ್ನು ಕ್ರೀಡಾಂಗಣದಿಂದ ಹೊರಕ್ಕೆ ಕರೆದರು. ಜತೆಗೆ ವಾಗ್ವಾದ ನಡೆಯಿತು. ಒಂದು ವೇಳೆ ಬಾಂಗ್ಲಾ ಹೊರಕ್ಕೆ ನಡೆದಿದ್ದರೆ ಅನರ್ಹವಾಗುವ ಭೀತಿ ಇತ್ತು. ಆದರೆ ಕೊನೆಗೆ ಪಂದ್ಯ ನಡೆದು 4 ಎಸೆತದಲ್ಲಿ ಬಾಂಗ್ಲಾ ಭರ್ಜರಿ ಗೆಲುವು ಸಾಧಿಸಿ ಬೀಗಿತು.