ಸೆ. 4-6: ಮೂಡಬಿದಿರೆಯಲ್ಲಿ ರಾಜ್ಯಮಟ್ಟದ ಆ್ಯತ್ಲೆಟಿಕ್ ಕೂಟ
Team Udayavani, Aug 31, 2017, 9:50 AM IST
ಮೂಡಬಿದಿರೆ: ಕರ್ನಾಟಕ ಆ್ಯತ್ಲೆಟಿಕ್ ಅಸೋಸಿಯೇಶನ್ ಹಾಗೂ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಸೆ.4ರಿಂದ 6ರವರೆಗೆ ಮೂಡಬಿದಿರೆಯ ಸ್ವರಾಜ್ಯ ಮೈದಾನದ ಸಿಂಥೆಟಿಕ್ ಟ್ರ್ಯಾಕ್ನಲ್ಲಿ ರಾಜ್ಯ ಜೂನಿಯರ್ ಮತ್ತು ಸೀನಿಯರ್ ಆ್ಯತ್ಲೆಟಿಕ್ ಕೂಟ ನಡೆಯಲಿದೆ ಎಂದು ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಾಲಕರು, ಬಾಲಕಿಯರ 14, 16, 18, 20 ವರ್ಷ ವಯೋಮಿತಿ ಹಾಗೂ ಪುರುಷರು, ಮಹಿಳೆಯರ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು ರಾಜ್ಯದ 34 ಜಿಲ್ಲೆಗಳಿಂದ ನೋಂದಾಯಿತ ಕ್ರೀಡಾ ಕ್ಲಬ್, ಕ್ರೀಡಾಶಾಲೆಗಳು, ಬೆಂಗಳೂರಿನ ಎಂ.ಐ.ಜಿ., ಏರ್ಫೋರ್ಸ್, ರೈಲ್ವೇ, ಅರಣ್ಯ ಇಲಾಖೆ ಮೊದಲಾದ ತಂಡಗಳು ಭಾಗವಹಿಸಲಿವೆ. ಜೂನಿಯರ್ನ 8, ಸೀನಿಯರ್ನ 2 ಹೀಗೆ 10 ವಿಭಾಗಗಳಲ್ಲಿ ತಂಡ ಪ್ರಶಸ್ತಿ ಹಾಗೂ ಸಮಗ್ರ ಚಾಂಪಿಯನ್ಶಿಪ್ಗಾಗಿ ರಾಜ್ಯದ ಸುಮಾರು 2,000 ಮಂದಿ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 500 ಮಂದಿ ಕ್ರೀಡಾಧಿಕಾರಿಗಳು ಸಹಕರಿಸಲಿದ್ದಾರೆ. ಈ ಕೂಟದಲ್ಲಿ ಕ್ರೀಡಾಳುಗಳು ತೋರುವ ನಿರ್ವಹಣೆಯ ಆಧಾರದಲ್ಲಿ ದಕ್ಷಿಣ ವಲಯ ಜೂ. ಕ್ರೀಡಾಕೂಟ, ರಾಷ್ಟ್ರೀಯ ಜೂ. ಕ್ರೀಡಾಕೂಟ ಹಾಗೂ ಮುಕ್ತ ರಾಷ್ಟ್ರೀಯ ಆ್ಯತ್ಲೆಟಿಕ್ ಕ್ರೀಡಾಕೂಟಗಳಿಗೆ ತಂಡದ ಆಯ್ಕೆಯನ್ನು ನಡೆಸಲಾಗುವುದು.
ಸೆ. 4ರಂದು ಬೆಳಗ್ಗೆ 10.30ಕ್ಕೆ ರಾಜ್ಯ ಆ್ಯತ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಡಾ| ಜಿ. ಪರಮೇಶ್ವರ್ ಕೂಟಕ್ಕೆ ಚಾಲನೆ ನೀಡಲಿದ್ದು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ , ಶಾಸಕ ಕೆ.ಅಭಯಚಂದ್ರ, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಹಾಗೂ ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಈ ಕೂಟದಲ್ಲಿ ಆಳ್ವಾಸ್ ವತಿಯಿಂದ ಕ್ರೀಡಾಳುಗಳು ಹಾಗೂ ಅಧಿಕಾರಿಗಳ ವಾಸ್ತವ್ಯ, ಊಟೋಪಚಾರ ವ್ಯವಸ್ಥೆಯನ್ನು ಪ್ರಾಯೋಜಿಸಲಾಗಿದೆ ಎಂದು ಅವರು ತಿಳಿಸಿದರು.