ಶಕಿಬ್- ಬುಕ್ಕಿ ವಾಟ್ಸ್ಆ್ಯಪ್ ಸಂಭಾಷಣೆ ಬಹಿರಂಗ
3 ಬಾರಿ ಬುಕ್ಕಿಯಿಂದ ಬಾಂಗ್ಲಾ ಕ್ರಿಕೆಟಿಗನಿಗೆ ಆಮಿಷ: ವಿವರ ಪ್ರಕಟಿಸಿದ ಐಸಿಸಿ
Team Udayavani, Oct 31, 2019, 6:00 AM IST
ಢಾಕಾ: ಬುಕ್ಕಿ ದೀಪಕ್ ಅಗರ್ವಾಲ್ನಿಂದ ತನಗೆ ಬಂದಿದ್ದ ಫಿಕ್ಸಿಂಗ್ ಆಮಿಷವನ್ನು ಮುಚ್ಚಿಟ್ಟು 2 ವರ್ಷ ನಿಷೇಧಕ್ಕೊಳಗಾಗಿರುವ ಬಾಂಗ್ಲಾದೇಶ ಕ್ರಿಕೆಟಿಗ ಶಕಿಬ್ ಅಲ್ ಹಸನ್ ಅವರ ವಾಟ್ಸ್ಆ್ಯಪ್ ಸಂಭಾಷಣೆಯನ್ನು ಐಸಿಸಿ ಬಹಿರಂಗಪಡಿಸಿದೆ.
ಸಂಭಾಷಣೆಯಲ್ಲೇನಿದೆ?
ಜನವರಿ, 2018: ಶ್ರೀಲಂಕಾ, ಜಿಂಬಾಬ್ವೆ ವಿರುದ್ಧದ ತ್ರಿಕೋನ ಸರಣಿಗೆ ಶಕಿಬ್ ಬಾಂಗ್ಲಾ ತಂಡಕ್ಕೆ ಆಯ್ಕೆಯಾಗಿದ್ದರು. ಈ ವೇಳೆ ಅಗರ್ವಾಲ್ನಿಂದ ಶಕಿಬ್ಗ ವಾಟ್ಸ್ಆ್ಯಪ್ ಸಂದೇಶ ಬಂದಿತ್ತು. 2018, ಜ.18ರಂದು ನಡೆದ ಪಂದ್ಯದಲ್ಲಿ ಶಕಿಬ್ ಪಂದ್ಯಶ್ರೇಷ್ಠರಾಗಿದ್ದರು. ಶಕಿಬ್ರನ್ನು ಅಭಿನಂದಿಸಿದ್ದ ಅಗರ್ವಾಲ್, “ಈ ಬಗ್ಗೆ ನಾವು ಕೆಲಸ ಮಾಡೋಣವೇ? ಅಥವಾ ಐಪಿಎಲ್ ಮುಗಿಯುವ ವರೆಗೆ ನಾನು ಕಾಯಬೇಕಾ’ ಎಂದು ವಿಚಿತ್ರವಾಗಿ ಕೇಳಿದ್ದರು. ಇಲ್ಲಿ ಕೆಲಸವೆನ್ನುವುದು ಮಾಹಿತಿ ರವಾನೆಗೆ ಬಂದ ಬೇಡಿಕೆ. ಇದನ್ನು ಶಕಿಬ್ ಸಂಬಂಧಪಟ್ಟ ಯಾವ ತನಿಖಾಸಂಸ್ಥೆಗಳಿಗೂ ತಿಳಿಸಿರಲಿಲ್ಲ
ಜ. 23, 2018: ಈ ದಿನಾಂಕದಲ್ಲಿ ಅಗರ್ವಾಲ್ ಶಕಿಬ್ಗ ಇನ್ನೊಂದು ಸಂದೇಶ ಕಳುಹಿಸಿ, “ಗೆಳೆಯ. ಈ ಸರಣಿ ಬಗ್ಗೆ ಏನಾದರೂ ಇದೆಯೇ?’ ಎಂದಿದ್ದರು. ಅಲ್ಲಿ ಸರಣಿಗೆ ಸಂಬಂಧಪಟ್ಟ ಕೆಲವು ರಹಸ್ಯ ಸಂಗತಿಗಳ ಬಗ್ಗೆ ಮಾಹಿತಿ ಕೇಳಿದ್ದರು. ಇದನ್ನು ಸ್ವತಃ ಶಕಿಬ್ ದೃಢೀಕರಿಸಿ ದ್ದಾರೆ. ಇದನ್ನೂ ಶಕಿಬ್ ಯಾರಿಗೂ ತಿಳಿಸಲಿಲ್ಲ.
ಎ. 26, 2018: ಇದು ಭಾರತದಲ್ಲಿ ಐಪಿಎಲ್ ನಡೆಯುತ್ತಿದ್ದ ಸಮಯ. ಆಗ ಸನ್ರೈಸರ್ ಹೈದರಾಬಾದ್ ಪರ ಶಕಿಬ್ ಆಡಿದ್ದರು. ಎ.26ರಂದು ನಿರ್ದಿಷ್ಟ ದಿನಾಂಕದಂದು ಪಂಜಾಬ್ ವಿರುದ್ಧ ಪಂದ್ಯವಿತ್ತು. ಈ ವೇಳೆ ಒಬ್ಬ ನಿರ್ದಿಷ್ಟ ಆಟಗಾರನ ಬಗ್ಗೆ ಬುಕ್ಕಿ ಪ್ರಶ್ನಿಸಿ, ಆತ ಇಂದು ಆಡುತ್ತಾನಾ ಎಂದು ಕೇಳಿದ್ದರು. ಸಂಭಾಷಣೆ ಮುಂದುವರಿಸಿ, ಬಿಟ್ಕಾಯಿನ್, ಡಾಲರ್ ಖಾತೆಯ ಬಗ್ಗೆ ವಿಚಾರಿಸಿದ್ದರು. ಆಗ ನಿಮ್ಮನ್ನು ಭೇಟಿಯಾಗಲು ಬಯಸುತ್ತೇನೆ ಎಂದು ಶಕಿಬ್ ಹೇಳಿದ್ದರು. ಈ ಸಂಭಾಷಣೆಯಲ್ಲಿ ಹಲವು ಸಂದೇಶಗಳು ಅಳಿಸಲ್ಪಟ್ಟಿವೆ. ಅವೆಲ್ಲ ಮಾಹಿತಿಗಾಗಿ ಆತ ಕೇಳಿದ ಪ್ರಶ್ನೆಗಳು ಎಂದು ಶಕಿಬ್ ಬಾಯ್ಬಿಟ್ಟಿದ್ದಾರೆ.
