ತಾರಾ ಆಟಗಾರರ ಹಣಿಯಲೆಂದೇ ಸಿದ್ಧವಾಗಿದೆ ವಿಶೇಷ ತಂತ್ರಗಾರಿಕೆ
Team Udayavani, Aug 18, 2017, 12:09 PM IST
ಅಹ್ಮದಾಬಾದ್: 5ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಅಚ್ಚರಿಯೊಂದು ಸದ್ದಿಲ್ಲದೇ ನಡೆಯುತ್ತಿದೆ. ಈಗಷ್ಟೇ ಅಭಿಮಾನಿಗಳ ಗಮನಕ್ಕೂ ಅದು ತುಸುತುಸುವೇ ಬರುತ್ತಿದೆ. ತಾರಾ ರೈಡರ್ಗಳು ಬಹುತೇಕ ವಿಫಲರಾಗುತ್ತಿದ್ದಾರೆ. ಹಿಂದಿನ ಅಷ್ಟೂ ಆವೃತ್ತಿಗಳಲ್ಲಿ ಅದ್ಭುತ ಯಶಸ್ಸು ಕಂಡಿದ್ದ ಅನೂಪ್ ಕುಮಾರ್, ರಾಹುಲ್ ಚೌಧರಿ, ಪ್ರದೀಪ್ ನರ್ವಾಲ್, ಜಾಂಗ್ ಕುನ್ ಲೀ, ಅಜಯ್ ಠಾಕೂರ್, ನಿತಿನ್ ತೋಮರ್ಗಳೆಲ್ಲ ವಿಫಲರಾಗುತ್ತಿದ್ದಾರೆ. ಇದೆಲ್ಲ ಸಹಜ ಬೆಳವಣಿಗೆಯಲ್ಲ. ಇದರ ಹಿಂದೆ ವ್ಯವಸ್ಥಿತವಾದ ತಂತ್ರಗಾರಿಕೆಯಿದೆ. ಈ ಆಟಗಾರರನ್ನು ಹಣಿಯಲೆಂದೇ ಪ್ರತೀ ಫ್ರಾಂಚೈಸಿಗಳು ವಿಶ್ಲೇಷಕರನ್ನು ನೇಮಕ ಮಾಡಿಕೊಂಡಿವೆ.
ಈ ವಿಶ್ಲೇಷಕರ ಕೆಲಸವೆ ತಾರಾ ಆಟಗಾರರನ್ನು ಕೆಡವಲು ತಂತ್ರ ರೂಪಿಸುವುದು! ಅಂದ ಹಾಗೆ ಕ್ರಿಕೆಟ್, ಫುಟ್ಬಾಲ್ಗಳಲ್ಲಿ ಈ ರೀತಿಯ ತಂತ್ರಗಾರಿಕೆಗಳೆಲ್ಲ ಬಹಳ ಹಳತು. ಇತ್ತೀಚೆಗಷ್ಟೇ ವಿಶ್ವದರ್ಜೆಗೇರುತ್ತಿರುವ ಕಬಡ್ಡಿ ಯಲ್ಲಿ ಈ ಆವೃತ್ತಿಯಿಂದ ಇಂತಹ ವಿಶ್ಲೇಷಕರನ್ನು ನೇಮಿಸಿಕೊಳ್ಳಲಾಗಿದೆ. ಇದು ಫ್ರಾಂಚೈಸಿಗಳ ಮಟ್ಟಿಗೆ ಧನಾತ್ಮಕ ಫಲಿತಾಂಶ ಬೀರಿದೆ ಎನ್ನುವುದು ಗಮನಿಸಬೇಕಾದ ಸಂಗತಿ. ಈ ಆವೃತ್ತಿಯಲ್ಲಿ ಎಲ್ಲ ತಂಡಗಳಲ್ಲಿಯೂ ವಿಶ್ಲೇಷಕರಿದ್ದಾರೆ. ಕೆಲವು ತಂಡಗಳಿಗೆ ಆಡಳಿತ ಮಂಡಳಿಗಳೇ ವಿಶ್ಲೇಷಕರನ್ನು ನೇಮಿಸಿವೆ. ಕೆಲವು
ತಂಡಗಳಿಗೆ ಕೋಚ್ಗಳೇ ವಿಶ್ಲೇಷಕರನ್ನು ನೇಮಿಸಿದ್ದಾರೆ. ಇನ್ನೂ ಕೆಲ ಫ್ರಾಂಚೈಸಿಗಳು ಖಾಸಗಿ ಕ್ರೀಡಾ ಕಂಪನಿಗಳ ವಿಶ್ಲೇಷಕರ ಜತೆ ಮೂರು ತಿಂಗಳ ಒಪ್ಪಂದ ಮಾಡಿಕೊಂಡಿವೆ.
