ಧೋನಿ ಭವಿಷ್ಯಕ್ಕಾಗಿ ಗಂಗೂಲಿ ಸರ್ವಸ್ವವೇ ತ್ಯಾಗ
Team Udayavani, Oct 9, 2017, 7:00 AM IST
ನವದೆಹಲಿ: ಖ್ಯಾತ ಕ್ರಿಕೆಟಿಗ ಎಂ.ಎಸ್.ಧೋನಿ ಭವಿಷ್ಯಕ್ಕಾಗಿ ಮಾಜಿ ಭಾರತ ತಂಡದ ನಾಯಕ ಸೌರವ್ ಗಂಗೂಲಿ ಸರ್ವಸ್ವವನ್ನೇ ತ್ಯಾಗ ಮಾಡಿದ್ದರು. ಧೋನಿ ಇಂದು ಯಶಸ್ವಿ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಆಗಿದ್ದಾರೆ ಎಂದರೆ ಇದಕ್ಕೆಲ್ಲ ಕಾರಣ ಸೌರವ್ ಗಂಗೂಲಿ ತ್ಯಾಗ.
ಹೌದು. ಹೀಗೆಂದು ಟೀವಿ ಸಂದರ್ಶನವೊಂದರಲ್ಲಿ ಹೇಳಿದ್ದು ಬೇರಾರೂ ಅಲ್ಲ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹವಾಗ್. ಅವರು ಟೀವಿ ಸಂದರ್ಶನವೊಂದರಲ್ಲಿ ಈ ವಿಷಯವನ್ನು ತಿಳಿಸಿದರು. ಗಂಗೂಲಿ ನಾಯಕರಾಗಿದ್ದ ಸಂದರ್ಭದಲ್ಲಿ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡಿದ್ದವು. ಒಂದು ವೇಳೆ ನಿರೀಕ್ಷಿಸಿದಂತೆ ಉತ್ತಮ ಆರಂಭ ನಮಗೆ ಸಿಕ್ಕಿದರೆ ಗಂಗೂಲಿ 3ನೇ ಕ್ರಮಾಂಕದಲ್ಲಿ ಆಡಲಿಳಿಯುವುದು. ಉತ್ತಮ ಆರಂಭ ದೊರೆಯದಿದ್ದರೆ ಪಿಚ್ ಹಿಟ್ಟರ್ಗಳಾದ ಇರ್ಫಾನ್ ಪಠಾಣ್ ಅಥವಾ ಧೋನಿಯನ್ನು ಆಡಿಸುವುದು. ಧೋನಿಗೆ ಅವಕಾಶ ನೀಡದೆ 3ನೇ ಕ್ರಮಾಂಕದಲ್ಲಿ ಗಂಗೂಲಿಯೇ ಆಡಬಹುದಿತ್ತು. ಆದರೆ ಗಂಗೂಲಿ ಹಾಗೆ ಮಾಡಲಿಲ್ಲ. ಹೊಸ ಆಟಗಾರರಿಗೆ ಅವಕಾಶ ನೀಡಿದರು. ತಾನು ಆಡಬೇಕಿದ್ದ ಕ್ರಮಾಂಕದಲ್ಲಿ ಧೋನಿಯನ್ನು ಆಡಿಸಿದರು. ಒಂದು ವೇಳೆ ಅಂದು ಧೋನಿಗೆ ಅವಕಾಶ ಸಿಗದಿದ್ದರೆ ಇಂದು ದೊಡ್ಡ ಬ್ಯಾಟ್ಸ್ಮನ್ ಆಗಿ ಅವರು ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಗಂಗೂಲಿ ಕಾರ್ಯವೈಖರಿಯೇ ಹಾಗಿದೆ ಎಂದು ಸೆಹವಾಗ್ ತಿಳಿಸಿದರು.