ರಾಜ್ಯದ ಮಾಜಿ ಪುಟ್ಬಾಲಿಗ ತಿರುಜ್ಞಾನಂ ಹಠಾತ್ ಸಾವು
Team Udayavani, Mar 29, 2019, 7:28 AM IST
ಬೆಂಗಳೂರು: ಸಂತೋಷ್ ಟ್ರೋಫಿಯಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ಫುಟ್ಬಾಲಿಗ ತಿರುಜ್ಞಾನಂ ಹಠಾತ್ ನಿಧನರಾಗಿದ್ದಾರೆ. ಅವರಿಗೆ 48 ವರ್ಷ ವಯಸ್ಸಾಗಿತ್ತು.
ಕೆಲವು ದಿನಗಳಿಂದ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಬೆಂಗಳೂರಿನ ವಿಲ್ಸನ್ ಗಾರ್ಡನ್ನಲ್ಲಿ ಗುರುವಾರ ಅಂತ್ಯಸಂಸ್ಕಾರ ನಡೆಸಲಾಯಿತು. 1994ರಲ್ಲಿ ತಿರುಜ್ಞಾನಂ ಸಂತೋಷ್ ಟ್ರೋಫಿ ಫುಟ್ಬಾಲ್ ಕೂಟದಲ್ಲಿ ರಾಜ್ಯ ತಂಡದ ಪರ ಪಾಲ್ಗೊಂಡಿದ್ದರು. ಇದಕ್ಕೂ ಮೊದಲು 1992ರಲ್ಲಿ 21 ವರ್ಷ ವಯೋಮಿತಿಯೊಳಗಿನ ಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. ಆ ಪಂದ್ಯದಲ್ಲಿ ಕರ್ನಾಟಕ ರನ್ನರ್ಅಪ್ ಆಗಿದ್ದನ್ನು ಸ್ಮರಿಸಬಹುದು. 1990ರಲ್ಲಿ ಅಂಡರ್ -19, ಬಳಿಕ ಅಂಡರ್ 16, ಅಂಡರ್ 12 ಕೂಟಗಳಲ್ಲಿ ರಾಜ್ಯ ತಂಡದ ಪರ ಆಡಿದ್ದರು. 1990ರಲ್ಲಿ ಸಿಐಎಲ್ ತಂಡದ ಪರ ಅತಿಥಿ ಆಟಗಾರನಾಗಿ ಆಡಿದ್ದರು. ಆನಂತರ ಕೆಜಿಎಫ್, ಬಿಇಎಂಎಲ್ ಹಾಗೂ ಕಲ್ಕತಾ ಎಫ್ಸಿಐ ಹಾಗೂ ಎಫ್ಸಿಐ ಬೆಂಗಳೂರು ತಂಡದ ಪರ ಆಡಿದ್ದರು