ಅಪಘಾತ: ಕ್ರಿಕೆಟಿಗ ಶಾರ್ದೂಲ್ ಠಾಕೂರ್ ಹೆತ್ತವರಿಗೆ ಗಾಯ
Team Udayavani, May 10, 2018, 7:40 AM IST
ಮುಂಬಯಿ: ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕ್ರಿಕೆಟಿಗ ಶಾರ್ದೂಲ್ ಠಾಕೂರ್ ಅವರ ಹೆತ್ತವರಿಗೆ ಗಾಯವಾಗಿದ್ದು, ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.
ಮುಂಬಯಿಯ ವೇಗಿ ಶಾರ್ದೂಲ್ ಠಾಕೂರ್ ಅವರ ತಂದೆ ನರೇಂದ್ರ ಠಾಕೂರ್ ಮತ್ತು ತಾಯಿ ಹನ್ಸಾ ಠಾಕೂರ್ ಮಾಹಿಮ್ ಗ್ರಾಮದತ್ತ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಕೆಲ್ವಾ-ಮಾಹಿಮ್ ರಸ್ತೆಯಲ್ಲಿ ಕಳೆದ ರಾತ್ರಿ ಈ ಅಪಘಾತ ಸಂಭವಿಸಿದೆ. ರಸ್ತೆ ಕಾಮಗಾರಿ ನಡೆಯುತ್ತಿದ್ದುದು ಗಮನಕ್ಕೆ ಬಾರದೇ ಇದ್ದುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಆಸ್ಪತ್ರೆಯಲ್ಲಿರುವುದರಿಂದ ಇವರಿಂದ ಇನ್ನೂ ಹೇಳಿಕೆ ಪಡೆಯಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಷಯ ತಿಳಿದ ಶಾರ್ದೂಲ್ ಠಾಕೂರ್ ಐಪಿಎಲ್ ಬಿಟ್ಟು ಸ್ಥಳಕ್ಕೆ ಧಾವಿಸಿದ್ದಾರೆ. ಪ್ರಸಕ್ತ ಐಪಿಎಲ್ನಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ ಪರ ಆಡುತ್ತಿದ್ದಾರೆ.