ಸುಪ್ರೀಂನಲ್ಲಿ ರಿಲೀಫ್;ವಿಷ್ಣು ಅವತಾರ, ಧೋನಿ ವಿರುದ್ಧದ ಪ್ರಕರಣ ರದ್ದು
Team Udayavani, Apr 20, 2017, 5:56 PM IST
ನವದೆಹಲಿ:ನಿಯತಕಾಲಿಕೆಯೊಂದರ ಮುಖಪುಟದಲ್ಲಿ ವಿಷ್ಣುವಿನ ಅವತಾರದಲ್ಲಿ ಕಾಣಿಸಿಕೊಂಡಿದ್ದ ವಿವಾದಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾದ ಮಾಜಿ ಕಪ್ತಾನ, ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಸುಪ್ರೀಂಕೋರ್ಟ್ ಗುರುವಾರ ರದ್ದುಪಡಿಸಿದೆ.
ವಾಣಿಜ್ಯ ನಿಯತಕಾಲಿಕೆಯೊಂದರ ಮುಖಪುಟದಲ್ಲಿ ವಿಷ್ಣುವಿನ ಅವತಾರದಲ್ಲಿ ಫೋಸ್ ಕೊಟ್ಟಿದ್ದ ಧೋನಿ ವಿರುದ್ಧ ಆಂಧ್ರಪ್ರದೇಶದ ನಿವಾಸಿಯೊಬ್ಬರು ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದ ರದ್ದು ಕೋರಿ ಧೋನಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂಕೋರ್ಟ್ ಪೀಠದ ನ್ಯಾ.ದೀಪಕ್ ಮಿಶ್ರಾ ಅವರು ಧೋನಿ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿ ಆದೇಶ ನೀಡಿದ್ದಾರೆ.
2013ರಲ್ಲಿ ಮಾರುಕಟ್ಟೆಗೆ ಬಂದಿದ್ದ ಮ್ಯಾಗಜೀನ್ ನಲ್ಲಿ ಧೋನಿ ವಿಷ್ಣುವಿನ ಅವತಾರದಲ್ಲಿದ್ದ ಫೋಟೋ ಪ್ರಕಟಗೊಂಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಅನಂತ್ ಪುರ್ ಕೋರ್ಟ್ ಧೋನಿ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.