ಬಾಂಗ್ಲಾ ಪತ್ರಿಕೆಗಳ ಪ್ರತಿಕ್ರಿಯೆ
ಶಕಿಬ್ ನಿಷೇಧ ಬಾಂಗ್ಲಾದ ಎಲ್ಲ ಪತ್ರಿಕೆಗಳಲ್ಲೂ ಮುಖಪುಟದ ಸುದ್ದಿಯಾಗಿದೆ.ದ ಡೈಲಿ ಸ್ಟಾರ್ ದಿನಪತ್ರಿಕೆ ಶಕಿಬ್ ಘಟನೆಯನ್ನು, ಬಾಂಗ್ಲಾ ಕ್ರಿಕೆಟ್ನ ಕರಾಳದಿನ ಎಂದು ವರ್ಣಿಸಿದೆ.
ಸಹ ಕ್ರಿಕೆಟಿಗರ ಬೆಂಬಲ
ಶಕಿಬ್ ನಿಷೇಧ ಆಘಾತ ಸೃಷ್ಟಿಸಿದರೂ ಬಾಂಗ್ಲಾ ಕ್ರಿಕೆಟಿಗರು ತಮ್ಮ ಮಾಜಿ ಆಟಗಾರನಿಗೆ ಬೆಂಬಲ ಸೂಚಿಸಿದ್ದಾರೆ. ಮುಶ್ಫಿàಕರ್ ರಹೀಂ ಭಾವುಕ ಸಂದೇಶ ಪ್ರಕಟಿಸಿ, “ನಿನ್ನೊಂದಿಗೆ ಕಳೆದ 18 ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದೇನೆ. ನೀನಿಲ್ಲದೆ ಮೈದಾನಕ್ಕಿಳಿಯುವುದು ನನಗೆ ಬಹಳ ಕಷ್ಟ. ನೀನು ಮತ್ತೆ ಚಾಂಪಿಯನ್ ರೀತಿ ಕ್ರಿಕೆಟ್ಗೆ ಮರಳುತ್ತೀಯ ಎಂಬ ನಂಬಿಕೆ ಇದೆ’ ಎಂದಿದ್ದಾರೆ.
ಏಕದಿನ ತಂಡದ ನಾಯಕ ಮಶ್ರಫೆ ಮೊರ್ತಜ, “ಈ ಘಟನೆಯಿಂದ ನಾನು ಹಲವು ದಿನ ನಿದ್ದೆಯಿಲ್ಲದೆ ಕಳೆಯುವುದು ಖಚಿತ. ಆದರೆ ಮತ್ತೆ ಶಾಂತಿಯಿಂದ ನಿದ್ರಿಸುವ ದಿನ ಬರಲಿದೆ. ನಿನ್ನ ನಾಯಕತ್ವದಲ್ಲೇ ಬಾಂಗ್ಲಾ 2023ರ ವಿಶ್ವಕಪ್ ಫೈನಲ್ನಲ್ಲಿ ಆಡುವ ಭರವಸೆ ಇದೆ’ ಎಂದಿದ್ದಾರೆ.
ಐಸಿಸಿಗೆ ಯಾಕೆ ತಿಳಿಸಲಿಲ್ಲ?
ಶಕಿಬ್ ಬುಕ್ಕಿಯೊಂದಿಗೆ ನಡೆಸಿದ ಸಂಭಾಷಣೆಗಳನ್ನು ಬಾಂಗ್ಲಾ ಕ್ರಿಕೆಟ್ ಮಂಡಳಿಯಾಗಲಿ, ಐಸಿಸಿಗಾಗಲಿ ತಿಳಿಸಲಿಲ್ಲ. ಇದಕ್ಕೆ ಆ ವ್ಯಕ್ತಿ ಬಗ್ಗೆ ಕಾಳಜಿಯಿದ್ದದ್ದೇ ಕಾರಣ. ಮುಂದೆ ಮಾತನಾಡುತ್ತ ಹೋದಂತೆ ಅಗರ್ವಾಲ್ ಬುಕ್ಕಿ ಇರಬಹುದು ಎಂಬ ಸಂದೇಹ ಶಕಿಬ್ಗ ಬಂದಿದೆ. ಆದರೆ ಅಷ್ಟೂ ಸಂಭಾಷಣೆಗಳಲ್ಲಿ ಒಮ್ಮೆಯೂ ತಾನು ಯಾವ ಮಾಹಿತಿಯನ್ನೂ ನೀಡಿಲ್ಲ, ಹಣವಾಗಲೀ ಇನ್ನಿತರ ಯಾವುದೇ ಉಡುಗೊರೆಯನ್ನಾಗಲಿ ಪಡೆದಿಲ್ಲ ಎಂದು ಖಚಿತಪಡಿಸಿದ್ದಾರೆ.