ತಾರೆಯರೇ ಗುರಿ: ರಕ್ಷಣಾ ಆಟಗಾರರ ಗಮನ ತಾರಾ ರೈಡರ್ಗಳ ಮೇಲಿರುತ್ತದೆ. ತಾರೆಯರು ದಾಳಿಯನ್ನು ಅಂಕಣದ ಯಾವ ಭಾಗದಿಂದ ಆರಂಭಿಸುತ್ತಾನೆ. ಆಗ ಆತನ ಶಕ್ತಿ ಮತ್ತು ದೌರ್ಬಲ್ಯದ ಮೇಲೆ ಕಣ್ಣಿಡುತ್ತಾರೆ. ಇದರಿಂದ ದಾಳಿಯನ್ನು ವಿಫಲಗೊಳಿಸುವುದು ಸುಲಭವಾಗಿದೆ.
ವಿಶ್ಲೇಷಕರ ಕೆಲಸವೇನು?
ವಿಶ್ಲೇಷಕರು ನೀಡುವ ಅಂಕಿ ಅಂಶಗಳನ್ನು ಇಟ್ಟುಕೊಂಡು ಒಂದು ತಂಡದ ರಚನೆ ಸಿದ್ಧತಾಗುತ್ತದೆ. ಎದುರಾಳಿಯ ಆಡುವ ಬಳಗ ಹೇಗಿದೆ, ಯಾವ ಆಟಗಾರ ದಾಳಿಯಲ್ಲಿ, ರಕ್ಷಣೆಯಲ್ಲಿ ಹೇಗೆ, ಶಕ್ತಿ ಏನು? ದೌರ್ಬಲ್ಯ ಏನು? ಒಬ್ಬ ಆಟಗಾರನನ್ನು ಅದರಲ್ಲೂ ತಂಡದ ಮುಖ್ಯ ಆಟಗಾರನನ್ನು
ಹಣಿಯಲು ಯಾವ ತಂತ್ರಗಾರಿಕೆ ಅನುಸರಿಸಬೇಕು ಎಂಬ ಮಾಹಿತಿಯನ್ನು ವಿಶ್ಲೇಷಕರು ನೀಡಲುತ್ತಾರೆ. ಇದನ್ನಿಟ್ಟುಕೊಂಡೇ ಖೆಡ್ಡಾ ಸಿದ್ಧವಾಗುತ್ತದೆ. ಒಬ್ಬ ಆಟಗಾರನನ್ನು ಸಮಗ್ರವಾಗಿ ವಿಶ್ಲೇಷಕರು ಅಭ್ಯಸಿಸುತ್ತಾರೆ. ಆತನ ಹಿಂದಿನ ಪಂದ್ಯದ ವೀಡಿಯೋ ನೋಡುತ್ತಾರೆ. ತಂತ್ರಗಾರಿಕೆಯನ್ನು ತಿಳಿಯುತ್ತಾರೆ. ಹಾವಭಾವ, ಚಲನವಲನ, ಯಶಸ್ವಿ ಯಾದಾಗ ಹೇಗೆ ಪ್ರತಿಕ್ರಿಯಿಸು ತ್ತಾರೆ, ವಿಫಲವಾದಾಗ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಮಾನಸಿಕ ವಿಶ್ಲೇಷಣೆಗಳನ್ನೂ ಮಾಡುತ್ತಾರೆ. ಯಾವ ಆಟಗಾರನ ಮೇಲೆ ತಾರಾ ಆಟಗಾರ ಅವಲಂಬಿತನಾಗಿದ್ದೇನೆ, ಯಾವ ಜತೆಗಾರ ಜೊತೆಯಿ ದ್ದಾಗ ತಾರಾ ಆಟಗಾರ ಗರಿಷ್ಠ ಯಶಸ್ಸು ಸಾಧಿಸುತ್ತಾನೆ ಎಂಬ ಸೂಕ್ಷ್ಮ ವಿವರವನ್ನೂ ಪರಿಗಣಿಸುತ್ತಾರೆ. ಈ ಎಲ್ಲ ಅಂಶಗಳ ಮೂಲಕ ಒಂದು ಸಮಗ್ರ ಚಿತ್ರಣವನ್ನು ವಿಶ್ಲೇಷಕರು ಕಲೆ ಹಾಕುತ್ತಾರೆ. ಈ ಕುರಿತು ಆಟಗಾರರು ಬಯಸುವ ಎಲ್ಲ ಮಾಹಿತಿಯನ್ನೂ ನೀಡುತ್ತಾರೆ. ದಿಢೀರನೆ ಆಟಗಾರ ಬಯಸುವ ವೀಡಿಯೋಗಳನ್ನು ಒದಗಿಸುತ್ತಾರೆ.
ಉಪಯೋಗವೇನು?
ಕೋಚ್ಗಳಿಗೆ ತಂಡದ ರಣತಂತ್ರ ರೂಪಿಸಲು ಸುಲಭವಾಗುತ್ತದೆ. ಆಟಗಾರನಿಗೆ ನೀಡಬೇಕಾದ ಟಿಪ್ಪಣಿ ಬಗ್ಗೆ ಖಚಿತತೆ ಬರುತ್ತದೆ. ಆಡುವ ಅಂತಿಮ 7 ಮಂದಿಯನ್ನು ನಿರ್ಧರಿಸುವುದು ಸಾಧ್ಯವಾಗುತ್ತದೆ. ಫ್ರಾಂಚೈಸಿಗಳು ಬಿಡ್ ಮಾಡುವಾಗ ಈ ವಿಶ್ಲೇಷಕರ ನೆರವು ಪಡೆದೇ ಮುಂದುವರಿಯುತ್ತಾರೆ.
ನಮ್ಮ ತಂಡ ಮತ್ತು ಎದುರಾಳಿ ತಂಡದ ಬಲ, ದೌರ್ಬಲ್ಯವನ್ನು ವಿಡಿಯೋ ಮೂಲಕ ಗೊತ್ತು ಮಾಡುತ್ತೇವೆ. ಕೋಚ್, ಫ್ರಾಂಚೈಸಿ, ಆಟಗಾರರು ಮಾಹಿತಿ ಕೇಳಿದಾಗ ವಿಡಿಯೋ ಸಮೇತ ನೀಡುತ್ತೇವೆ. ವಿಶ್ಲೇಷಣೆ ಕೊಡುತ್ತೇವೆ. ಆಟಗಾರರು ಹೆಚ್ಚಿನದಾಗಿ ತಾರಾ ಆಟಗಾರರ ವಿಡಿಯೋಗಳನ್ನು ಕೇಳಿ ನೋಡುತ್ತಾರೆ. ಹಿಂದಿನ ಪಂದ್ಯಗಳಲ್ಲಿ ತಾವು ಮಾಡಿದ ತಪ್ಪುಗಳನ್ನು ನೋಡುತ್ತಾರೆ.
ನವೀನ್, ಯು.ಪಿ.ಯೋಧಾ ತಂಡದ ವಿಶ್ಲೇಷಕ
ಮಂಜು ಮಳಗುಳಿ