ಇಮ್ರಾನ್ ಫೋಟೋ ತೆಗೆಯಲು ನಿರಾಕರಿಸಿದ ಸೌರವ್ ಗಂಗೂಲಿ
Team Udayavani, Mar 7, 2019, 12:30 AM IST
ಕೋಲ್ಕತಾ: ಕಾಶ್ಮೀರದ ಪುಲ್ವಾಮಾದಲ್ಲಿ ಫೆ. 14ರಂದು ಭಾರತೀಯ ಯೋಧರ ಮೇಲೆ ಉಗ್ರರ ದಾಳಿಯನ್ನು ಖಂಡಿಸಿ ಪಾಕಿಸ್ಥಾನ ತಂಡದ ಮಾಜಿ ನಾಯಕ ಮತ್ತು ಪ್ರಧಾನಿ ಇಮ್ರಾನ್ ಖಾನ್ ಅವರ ಫೋಟೊ ಒಳಗೊಂಡಂತೆ ಪಾಕಿಸ್ಥಾನ ಕ್ರಿಕೆಟಿಗರ ಫೋಟೊಗಳನ್ನು ಭಾರತದಲ್ಲಿರುವ ಕ್ರಿಕೆಟ್ ಸ್ಟೇಡಿಯಂಗಳಿಂದ ತೆಗೆದು ಹಾಕಲಾಗಿದೆ. ಆದರೆ ಕೋಲ್ಕತಾದ ಈಡನ್ ಗಾರ್ಡನ್ನಲ್ಲಿರುವ ಇಮ್ರಾನ್ ಖಾನ್ ಫೋಟೊ ಹಾಗೆಯೇ ಉಳಿದುಕೊಂಡಿದೆ.
ಬೆಂಗಾಲ್ ಕ್ರಿಕೆಟ್ ಅಸೋಸಿಯೇಶನ್ನ ಅಧ್ಯಕ್ಷರಾಗಿರುವ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಇಮ್ರಾನ್ ಖಾನ್ ಅವರ ಫೋಟೋ ತೆಗೆಯಲು ನಿರಾಕರಿಸಿದ್ದಾರೆ. ಇದರಿಂದಾಗಿ ಅವರು ರಾಷ್ಟ್ರೀಯ ವಿರೋಧಿ ಎಂದು ಕರೆಸಿಕೊಂಡಿದ್ದಾರೆ. ಎರಡು ರಾಷ್ಟ್ರಗಳ ನಡುವಿನ ಉದ್ವಿಗ್ನತೆಯ ನಡುವೆ ಸಿಎಬಿ ಅಧ್ಯಕ್ಷ ಗಂಗೂಲಿ ಅವರ ಧೈರ್ಯ ರಾಜಕೀಯವಾಗಿ ತಿರುವು ಪಡೆದುಕೊಂಡಿದೆ. ಇವರ ಈ ನಡೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ.
ಈ ಹಿಂದೆ ಈ ಘಟನೆಯನ್ನು ಖಂಡಿಸಿ ಭಾರತೀಯ ಕ್ರಿಕೆಟ್ ಕ್ಲಬ್, ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂ, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಹಾಗೂ ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ಇಮ್ರಾನ್ ಖಾನ್ ಅವರ ಫೋಟೋಗಳನ್ನು ತೆಗೆದುಹಾಕಲಾಗಿತ್ತು.